ಸುಪ್ರಿಂಗೆ ಸಡ್ಡು ಹೊಡೆದ ಮದ್ರಾಸ್ ನ್ಯಾಯಮೂರ್ತಿ ಕರ್ಣನ್
ಸುಪ್ರಿಂ ಕೊರ್ಟಿಗೆ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಮತ್ತೆ ಸಡ್ಡು ಹೊಡೆದಿದ್ದಾರೆ. ಸರ್ವೋಚ್ಛ ನ್ಯಾಯಾಲಯದಿಂದ ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ಕರ್ಣನ್ ಇಂದು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಮೂಲಕ ಸುಪ್ರಿಂ ಆದೇಶವನ್ನೇ ತಿರಸ್ಕರಿಸಿದ್ದಾರೆ
ನವದೆಹಲಿ, ಫೆಬ್ರವರಿ 13: ಸುಪ್ರಿಂ ಕೊರ್ಟಿಗೆ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಮತ್ತೆ ಸಡ್ಡು ಹೊಡೆದಿದ್ದಾರೆ. ಸರ್ವೋಚ್ಛ ನ್ಯಾಯಾಲಯದಿಂದ ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ಕರ್ಣನ್ ಇಂದು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಮೂಲಕ ಸುಪ್ರಿಂ ಆದೇಶವನ್ನೇ ತಿರಸ್ಕರಿಸಿದ್ದಾರೆ.
ಸಪ್ತ ನ್ಯಾಯಾಧೀಶರ ನ್ಯಾಯಪೀಠದ ಮುಂದೆ ಸೋಮವಾರ ಹಾಜರಾಗುವಂತೆ ಹಾಲಿ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಗೆ ಈ ಹಿಂದೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಕ್ಯಾರೇ ಎನ್ನದ ನ್ಯಾಯಮೂರ್ತಿ ಕರ್ಣನ್ ಕೋರ್ಟಿನಿಂದ ದೂರವೇ ಉಳಿದಿದ್ದಾರೆ. ಇದೀಗ ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್ ಗೆ ಉತ್ತರಿಸಲು ಮಾರ್ಚ್ 10ರವರೆಗೆ ಕಾಲಾವಕಾಶ ನೀಡಲಾಗಿದೆ.[ಸೌಜನ್ಯ ಪ್ರಕರಣ: ಹೆಚ್ಚಿನ ತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ]
ಕಳೆದ ಬುಧವಾರ ಕೊಲ್ಕತ್ತಾ ನ್ಯಾಯಾಧೀಶ ಕರ್ಣನ್ ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಲಾಗಿತ್ತು. ಇದರಲ್ಲಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಏಳು ನ್ಯಾಯಾಧೀಶರ ನ್ಯಾಯಪೀಠದ ಮುಂದೆ ಫೆಬ್ರವರಿ 13ರಂದು ಹಾಜರಾಗುವಂತೆ ಸೂಚಿಸಲಾಗಿತ್ತು. ಹಾಜರಾಗುವ ಸಂದರ್ಭ, 'ನಿಮ್ಮ ಮೇಲೆ ಯಾಕೆ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಬಾರದು' ಎಂಬ ಪ್ರಶ್ನೆಗೆ ಉತ್ತರಿಸುವಂತೆ ಕರ್ಣನ್ ಗೆ ಸೂಚಿಸಿತ್ತು.[ನ್ಯಾ. ವಿಶ್ವನಾಥ್ ಶೆಟ್ಟಿ ಹೊಸ ಲೋಕಾಯುಕ್ತ]
ನ್ಯಾಯಮೂರ್ತಿ ಕರ್ಣನ್ ಅವರನ್ನು ಎಲ್ಲಾ ನ್ಯಾಯಾಂಗ ಕೆಲಸಗಳಿಂದ ಬಿಡುಗಡೆ ಮಾಡಿರುವ ಸುಪ್ರಿಂ ಕೋರ್ಟ್ ಅವರ ಬಳಿ ಇರುವ ಎಲ್ಲಾ ಕಡತಗಳನ್ನು ಕೊಲ್ಕೊತ್ತಾ ಹೈಕೋರ್ಟಿನ ರಿಜಿಸ್ಟ್ರಾರ್ ಗೆ ವಾಪಾಸು ಮಾಡುವಂತೆ ಸೂಚನೆ ನೀಡಿದೆ. ನ್ಯಾಯಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿ ನ್ಯಾಯಾಧೀಶರೊಬ್ಬರ ಮೇಲೆಯೇ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡಲಾಗಿದೆ.
ಇದರ ಮಧ್ಯೆ ಜನವರಿ 23ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರವನ್ನೂ ಬರೆದಿರುವ ಕರ್ಣನ್ ಹಾಲಿ ನ್ಯಾಯಧೀಶರೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಪತ್ರದಲ್ಲಿ ಕೇಳಿಕೊಂಡಿದ್ದು, ನ್ಯಾಯಧೀಶರ ಮೇಲೆ ತನಿಖೆ ನಡೆಸುವಂತೆಯೂ ಹೇಳಿದ್ದಾರೆ.
ಈ ಹಿಂದೆ ನಾನು ದಲಿತ ಎನ್ನುವ ಕಾರಣಕ್ಕೆ ನನ್ನನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಕರ್ಣನ್ ಹೇಳುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದರು. ಮಾತ್ರವಲ್ಲದೆ ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿದ್ದ ತಮ್ಮನ್ನು ಕೊಲ್ಕೊತ್ತಾಗೆ ವರ್ಗಾವಣೆ ಮಾಡಿದ 'ಕೊಲಿಜಿಯಂ' ಬಗ್ಗೆಯೂ ಕರ್ಣನ್ ಆಕ್ಷೇಪ ವ್ಯಕ್ತಪಡಿಸಿದ್ದರು. ನಾನು ಕೊಲ್ಕೊತ್ತಾಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಬೇರೆ ಕೂತಿದ್ದರು. ಆದರೆ ಹಾಗೂ ಹೀಗೂ ಕೊನೆಗೆ ಕೊಲ್ಕೊತ್ತಾ ಹೋದರಾದರೂ ತಮ್ಮ ಹಳೆಯ ಚಾಳಿ ಮುಂದುವರಿಸಿದ್ದರು. ಮದ್ರಾಸ್ ಹೈಕೋರ್ಟಿನ ತಮ್ಮ ಸಹೋದ್ಯೋಗಿ ನ್ಯಾಯಾಧೀಶರು ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಅವರು ಮಾಡಿದ್ದರು.