'ಜುಲೈ ಬಂದಿದೆ, ಆದರೆ ಲಸಿಕೆ ಬಂದಿಲ್ಲ' ಎಂದ ರಾಹುಲ್ ವಿರುದ್ದ ಕೇಂದ್ರ ಸಚಿವರ ತರಾಟೆ
ನವದೆಹಲಿ, ಜು. 02: ಈಗಾಗಲೇ ಕೇಂದ್ರ ಸಚಿವರುಗಳು ಕೊರೊನಾ ಲಸಿಕೆ ವಿಚಾರದಲ್ಲಿ ಹಲವಾರು ಟ್ವೀಟ್ಗಳನ್ನು ಮಾಡುತ್ತಲ್ಲೇ ಇದ್ದಾರೆ. ಲಸಿಕೆ ವೇಗ ಹೆಚ್ಚಾಗಿದೆ ಎಂದು ಹೇಳುತ್ತಾಲೂ ಇದ್ದಾರೆ. ಈ ನಡುವೆ ಲಸಿಕೆ ನೀತಿಯ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿದ ಟ್ವೀಟ್ ವಿರುದ್ದ ಕಿಡಿಕಾರಿರುವ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಹುಲ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ಲಸಿಕೆ ವಿಚಾರದಲ್ಲಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ''ಜುಲೈ ತಿಂಗಳು ಬಂದಿದೆ, ಆದರೆ ಲಸಿಕೆ ಬಂದಿಲ್ಲ,'' ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ರಾಹುಲ್ ಗಾಂಧಿ ನಿರಂತರವಾಗಿ ಕೇಂದ್ರ ಸರ್ಕಾರದ ಲಸಿಕೆ ನೀತಿಯ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.
ನಾಚಿಕೆಯಿಲ್ಲದ ರಾಜಕೀಯ ಬಿಡಿ: ಲಸಿಕೆ ಹೇಳಿಕೆ ಬಗ್ಗೆ ಸಚಿವ ಹರ್ಷವರ್ಧನ್
ಈ ಟ್ವೀಟ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ''ಕೊರೊನಾ ವಿರುದ್ದದ ಗಂಭೀರ ಹೋರಾಟದ ಸಂದರ್ಭ ಈ ಸಣ್ಣ ರಾಜಕಾರಣ ಸರಿಯಲ್ಲ,'' ಎಂದು ಹೇಳಿದರೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಲು ತೀಕ್ಷ್ಣವಾಗಿ, ''ರಾಹುಲ್ ಗಾಂಧಿ ಓದುವುದಿಲ್ಲವೇ,'' ಎಂದು ಪ್ರಶ್ನಿಸಿದ್ದಾರೆ.
|
''ಸಣ್ಣ ರಾಜಕಾರಣ ಈ ಸಮಯದಲ್ಲಿ ಸೂಕ್ತವಲ್ಲ''
ಈ ಬಗ್ಗೆ ಟ್ವೀಟ್ ಮಾಡಿರುವ ಪಿಯೂಷ್ ಗೋಯಲ್, ''ಜುಲೈನಲ್ಲಿ 120 ಮಿಲಿಯನ್ ಡೋಸ್ ಲಸಿಕೆ ಲಭ್ಯವಿರುತ್ತದೆ. ಇದು ಖಾಸಗಿ ಆಸ್ಪತ್ರೆಗಳಿಂದ ಸರಬರಾಜುಗಿಂತ ಭಿನ್ನವಾಗಿದೆ. ಸರಬರಾಜು ಬಗ್ಗೆ 15 ದಿನಗಳ ಮುಂಚಿತವಾಗಿ ರಾಜ್ಯಗಳಿಗೆ ತಿಳಿಸಲಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗಂಭೀರವಾಗಿರುವ ಬದಲಾಗಿ ಸಣ್ಣ ರಾಜಕಾರಣದ ಪ್ರದರ್ಶನ ಈ ಸಮಯದಲ್ಲಿ ಸೂಕ್ತವಲ್ಲ ಎಂದು ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಬೇಕು,'' ಎಂದು ಹೇಳಿದ್ದಾರೆ.
|
ರಾಹುಲ್ ವಿರುದ್ದ ಹರ್ಷವರ್ಧನ್ ಟೀಕೆ
ರಾಹುಲ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ''ನಿನ್ನೆ, ನಾನು ಜುಲೈ ತಿಂಗಳ ಲಸಿಕೆ ಲಭ್ಯತೆಯ ಬಗ್ಗೆ ಸತ್ಯಾಂಶವನ್ನು ತಿಳಿಸಿದ್ದೇನೆ. ಹಾಗಿರುವಾಗ ರಾಹುಲ್ ಗಾಂಧಿ ಜಿ ಅವರ ಸಮಸ್ಯೆ ಏನು? ಅವರು ಓದುವುದಿಲ್ಲವೇ? ಅವರಿಗೆ ಅರ್ಥವಾಗುತ್ತಿಲ್ಲವೇ?,'' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ ''ದುರಹಂಕಾರ ಮತ್ತು ಅಜ್ಞಾನದ ವೈರಸ್ಗೆ ಲಸಿಕೆ ಇಲ್ಲ, ಕಾಂಗ್ರೆಸ್ ತನ್ನ ನಾಯಕತ್ವದ ಕೂಲಂಕುಷ ಪರೀಕ್ಷೆಯ ಬಗ್ಗೆ ಯೋಚಿಸಬೇಕು,'' ಎಂದು ಲೇವಡಿ ಮಾಡಿದ್ದಾರೆ.
ಜೂನ್ನಲ್ಲಿ ಲಸಿಕೆ ನೀಡಿಕೆ ದ್ವಿಗುಣ: ಇನ್ನೂ ಹೆಚ್ಚಬೇಕಿದೆ ವೇಗ
|
ಗುರುವಾರ ಟ್ವೀಟ್ ಮಾಡಿದ್ದ ಆರೋಗ್ಯ ಸಚಿವ
ಇನ್ನು ಗುರುವಾರ ಕೊರೊನಾ ಲಸಿಕೆ ವಿಚಾರದಲ್ಲಿ ಯಾವುದೇ ನಾಯಕರುಗಳ ಹೆಸರನ್ನು ಉಲ್ಲೇಖ ಮಾಡದೆಯೇ, ಕೇಂದ್ರ ಆರೋಗ್ಯ ಸಚಿವರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದರು. ''ಅತೀ ದೊಡ್ಡ ಕೊರೊನಾ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ವಿವಿಧ ನಾಯಕರ ಬೇಜವಾಬ್ದಾರಿ ಹೇಳಿಕೆಗಳನ್ನು ನಾನು ನೋಡುತ್ತಿದ್ದೇನೆ. ಕೆಳಗೆ ನಾವು ಈ ಸತ್ಯಗಳನ್ನು ಉಲ್ಲೇಖಿಸಿದ್ದು, ಜನರು ಈ ನಾಯಕರ ಉದ್ದೇಶಗಳನ್ನು ನಿರ್ಣಯಿಸಬಹುದು. ಜೂನ್ನಿಂದ ಲಸಿಕೆ ಅಭಿಯಾನದ ವೇಗವು ಹೆಚ್ಚಿದೆ. ದೇಶದಲ್ಲಿ ಶೇ.75 ರಷ್ಟು ಲಸಿಕೆಗಳನ್ನು ಉಚಿತವಾಗಿ ಒದಗಿಸಿದ ನಂತರ 11.50 ಕೋಟಿ ಪ್ರಮಾಣವನ್ನು ಜೂನ್ನಲ್ಲಿ ನೀಡಲಾಗಿದೆ,'' ಎಂದು ತಿಳಿಸಿದ್ದರು.
''ಜುಲೈಗೆ ಕೋವಿಡ್ ಲಸಿಕೆ ಸರಬರಾಜು ಬಗ್ಗೆ ರಾಜ್ಯಗಳಿಗೆ ಮೊದಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು 15 ದಿನಗಳ ಮೊದಲು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ. ಒಟ್ಟು 12 ಕೋಟಿ ಡೋಸೇಜ್ಗಳು ಜುಲೈನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಯ ಪೂರೈಕೆ ಇದಕ್ಕಿಂತ ಹೆಚ್ಚಾಗಿರುತ್ತದೆ,'' ಎಂದು ಹೇಳಿದ್ದರು. ''ಈ ನಾಯಕರು ಈ ಸಂಗತಿಗಳ ಬಗ್ಗೆ ತಿಳಿದಿದ್ದರೂ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದರೆ, ನಾನು ಅದನ್ನು ಅತ್ಯಂತ ದುರದೃಷ್ಟಕರವೆಂದು ಭಾವಿಸುತ್ತೇನೆ. ಜನರಲ್ಲಿ ಆತಂಕ ಸೃಷ್ಟಿಸುವುದಕ್ಕೆ ಗಮನ ಹರಿಸುವುದಲ್ಲ, ಆ ನಾಯಕರುಗಳು ಆಡಳಿತದತ್ತ ಗಮನ ಹರಿಸಬೇಕು. ಯೋಜನೆಗೆ ಹೆಚ್ಚಿನ ಶಕ್ತಿಯನ್ನು ವ್ಯಯಿಸುವಂತೆ ರಾಜ್ಯ ನಾಯಕರನ್ನು ಮತ್ತೆ ವಿನಂತಿಸುತ್ತೇವೆ,'' ಎಂದಿದ್ದರು.
ಲಸಿಕೆ ಕೊರತೆ ನಿಜವೇ?
ವರದಿಗಳ ಪ್ರಕಾರ, ಲಸಿಕೆ ಪ್ರಮಾಣಗಳ ಪೂರೈಕೆ ವಿಚಾರದಲ್ಲಿ ರಾಜ್ಯಗಳು ಮತ್ತು ಕೇಂದ್ರದ ನಡುವೆ ಇನ್ನೂ ವಿವಾದವಿದೆ. ಕೆಲವು ರಾಜ್ಯಗಳು ಡೋಸೇಜ್ ಕೊರತೆಯಿಂದಾಗಿ ಲಸಿಕೆ ಕೇಂದ್ರಗಳನ್ನು ಮುಚ್ಚಲು ಆರಂಭಿಸಿದೆ. ಕಳೆದ ವಾರ, ಬಂಗಾಳವು ಆದ್ಯತೆಯ ಗುಂಪುಗಳಿಗೆ ಮಾತ್ರ ಲಸಿಕೆ ನೀಡುವುದಾಗಿ ಹೇಳಿದೆ. ದೇಶದಲ್ಲಿ ಒಟ್ಟು 32,91,58,139 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. 5,77,48,116 ಮಂದಿ ಎರಡೂ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ. ಈ ವರ್ಷವಧಿಯಲ್ಲಿ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಇನ್ನೂ ಲಸಿಕೆ ವೇಗವು ಹೆಚ್ಚಾಗಬೇಕಿದೆ. ಶೇಕಡವಾರು ದತ್ತಾಂಶದ ಪ್ರಕಾರ ಈವರೆಗೆ ಶೇ.6.34 ಮಂದಿ ಭಾರತೀಯರು ಮಾತ್ರ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಇನ್ನೂ ಕೂಡಾ 60,44,83,981 ಮಂದಿ ಲಸಿಕೆ ಹಾಕಿಸಿಲ್ಲ.
(ಒನ್ಇಂಡಿಯಾ ಸುದ್ದಿ)