ನ್ಯಾ. ಲೋಯಾ ಹೃದಯಾಘಾತದಿಂದ ಸತ್ತಿಲ್ಲ: ಸುಪ್ರೀಂಗೆ ಪ್ರಶಾಂತ್ ಭೂಷಣ್
ನವದೆಹಲಿ, ಮಾರ್ಚ್ 5: ನ್ಯಾ, ಲೋಯಾ ಹೃದಯಾಘಾತದಿಂದ ಸತ್ತಿಲ್ಲ ಎನ್ನುವುದಕ್ಕೆ ವೈದ್ಯಕೀಯ ಪುರಾವಗಳಿವೆ ಎಂದು ಸುಪ್ರೀಂ ಕೋರ್ಟ್ ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ನಾನು ಆರ್.ಟಿ.ಐ ಮತ್ತು ಮತ್ತು ವೈದ್ಯರಿಂದ ದಾಖಲೆಗಳನ್ನು ಪಡೆದುಕೊಂಡಿದ್ದೇನೆ. ಈ ದಾಖಲೆಗಳ ಪ್ರಕಾರ ನ್ಯಾಯಾಧೀಶರು ಹೃದಯಾಘಾತದಿಂದ ಸತ್ತಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದ್ದು ಗುರುವಾರ ವಿಚಾರಣೆಗೆ ಸಮಯ ನಿಗದಿಪಡಿಸಿದೆ.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ಆವರಣದಲ್ಲಿ ದೊಡ್ಡ ಡ್ರಾಮವೇ ಜರುಗಿತು. ಹಿರಿಯ ವಕೀಲ ದುಷ್ಯಂತ ದಾವೆ, ನ್ಯಾಯಮೂರ್ತಿಗಳು ಪವಿತ್ರ ಗೋವುಗಳಲ್ಲ ಎಂದು ಹೇಳಿದರು. ಜಿಲ್ಲಾ ನ್ಯಾಯಧೀಶರು ಲೋಯಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿರಯವಾಗಲೇ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದರು ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದರು ತುಷಾರ್ ಮೆಹ್ತಾ, ನ್ಯಾಯಾಲಯದ ಓರ್ವ ಅಧಿಕಾರಿಯಾಗಿ ಅವರು ಅಪರಾಧವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ತಿರುಗೇಟು ನೀಡಿದ ದಾವೆ, ಮೆಹ್ತಾ ನ್ಯಾಯಾಲಯದ ಅಧಿಕಾರಿಯಲ್ಲ. ಅವರು ಅಮಿತ್ ಶಾ ವಕೀಲರು ಎಂದು ಹೇಳಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಚಂದ್ರಚೂಡ್, ನಾವು ಈ ಹೇಳಿಕೆಗಳಿಂದ ಏನನ್ನೂ ತೆಗೆದುಕೊಳ್ಳುತ್ತಿಲ್ಲ. ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ಆದೇಶಗಳನ್ನು ನೀಡಲು ನಾವು ಸಿದ್ದವಿಲ್ಲ ಎಂದರು.