ಶಿಕ್ಷೆಯಿಂದ ಪರಿಹಾರ ನೀಡಿ: ಸುಪ್ರೀಂಗೆ ಕರ್ಣನ್ ಮನವಿ
ನವದೆಹಲಿ, ಮೇ 11: ತಮ್ಮ ವಿರುದ್ಧ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿರುವ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿರುವ ಪಶ್ಚಿಮ ಬಂಗಾಳ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್, ತಮಗೆ ಶಿಕ್ಷೆಯಿಂದ ಪರಿಹಾರ ನೀಡಬೇಕೆಂದು ಕೋರಿದ್ದಾರೆ.
ಅವರ ಈ ಮನವಿಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಪರಿಗಣಿಸಲಿದ್ದಾರೆ.[6 ತಿಂಗಳ ಜೈಲು ಶಿಕ್ಷೆಗೆ ಗುರಿಯಾದ ನ್ಯಾ. ಕರ್ಣನ್ ವಿದೇಶಕ್ಕೆ ಪಲಾಯನ?]
ನ್ಯಾ. ಖೆಹರ್ ವಿರುದ್ಧವೇ ಹರಿಹಾಯ್ದಿದ್ದ ನ್ಯಾ. ಕರ್ಣನ್, ಖೆಹರ್ ಅವರಿಗೆ ಜೈಲು ಶಿಕ್ಷೆ ಪ್ರಕಟಿಸಿದ್ದರು. ಇದೀಗ, ಅವರಿಗೇ ತಮ್ಮ ವಿರುದ್ಧದ ಶಿಕ್ಷೆಯಿಂದ ಪರಿಹಾರ ನೀಡಬೇಕೆಂದು ಕೋರಿದ್ದಾರೆ.
ನ್ಯಾಯಾಲಯದ ಆದೇಶಗಳನ್ನು ಸತತವಾಗಿ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಎರಡು ದಿನಗಳ ಹಿಂದೆ ಕರ್ಣನ್ ವಿರುದ್ಧ ಆರು ತಿಂಗಳ ಬಂಧನ ಆದೇಶ ನೀಡಿತ್ತು.[ನ್ಯಾ. ಕರ್ಣನ್ ಗಾಗಿ ಶೋಧ ನಡೆಸಿ ಸುಸ್ತಾದ ಪೊಲೀಸರು]
ಅವರನ್ನು ಬಂಧಿಸಲು ಪಶ್ಚಿಮ ಬಂಗಾಳದ ಪೊಲೀಸರು, ಕರ್ಣನ್ ಅವರನ್ನು ಹುಡುಕಿಕೊಂಡು ಚೆನ್ನೈಗೆ (ಕರ್ಣನ್ ಅವರ ನಿವಾಸವಿರುವ ನಗರ) ಬಂದಿದ್ದರೂ, ಕರ್ಣನ್ ಸಿಕ್ಕಿರಲಿಲ್ಲ. ಅವರು ವಿದೇಶಕ್ಕೆ ಹಾರಿ ಹೋಗಿದ್ದಾರೆಂಬ ಅನುಮಾನಗಳೂ ಹುಟ್ಟಿಕೊಂಡಿದ್ದವು.