7 ಜಡ್ಜುಗಳ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಿದ ನ್ಯಾ. ಕರ್ಣನ್!
ಸೋಮವಾರ ಕರ್ಣನ್ ವೈದ್ಯಕೀಯ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಸಪ್ತ ನ್ಯಾಯಮೂರ್ತಿಗಳ ಪೀಠ ಆದೇಶ ನೀಡಿತ್ತು. ಆದರೆ ವೈದ್ಯಕೀಯ ಪರೀಕ್ಷೆ ತೆಗೆದುಕೊಳ್ಳಲು ನ್ಯಾ. ಕರ್ಣನ್ ನಿರಾಕರಿಸಿದ್ದರು. ಇದೀಗ ಆದೇಶ ನೀಡಿದವರ ವಿರುದ್ಧವೇ ವಾರಂಟ್ ಹೊರಡಿಸಿದ್ದಾರೆ.
ನವದೆಹಲಿ, ಮೇ 3: ನ್ಯಾಯಮೂರ್ತಿ ಕರ್ಣನ್ ರ ಮಾನಸಿಕ ಸ್ಥಿಮಿತ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಿಗೆ ಕೊಲ್ಕೊತ್ತಾ ಹೈಕೋರ್ಟಿನ ನ್ಯಾ. ಕರ್ಣನ್ ತಿರುಗಿ ಬಿದ್ದಿದ್ದಾರೆ. ಆದೇಶ ಹೊರಡಿಸಿದ ಸುಪ್ರೀಂ ಕೋರ್ಟಿನ 7 ನ್ಯಾಯಮೂರ್ತಿಗಳ ವಿರುದ್ಧ ಅವರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.
ತಮ್ಮ ಆದೇಶದಲ್ಲಿ ಕೊಲ್ಕತ್ತಾ ಹೈಕೋರ್ಟಿನ ರಿಜಿಸ್ಟಾರ್ ಗೆ ಏಳೂ ಜನರಿಗೆ ನಾನ್ ಬೇಲೇಬಲ್ ವಾರಂಟ್ ನೊಟೀಸ್ ನೀಡುವಂತೆ ಆದೇಶ ನೀಡಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರು ಅಥವಾ ನವದೆಹಲಿ ಪೊಲೀಸ್ ಕಮಿಷನರ್ ಮೂಲಕ ಈ ನೊಟೀಸ್ ನೀಡುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ನಿರಂತರವಾಗಿ ನ್ಯಾಯಾಲಯಕ್ಕೆ ಗೈರು ಹಾಜಾರಾದ ಹಾಗೂ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡದ ಹಿನ್ನಲೆಯಲ್ಲಿ ನ್ಯಾಯಮೂರ್ತಿಗಳ ಮೇಲೆ ವಾರಂಟ್ ಹೊರಡಿಸಲಾಗಿದೆ. ಇನ್ನು ಈ ವಾರಂಟ್ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್, ನ್ಯಾ. ದೀಪಕ್ ಮಿಶ್ರಾ, ನ್ಯಾ. ಜೆ ಚೆಲಮೇಶ್ವರ್, ನ್ಯಾ. ರಂಜನ್ ಗೊಗೋಯಿ, ನ್ಯಾ. ಮದನ್ ಬಿ ಲೋಕೂರ್, ನ್ಯಾ. ಪಿನಾಕಿ ಚಂದ್ರ ಘೋಷ್, ನ್ಯಾ. ಕುರಿಯನ್ ಜೋಸೆಫ್ ಸೇರಿದ್ದಾರೆ.
ಸೋಮವಾರವಷ್ಟೇ ಕರ್ಣನ್ ವೈದ್ಯಕೀಯ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಸಪ್ತ ನ್ಯಾಯಮೂರ್ತಿಗಳ ಪೀಠ ಆದೇಶ ನೀಡಿತ್ತು. ಆದರೆ ವೈದ್ಯಕೀಯ ಪರೀಕ್ಷೆ ತೆಗೆದುಕೊಳ್ಳಲು ನ್ಯಾ. ಕರ್ಣನ್ ನಿರಾಕರಿಸಿದ್ದರು. ಎಸ್ಸಿ/ಎಸ್ಟಿ ಕಾಯ್ದೆ ಜಾರಿಯನ್ನು ತಪ್ಪಿಸಿಕೊಳ್ಳಲು ಸುಪ್ರೀಂ ಕೋರ್ಟ್ ತಮ್ಮ ಮೇಲೆ ವೈದ್ಯಕೀಯ ಪರಿಕ್ಷೆಗೆ ಆದೇಶ ನೀಡಿದೆ ಎಂದು ಕರ್ಣನ್ ಈ ಹಿಂದೆ ಆರೋಪಿಸಿದ್ದರು.