Breaking: ಸುಪ್ರೀಂಕೋರ್ಟ್ನ 49ನೇ ಸಿಜೆಐ ಆಗಿ ಯು.ಯು. ಲಲಿತ್ ನೇಮಕ
ನವದೆಹಲಿ,ಆಗಸ್ಟ್ 10: ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಆಗಸ್ಟ್ 10ರ ಬುಧವಾರ ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕಗೊಂಡಿದ್ದಾರೆ.
ಯು. ಯು. ಲಲಿತ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಬಳಿಕ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನ್ಯಾಯಮೂರ್ತಿ ಯು. ಯು. ಲಲಿತ್ ಬಾರ್ ಕೌನ್ಸಿಲ್ನಿಂದ ನೇರವಾಗಿ ಸುಪ್ರೀಂಕೋರ್ಟ್ ಪೀಠವೇರಿದ ಎರಡನೇ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ನ್ಯಾಯಮೂರ್ತಿ ಯು. ಯು. ಲಲಿತ್ ಆಗಸ್ಟ್ 27 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ಎನ್. ವಿ. ರಮಣ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.
Justice UU Lalit Profile : ತಲಾಖ್ ತೀರ್ಪು ಕೊಟ್ಟವರು... ನೂತನ ಸಿಜೆಐ ಲಲಿತ್ ಪರಿಚಯ
ಆಗಸ್ಟ್ 3ರಂದು ಮುಖ್ಯ ನ್ಯಾಯೂರ್ತಿ ಎನ್. ವಿ. ರಮಣಗೆ ಕೇಂದ್ರ ಕಾನೂನು ಸಚಿವಾಲಯ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹೆಸರು ಹೆಸರನ್ನು ಶಿಫಾರಸು ಮಾಡುವಂತೆ ಪತ್ರ ಬರೆದಿತ್ತು. ಸುಪ್ರೀಂಕೋರ್ಟ್ನ ಎರಡನೇ ಹಿರಿಯ ನ್ಯಾಯಮೂರ್ತಿಯಾದ ಯು. ಯು. ಲಲಿತ್ ಹೆಸರು ಶಿಫಾರಸು ಮಾಡಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.
49ನೇ ಸಿಜೆಐ ಆಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಯು. ಯು. ಲಲಿತ್ ನವೆಂಬರ್ 8, 2022 ರಂದು ನಿವೃತ್ತರಾಗಲಿದ್ದಾರೆ. ಆಗಸ್ಟ್ 13, 2014 ರಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕವಾಗುವ ಮೊದಲು ಯು. ಯು. ಲಲಿತ್ ಸುಪ್ರೀಂಕೋರ್ಟ್ ಹಿರಿಯ ವಕೀಲರಾಗಿದ್ದರು. ಅವರ ತಂದೆ ನ್ಯಾಯಮೂರ್ತಿ ಯು. ಆರ್. ಲಲಿತ್ ಸಹ ವಕೀಲರಾಗಿದ್ದರು ಮತ್ತು ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿದ್ದರು.
ನ್ಯಾಯಮೂರ್ತಿ ಯು. ಯು. ಲಲಿತ್ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಸಂವಿಧಾನಿಕ ಪೀಠದ ಭಾಗವಾಗಿದ್ದರು. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತವನ್ನು ತಿರುವಾಂಕೂರು ರಾಜಮನೆತನದಿಂದ ನ್ಯಾಯಾಲಯ ನೇಮಿಸಿದ ಆಡಳಿತ ಸಮಿತಿಗೆ ಹಸ್ತಾಂತರಿಸುವಂತೆ ಆದೇಶಿಸಿದ ಪೀಠದ ನೇತೃತ್ವವನ್ನೂ ಅವರು ವಹಿಸಿದ್ದರು.
ಕಳೆದ ವರ್ಷ ಅವರ ನೇತೃತ್ವದ ಪೀಠವು ಬಾಂಬೆ ಹೈಕೋರ್ಟ್ನ ವಿವಾದಾತ್ಮಕ ತೀರ್ಪನ್ನು ರದ್ದುಗೊಳಿಸಿತ್ತು. ಲೈಂಗಿಕ ಉದ್ದೇಶದಿಂದ ಅಪ್ರಾಪ್ತರೊಂದಿಗೆ ಯಾವುದೇ ದೈಹಿಕ ಸಂಪರ್ಕವು ಪೋಕ್ಸೋ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
ಮರಣದಂಡನೆಯನ್ನು ನೀಡುವಲ್ಲಿ ವ್ಯಕ್ತಿನಿಷ್ಠತೆಯ ಅಂಶವನ್ನು ಕಡಿಮೆ ಮಾಡಲು ಸರಿಯಾದ ಮಾರ್ಗಸೂಚಿಗಳನ್ನು ಹಾಕುವ ಅಗತ್ಯವನ್ನು ನ್ಯಾಯಮೂರ್ತಿ ಯು. ಯು. ಲಲಿತ್ ಇತ್ತೀಚೆಗೆ ವ್ಯಕ್ತಪಡಿಸಿದ್ದರು.