ಹಿಂದಿ-ಕನ್ನಡ ರಣರಂಗಕ್ಕೆ ರಣಾವತ್; ಭಾರತದ ರಾಷ್ಟ್ರಭಾಷೆ ಆಗಬೇಕಂತೆ ಸಂಸ್ಕೃತ!?
ನವದೆಹಲಿ, ಏಪ್ರಿಲ್ 30: ಹಿಂದಿ ರಾಷ್ಟ್ರ ಭಾಷೆ ಎಂಬ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಸಂದೇಶಕ್ಕೆ ಸ್ಯಾಂಡಲ್ ವುಡ್ ನಟ ಸುದೀಪ್ ನೀಡಿರುವ ಪ್ರತ್ಯುತ್ತರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್, ಸಂಸ್ಕೃತ ಭಾಷೆಯು ನಮ್ಮ ಭಾರತದ ರಾಷ್ಟ್ರಭಾಷೆ ಆಗಬೇಕು ಎನ್ನುವ ಹೇಳಿಕೆ ನೀಡಿದ್ದಾರೆ.
ಧಕಡ್ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟಿ ಕಂಗನಾ ರಣಾವತ್, ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡಲಿಲ್ಲ. ಅದರ ಬದಲಿಗೆ ನಮ್ಮದು ಸಾಕಷ್ಟು ವೈವಿಧ್ಯತೆ, ಬಹು ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ದೇಶ. ಪ್ರತಿಯೊಬ್ಬರಿಗೂ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ಜನ್ಮ ಹಕ್ಕು ಇದೆ. ನಾನು ಪಹಾರಿ, ಮತ್ತು ನಾನು ಅದರಲ್ಲಿ ಹೆಮ್ಮೆಪಡುತ್ತೇನೆ ಎಂದರು.
"ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ": ಮಿನಸ್ಟರ್ ಬಾಯಲ್ಲಿ ಇಂಥಾ ಮಾತೇ!?
ಹಿಂದಿ ಮತ್ತು ಕನ್ನಡ ಭಾಷೆಯ ಕುರಿತು ವಿವಾದದ ನಡುವೆ ಹಿಂದಿಯೂ ಬೇಡ, ಕನ್ನಡವೂ ಬೇಡ, ಸಂಸ್ಕೃತವೇ ನಮ್ಮ ರಾಷ್ಟ್ರೀಯ ಭಾಷೆ ಆಗಬೇಕು ಎನ್ನುವ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಕ್ಕೆ ಮತ್ತೊಂದು ದಿಕ್ಕು ತೋರಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಭಾರತದ ರಾಷ್ಟ್ರಭಾಷೆ ಸಂಸ್ಕೃತ ಆಗಬೇಕು ಎಂದ ಕಂಗನಾ
ಸಂಸ್ಕೃತವು ಭಾರತದ ರಾಷ್ಟ್ರ ಭಾಷೆಯಾಗಬೇಕು ಎಂದು ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ. "ಯಾವ ಭಾಷೆ ರಾಷ್ಟ್ರಭಾಷೆಯಾಗಬೇಕು ಎಂದು ನೀವು ನನ್ನನ್ನು ಕೇಳಿದರೆ, ಅದು ಸಂಸ್ಕೃತವಾಗಿರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಸಂಸ್ಕೃತವು ಕನ್ನಡ, ತಮಿಳು, ಗುಜರಾತಿ ಅಥವಾ ಹಿಂದಿಗಿಂತ ಪುರಾತನವಾಗಿದ್ದಾಗಿದೆ. ಈ ಎಲ್ಲಾ ಭಾಷೆಗಳು ಸಂಸ್ಕೃತದಿಂದ ಬಂದಿವೆ. ಹಾಗಾದರೆ ಸಂಸ್ಕೃತ ಏಕೆ ರಾಷ್ಟ್ರ ಭಾಷೆಯಾಗಿಲ್ಲ ಮತ್ತು ಹಿಂದಿ ಏಕೆ ರಾಷ್ಟ್ರ ಭಾಷೆಯಾಗಿಲ್ಲ? ಎಂದರೆ ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ಇವೆಲ್ಲ ಸಂವಿಧಾನ ರಚನೆ ಸಂದರ್ಭದಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು," ಎಂದು ಹೇಳಿದರು.
"ಹಿಂದಿಯನ್ನು ನಿರಾಕರಿಸಿದರೆ ದೆಹಲಿ ಸರ್ಕಾರವನ್ನೇ ನಿರಾಕರಿಸಿದಂತೆ"
ಒಂದು ವೇಳೆ ನೀವು ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರೆ, ಅದು ಕೇಂದ್ರ ಸರ್ಕಾರವನ್ನು ಧಿಕ್ಕರಿಸಿದಂತೆ ಎಂದು ನಟಿ ಕಂಗನಾ ರಣಾವತ್ ಹೇಳಿದರು. "ನೀವು ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಿಕೊಳ್ಳದಿದ್ದರೆ, 'ದೆಹಲಿ ಕಿ ಸರ್ಕಾರ್' ಅನ್ನು ನಿರಾಕರಿಸುತ್ತೀರಿ ಎಂದರ್ಥ. ನೀವು ದೆಹಲಿಯನ್ನು ಕೇಂದ್ರವೆಂದು ಪರಿಗಣಿಸುವುದಿಲ್ಲ. ಯಾವುದೇ ಹೊಸ ನಿರ್ಮಾಣಗಳು ನಡೆದರೂ, ಯಾವುದೇ ಕಾಯ್ದೆಗಳನ್ನು ಜಾರಿಗೊಳಿಸಲಾಗಿದ್ದರೂ ಅದೆಲ್ಲ ದೆಹಲಿಯಲ್ಲೇ ನಡೆಯುತ್ತದೆ ಹಾಗೂ ಅದನ್ನು ಹಿಂದಿಯಲ್ಲೇ ಮಾಡಲಾಗುತ್ತದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಅಂಜಯ್ ದೇವಗನ್ ಹೇಳಿಕೆಗೆ ಕಂಗನಾ ಬೆಂಬಲ
ಹಿಂದಿ ಹೇಗೆ ಭಾರತದ ರಾಷ್ಟ್ರೀಯ ಭಾಷೆಯಾಗಿದೆ ಎಂಬುದರ ಕುರಿತು ನಟ ಅಜಯ್ ದೇವಗನ್ ನೀಡಿರುವ ಹೇಳಿಕೆಗೆ ಕಂಗನಾ ರಣಾವತ್ ಬೆಂಬಲ ಸೂಚಿಸಿದರು, ಆದರೆ ಸಂಸ್ಕೃತವು ಭಾರತದ ರಾಷ್ಟ್ರೀಯ ಭಾಷೆಯಾಗಬೇಕು ಎಂದು ಹೇಳಿದರು. "ನೀವು ದೇಶದ ಮೂಲಕ ಪ್ರಯಾಣಿಸಿದಾಗ ಅಥವಾ ಜರ್ಮನ್, ಸ್ಪ್ಯಾನಿಷ್ ಅಥವಾ ಫ್ರೆಂಚ್ ದೇಶಗಳಿಗೆ ಹೋದಾಗ, ಅವರು ತಮ್ಮ ಭಾಷೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ. ವಸಾಹತುಶಾಹಿ ಇತಿಹಾಸವು ಎಷ್ಟೇ ಕರಾಳವಾಗಿರಲಿ, ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ಇಂಗ್ಲಿಷ್ ಆ ಕೊಂಡಿಯಾಗಿ ಮಾರ್ಪಟ್ಟಿದೆ. ಇಂದು ಈ ದೇಶದೊಳಗೆ ನಾವು ಸಂವಹನ ಮಾಡಲು ಇಂಗ್ಲಿಷ್ ಬಳಸುತ್ತಿದ್ದೇವೆ. ಅದು ಸಂಭಾಷಣೆಯ ಕೊಂಡಿ ಆಗಬೇಕೇ ಅಥವಾ ಹಿಂದಿ ಅಥವಾ ಸಂಸ್ಕೃತ ಅಥವಾ ತಮಿಳು ಆ ಸ್ಥಾನವನ್ನು ತುಂಬಬೇಕೇ ಎಂಬ ತೀರ್ಮಾನವನ್ನು ನಾವೇ ತೆಗೆದುಕೊಳ್ಳಬೇಕಿದೆ. ಆದ್ದರಿಂದ, ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಸದ್ಯ ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರ ಭಾಷೆಯಾಗಿದೆ. ಹಾಗಾಗಿ ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಜಿ ಹೇಳಿದ್ದು ತಪ್ಪಲ್ಲ," ಎಂದಿದ್ದಾರೆ.
ಸಂಸ್ಕೃತವೇ ರಾಷ್ಟ್ರಭಾಷೆ ಆಗಬೇಕು ಎಂದಿದ್ದೇಕೆ ಕಂಗನಾ?
ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿರುವುದರಿಂದ ಸಂಸ್ಕೃತ ನಮ್ಮ ರಾಷ್ಟ್ರೀಯ ಭಾಷೆಯಾಗಬೇಕು. ನಮ್ಮಲ್ಲಿ ಸಂಸ್ಕೃತ ಏಕೆ ರಾಷ್ಟ್ರಭಾಷೆ ಆಗಿಲ್ಲ? ಶಾಲೆಗಳಲ್ಲಿ ಏಕೆ ಕಡ್ಡಾಯವಾಗಿಲ್ಲ? ಅದು ನನಗೆ ಗೊತ್ತಿಲ್ಲ!," ಎಂದು ಕಂಗನಾ ರಣಾವತ್ ಹೇಳಿದ್ದಾರೆ. ದಕ್ಷಿಣ ಭಾರತದ ನಟರು ಅಂತಿಮವಾಗಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಪಡೆಯುತ್ತಿದ್ದಾರೆ ಎಂದು. ಸಾಮಾನ್ಯವಾಗಿ ದಕ್ಷಿಣ ಭಾರತದ ಚಲನಚಿತ್ರಗಳು ಮತ್ತು ನಟರ ಬಗ್ಗೆ ದೇಶದಲ್ಲಿ ಯಾವಾಗಲೂ ಮಲತಾಯಿಯ ಧೋರಣೆ ತೋರಲಾಗುತ್ತಿತ್ತು ಎಂದು ಕಂಗನಾ ಹೇಳಿದರು.
ಹಿಂದಿ ಭಾಷಾ ವಿವಾದ ಹುಟ್ಟಿಕೊಂಡಿರುವುದರ ಮೂಲ?
ಕೆಜಿಎಫ್ ಚಾಪ್ಟರ್ 2ರ ಯಶಸ್ಸಿನ ಕುರಿತು ನಟ ಕಿಚ್ಚ ಸುದೀಪ್ ಟೀಕೆ ಬಗ್ಗೆ ಅಜಯ್ ದೇವಗನ್ ಮಾಡಿದ ಟ್ವೀಟ್ನೊಂದಿಗೆ ಹಿಂದಿಯ ಮೇಲಿನ ವಿವಾದ ಶುರುವಾಯಿತು. ಕೆಲವು ದಿನಗಳ ಹಿಂದೆ, ಸುದೀಪ್ ಬಾಲಿವುಡ್ ದಕ್ಷಿಣ ಭಾರತದ ಭಾಷೆಗಳಲ್ಲಿ ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಿ ಬಿಡುಗಡೆಗೊಳಿಸುವ ಮೂಲಕ ದಕ್ಷಿಣದ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹಿಂದಿ "ಇನ್ನು ಮುಂದೆ ರಾಷ್ಟ್ರ ಭಾಷೆಯಲ್ಲ" ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದು, ಹಾಗಿದ್ದರೆ ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗುವುದೇಕೆ ಎಂದು ಸುದೀಪ್ ಅವರನ್ನು ಪ್ರಶ್ನಿಸಿದ್ದರು. "ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ, ಹಾಗಾದರೆ ನಿಮ್ಮ ಮಾತೃಭಾಷೆಯಲ್ಲಿ ಚಲನಚಿತ್ರಗಳನ್ನು ಏಕೆ ಡಬ್ ಮಾಡಲಾಗುತ್ತದೆ. ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆ, ಮತ್ತು ಅದು ಯಾವಾಗಲೂ ಹಾಗೆಯೇ ಇರುತ್ತದೆ. ಜನ ಗಣ ಮನ" ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದರು.
ದೇವಗನ್ ಟ್ವೀಟ್ ಸಂದೇಶಕ್ಕೆ ಸುದೀಪ್ ತಿರುಗೇಟು:
ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದೇವೆ ಎಂದಿದ್ದೀರಿ. ನಾನು ಒಂದು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ಇನ್ನು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್ ನವರು ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ ಯಶಸ್ಸು ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ, ಆದರೆ ಅದು ಆಗುತ್ತಿಲ್ಲ,'' ಎಂದು ಸುದೀಪ್ ಹೇಳಿದ್ದಾರೆ.