ಸುಳ್ಳು ಸುದ್ದಿ ಮಾಡುವ ಪತ್ರಕರ್ತರ ಮಾನ್ಯತಾ ಪತ್ರ ರದ್ದು
ನವದೆಹಲಿ, ಏಪ್ರಿಲ್ 2: ಸುಳ್ಳು ಸುದ್ದಿ ಮಾಡುವ ಪತ್ರಕರ್ತರ ಮಾನ್ಯತೆ (ಅಕ್ರೆಡಿಷನ್) ರದ್ದು ಮಾಡುವುದಾಗಿ ಕೇಂದ್ರ ಸರಕಾರ ಸೋಮವಾರ ಹೇಳಿದೆ. ಸುಳ್ಳು ಸುದ್ದಿ ಸೃಷ್ಟಿ ಮಾಡುವ ಅಥವಾ ಹಬ್ಬಿಸುವ ಪತ್ರಕರ್ತರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.
ಪತ್ರಕರ್ತರ ಮಾನ್ಯತೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳಲ್ಲಿ ತಿದ್ದುಪಡಿ ತರಲಾಗಿದ್ದು, ಯಾವುದೇ ಪ್ರಕಟಣೆ ಅಥವಾ ಪ್ರಸಾರವು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿರುವುದು ಖಾತ್ರಿಯಾದರೆ ಅಂಥ ಪತ್ರಕರ್ತರ ಮಾನ್ಯತೆಯನ್ನು ರದ್ದು ಮಾಡಲಾಗುವುದು.
ಪತ್ರಕರ್ತರಿಗೆ ಬಜೆಟ್ ನಲ್ಲಿ 'ಮಾಧ್ಯಮ ಸಂಜೀವಿನಿ' ಜೀವ ವಿಮೆ ಘೋಷಣೆ
ಮೊದಲ ಬಾರಿಯ ತಪ್ಪಿಗೆ ಆರು ತಿಂಗಳು, ಎರಡನೇ ಸಲಕ್ಕೆ ಒಂದು ವರ್ಷ, ಮೂರನೇ ಬಾರಿಗೆ ಶಾಶ್ವತವಾಗಿ ಮಾನ್ಯತೆ ರದ್ದು ಮಾಡಲಾಗುವುದು ಎಂದು ತಿಳಿಸಲಾಗಿದೆ.
ಮುದ್ರಣ ಮಾಧ್ಯಮಗಳ ವಿರುದ್ಧ ಬರುವ ದೂರುಗಳನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಹಾಗೂ ವಿದ್ಯುನ್ಮಾನ ಮಾಧ್ಯಮದ ವಿರುದ್ಧದ ದೂರುಗಳನ್ನು ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ ನಿರ್ಧಾರ ಮಾಡುತ್ತದೆ. ಈ ತೀರ್ಮಾನವು ದೂರು ಬಂದು ಹದಿನೈದು ದಿನದೊಳಗೆ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಪತ್ರಕರ್ತರ ವಿರುದ್ಧ ದೂರು ದಾಖಲಾದ ನಂತರ ಸುಳ್ಳು ಸುದ್ದಿ ಹೌದೋ ಅಥವಾ ಅಲ್ಲವೋ ಎಂದು ತೀರ್ಮಾನ ಆಗುವವರೆಗೆ ಮಾನ್ಯತಾ ಪತ್ರವು ಅಮಾನತಿನಲ್ಲಿರುತ್ತದೆ.