2027ರಲ್ಲಿ ಭಾರತದ ಪ್ರಥಮ ಮಹಿಳಾ ಸಿಜೆಐ ಆಗಲಿದ್ದಾರೆ ಬಿ.ವಿ. ನಾಗರತ್ನ
ನವದೆಹಲಿ, ಆಗಸ್ಟ್ 18: ಪ್ರಸ್ತುತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿರುವ ಬಿ.ವಿ. ನಾಗರತ್ನ ಅವರು 2027ರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಹಾದಿಯಲ್ಲಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಒಂಬತ್ತು ನ್ಯಾಯಾಧೀಶರ ಹೆಸರನ್ನು ಮಂಗಳವಾರ ಸಂಜೆ ಉನ್ನತ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ. ಆ ಪೈಕಿ ಮೂವರು ಮಹಿಳಾ ನ್ಯಾಯಾಧೀಶರಲ್ಲಿ ನಾಗರತ್ನ ಅವರ ಹೆಸರು ಇದೆ.
ಈ ಸಮಯದಲ್ಲಿ ಕೊಲಿಜಿಯಂ ಸಭೆ ಏಕೆ? ಸಿಜೆಐ ನಿರ್ಧಾರಕ್ಕೆ ನ್ಯಾಯಮೂರ್ತಿಗಳ ಆಕ್ಷೇಪ
ಪ್ರಸ್ತುತ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶೆಯಾಗಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ. ನ್ಯಾಯಮೂರ್ತಿ ಹಿಮಾ ಕೋಹಿ ಹಾಗೂ ಬೇಲಾ ತ್ರಿವೇದಿ, ಶಿಫಾರಸು ಪಟ್ಟಿಯಲ್ಲಿರುವ ಇನ್ನಿಬ್ಬರು ಮಹಿಳಾ ನ್ಯಾಯಾಧೀಶರಾಗಿದ್ದಾರೆ.
ಭಾರತದಲ್ಲಿ ಮಹಿಳಾ ಮುಖ್ಯ ನ್ಯಾಯಮೂರ್ತಿಗಳ ನೇಮಕವಾಗಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದೆ.
ತಮ್ಮ ನಿವೃತ್ತಿಗೂ ಮುನ್ನ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, "ಭಾರತಕ್ಕೆ ಮಹಿಳಾ ಮುಖ್ಯ ನ್ಯಾಯಾಧೀಶರನ್ನು ಪಡೆಯುವ ಸಮಯ ಬಂದಿದೆ" ಎಂದು ಹೇಳಿದ್ದರು.
"ದೇಶದಲ್ಲಿ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಯಾಗಬೇಕೆಂಬ ಆಸಕ್ತಿ ಇದೆ ಹಾಗೂ ಆ ಉದ್ದೇಶವನ್ನು ಉತ್ತಮವಾಗಿ ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಉತ್ತಮ ಅಭ್ಯರ್ಥಿಗಳು ಸಿಗಬೇಕು ಎನ್ನುವ ಒಂದೇ ವಿಷಯ ನಮ್ಮ ಮುಂದಿದೆ" ಎಂದು ಏಪ್ರಿಲ್ ತಿಂಗಳಿನಲ್ಲಿ ಅವರು ಹೇಳಿದ್ದರು.
ಸುಪ್ರೀಂಕೋರ್ಟ್ನ ಮುಂದಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು. ಆದರೆ ಇನ್ನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರುವ ಸಿಜೆಐ ಬೊಬ್ಡೆ ಯಾವುದೇ ಶಿಫಾರಸುಗಳನ್ನು ಮಾಡುವುದು ಸರಿಯಲ್ಲ ಎಂದು ಕೊಲಿಜಿಯಂನಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ನ್ಯಾ. ಎನ್ವಿ ರಮಣ ಮುಂದಿನ ಸಿಜೆಐ: ರಾಷ್ಟ್ರಪತಿ ಕೋವಿಂದ್ ಅಂಕಿತ
1962ರಲ್ಲಿ ಜನಿಸಿದ ನಾಗರತ್ನ ಅವರು 1987ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. ಅವರನ್ನು 2008ರಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಎರಡು ವರ್ಷಗಳ ನಂತರ ಕಾಯಂ ನ್ಯಾಯಾಧೀಶರಾಗಿ ನಿಯೋಜಿಸಲಾಯಿತು. ನಾಗರತ್ನ ಅವರ ತಂದೆ ಇಎಸ್ ವೆಂಕಟರಾಮಯ್ಯ ಅವರು 1989ರಲ್ಲಿ ಆರು ತಿಂಗಳ ಕಾಲ ಸಿಜೆಐ ಆಗಿದ್ದರು.
2027ರಲ್ಲಿ ಸಿಜೆಐ ಆಗಿ ಇವರು ನೇಮಕವಾದರೆ, ದೇಶದ ನ್ಯಾಯಾಂಗಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಎಸ್ ನರಸಿಂಹ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುತ್ತಾರೆ.
ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ನಾಥ್, ಜೆ.ಕೆ. ಮಹೇಶ್ವರಿ, ಸಿ.ಟಿ. ರವಿಕುಮಾರ್ ಮತ್ತು ಎಂಎಂ ಸುಂದರೇಶ್, ಐದು ಸದಸ್ಯರ ಕೊಲಿಜಿಯಂ ಶಿಫಾರಸು ಮಾಡಿದ ಇತರೆ ನ್ಯಾಯಾಧೀಶರಾಗಿದ್ದಾರೆ.
ಈ ಹಿಂದೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಬಗ್ಗೆ ಪ್ರಸ್ತಾಪವಾಗಿದ್ದು, ಕೊಲಿಜಿಯಂನಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ನಾಗರತ್ನ ಅವರಿಗೆ ಬಡ್ತಿ ನೀಡಿದರೆ ಅವರಿಗಿಂತ ಹಿರಿಯರಾದ ದೇಶದ ಅನೇಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ನಾಗರತ್ನ ಅವರು ಈಗಲೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರೆ 2027ರಲ್ಲಿ ಭಾರತದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಲಿದ್ದಾರೆ. 2027ರಲ್ಲಿ ಹಿರಿತನದ ಆಧಾರದಲ್ಲಿ ನಾಗರತ್ನ ಅವರು ಹುದ್ದೆ ಅಲಂಕರಿಸಬಹುದಾಗಿದೆ.
ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಇದುವರೆಗೂ ಮಹಿಳಾ ನ್ಯಾಯಮೂರ್ತಿ ಈ ಉನ್ನತ ಹುದ್ದೆಗೆ ಏರಿರಲಿಲ್ಲ. ಈ ಶಿಫಾರಸಿಗೆ ಅನುಮೋದನೆ ನೀಡಿದರೆ, ತಂದೆ ಹಾಗೂ ಮಗಳಿಬ್ಬರೂ ಸಿಜೆಐ ಆದ ಮತ್ತೊಂದು ದಾಖಲೆ ಸೃಷ್ಟಿಯಾಗಲಿದೆ.