ಸುಪ್ರೀಂಕೋರ್ಟ್ಗೆ ವಿದಾಯ ಹೇಳಿದ ನ್ಯಾಯಮೂರ್ತಿ ಅರುಣ್ ಮಿಶ್ರಾ
ನವದೆಹಲಿ, ಸೆಪ್ಟೆಂಬರ್ 2: ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಹುದ್ದೆಯಿಂದ ಬುಧವಾರ ನಿವೃತ್ತರಾದರು. ತಮ್ಮ ಕರ್ತವ್ಯದ ಅವಧಿಯಲ್ಲಿ ಅವರು ಸುಮಾರು 1 ಲಕ್ಷ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ.
Recommended Video
ಆರು ವರ್ಷಗಳ ಕಾಲ ಸುಪ್ರೀಂಕೋರ್ಟ್ನಲ್ಲಿದ್ದ ಅವರು ಅನೇಕ ವಿವಾದಾತ್ಮಕ ಪ್ರಕರಣಗಳ ತೀರ್ಪುಗಳನ್ನು ಸಹ ನೀಡಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕಲ್ಕತ್ತಾ ಹೈಕೋರ್ಟ್ಗಳಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಅವರು, 2014ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಪ್ರಕರಣಗಳಲ್ಲಿ ಅವರು ನೀಡಿರುವ ತೀರ್ಪುಗಳು ವ್ಯಾಪಕ ಚರ್ಚೆಗೊಳಗಾಗಿದ್ದವು.
ಮೋದಿ ದಾರ್ಶನಿಕ, ಬಹುಮುಖ ಪ್ರತಿಭೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶ್ಲಾಘನೆ
21 ವರ್ಷ ವಿವಿಧ ನ್ಯಾಯಾಲಯಗಳಲ್ಲಿ ವಕೀಲರಾಗಿ ಕೆಲಸ ಮಾಡಿದ್ದ ಅವರು, 1999ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. ರಾಜಸ್ಥಾನ ಮತ್ತು ಕಲ್ಕತ್ತಾ ಹೈಕೋರ್ಟ್ಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವರನ್ನು 2014ರ ಜುಲೈನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೊಲಿಜಿಯಂ ಅನುಮೋದಿಸಿತ್ತು. ಮುಂದೆ ಓದಿ...
ಕಾನೂನು ಕುಟುಂಬ!
ವಿದೇಶದಲ್ಲಿ ಕಾನೂನು ಪದವಿ ಪಡೆದಿದ್ದ ಅರುಣ್ ಮಿಶ್ರಾ, ರಾಜಸ್ಥಾನದ ಹೈಕೋರ್ಟ್ನಲ್ಲಿ ಕಾನೂನು ಮ್ಯೂಸಿಯಂ ಉದ್ಘಾಟಿಸಿದ್ದರು. ವಕೀಲರಿಗಾಗಿ ಅಖಿಲ ಭಾರತ ಮಟ್ಟದಲ್ಲಿ ನಿಧಿಯೊಂದನ್ನು ಸ್ಥಾಪಿಸಿದ್ದರು. ಅರುಣ್ ಮಿಶ್ರಾ ಮಧ್ಯಪ್ರದೇಶದ ಜಬಲ್ಪುರದಲ್ಲಿನ ವಕೀಲರು ಮತ್ತು ನ್ಯಾಯಾಧೀಶರ ಕುಟುಂಬದಿಂದ ಬಂದವರು. ಅವರ ತಂದೆ ಎಚ್ಜಿ ಮಿಶ್ರಾ ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದರು. ಸಹೋದರ ವಿಶಾಲ್ ಮಿಶ್ರಾ ಇತ್ತೀಚೆಗಷ್ಟೇ ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಪದನ್ನೋತಿ ಪಡೆದಿದ್ದಾರೆ. ಅವರ ಮಗಳು ಕೂಡ ವಕೀಲಿಕೆ ಅಭ್ಯಾಸ ಮಾಡುತ್ತಿದ್ದಾರೆ.
ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ
2018ರಲ್ಲಿ ಅರುಣ್ ಮಿಶ್ರಾ ಅವರೆಡೆಗೆ ಇಡೀ ದೇಶದ ಗಮನ ಕೇಂದ್ರೀಕರಿಸಿತ್ತು. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ಜೆ. ಚೆಲಮೇಶ್ವರ್, ಕುರಿಯನ್ ಜೋಸೆಫ್ ಮತ್ತು ಮದನ್ ಬಿ ಲೋಕುರ್ ಪತ್ರಿಕಾಗೋಷ್ಠಿ ನಡೆಸಿ, ಸುಪ್ರೀಂಕೋರ್ಟ್ ನಡೆಯುತ್ತಿರುವ ಬಗೆಯನ್ನು ಪ್ರಶ್ನಿಸಿದ್ದರು. ಇದರಲ್ಲಿ ನೇರವಾಗಿ ಯಾರ ಹೆಸರು ಪ್ರಸ್ತಾಪಿಸದೆ ಹೋದರೂ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನ್ಯಾಯಪೀಠಕ್ಕೆ ಸಂಬಂಧಿಸಿದ ಪ್ರಕರಣಗಳನ್ನೇ ಮುಖ್ಯವಾಗಿ ಉಲ್ಲೇಖಿಸಿದ್ದರು. ಕೆಲವು ಪ್ರಕರಣಗಳು 'ಕಿರಿಯ ನ್ಯಾಯಮೂರ್ತಿಗಳ' ಪೀಠಕ್ಕೆ ಹಂಚಿಕೆಯಾಗುತ್ತಿರುವುದರ ಬಗ್ಗೆ ನ್ಯಾಯಮೂರ್ತಿಗಳ ಗುಂಪು ಆಕ್ಷೇಪ ವ್ಯಕ್ತಪಡಿಸಿತ್ತು.
ನಿವೃತ್ತಿ ಬಳಿಕ ನ್ಯಾಯಾಧೀಶರು ಸರ್ಕಾರಿ ಹುದ್ದೆಗೆ ಏರಬಾರದು- ದೀಪಕ್ ಗುಪ್ತಾ
ಪ್ರಮುಖ ಪ್ರಕರಣಗಳು
ಗುಜರಾತ್ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣ, ಸಿಬಿಐನ ಆಂತರಿಕ ಕಿತ್ತಾಟದ ಪ್ರಕರಣ, ವೈದ್ಯಕೀಯ ಕಾಲೇಜಿನ ಲಂಚ ಪ್ರಕರಣ, ಸಿಜೆಐ ರಂಜನ್ ಗೊಗೊಯ್ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣ, ಸಹಾರ-ಬಿರ್ಲಾ ಡೈರಿ ಪ್ರಕರಣ, ಭೂಸ್ವಾಧೀನ ಪ್ರಕರಣ ಮುಂತಾದವು ಅವರು ನಿರ್ವಹಿಸಿದ ಪ್ರಮುಖ ಪ್ರಕರಣಗಳು. ಇತ್ತೀಚೆಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ಅವರಿಗೆ 1 ರೂ. ದಂಡ ವಿಧಿಸಿದ್ದು ಹೆಚ್ಚು ಸುದ್ದಿಯಾಗಿತ್ತು.
ಪ್ರಧಾನಿ ಮೋದಿ ಬಹುಮುಖ ಪ್ರತಿಭೆ
ಸುಪ್ರೀಂಕೋರ್ಟ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಬಹುಮುಖಿ ಪ್ರತಿಭೆ' ಎಂದು ಅರುಣ್ ಮಿಶ್ರಾ ಕೊಂಡಾಡಿದ್ದು, ವ್ಯಾಪಕ ಟೀಕೆಗೆ ಒಳಗಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ವಿಚಾರಣೆಯೊಂದರ ಸಂದರ್ಭದಲ್ಲಿ, 'ನೀವು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಬಯಸುತ್ತೀರಾ? ಆದರೆ ನನ್ನನ್ನು ಟೀಕಿಸಲಾಗುತ್ತದೆ' ಎಂದು ಹಿರಿಯ ವಕೀಲರೊಬ್ಬರಿಗೆ ಹೇಳಿದ್ದರು.