ಮಂತ್ರಿಯ ಲೈಂಗಿಕ ಸಿಡಿ ನನ್ನ ಬಳಿಯಿದೆ : ವಿನೋದ್ ವರ್ಮಾ
ಛತ್ತೀಸಘಡ, ಅಕ್ಟೋಬರ್ 27 : ಛತ್ತೀಸಘಡದ ಸಚಿವ ರಾಜೇಶ್ ಮುನ್ನಾತ್ ಅವರ ಲೈಂಗಿಕ ಸಿಡಿ ನನ್ನ ಬಳಿಯಿದೆ. ಈ ಕಾರಣಕ್ಕಾಗಿಯೇ ಸರಕಾರ ನನ್ನ ವಿರುದ್ಧ ತಿರುಗಿಬಿದ್ದಿದೆ ಎಂದು ಬಂಧಿತರಾಗಿರುವ ವಿನೋದ್ ವರ್ಮಾ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ನನ್ನ ಬಳಿ ಸಿಡಿ ಇದ್ದಿದ್ದರಿಂದಲೇ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನನ್ನ ಬಳಿಯಿದ್ದಿದ್ದು ಪೆನ್ ಡ್ರೈವ್ ಮಾತ್ರ. ನನಗೂ ನನ್ನ ಬಳಿ ಸಿಕ್ಕ 300 ಸಿಡಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.
ಪತ್ರಕರ್ತನ ಬಂಧನ : ಬ್ಲಾಕ್ ಮೇಲ್ ಮತ್ತು ಹಣ ಕಿತ್ತ ಆರೋಪದ ಮೇಲೆ ಹಿರಿಯ ಪತ್ರಕರ್ತ ವಿನೋದ್ ವರ್ಮಾರನ್ನು ಘಾಜಿಯಾಬಾದ್ ಪೊಲೀಸರು ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಬಂಧಿಸಿದ್ದಾರೆ.
ಬೆಳಗಾವಿ: ಬ್ಲಾಕ್ ಮೇಲೆ ದಂಧೆ, ನಕಲಿ ಪತ್ರಕರ್ತನ ಬಂಧನ
ಘಾಜಿಯಾಬಾದ್ ನಲ್ಲಿ ಇಂದಿರಾಪುರಂನಲ್ಲಿರುವ ಅವರ ನಿವಾಸದಿಂದ ಬಿಬಿಸಿಯ ಮಾಜಿ ಸಂಪಾದಕ ಮತ್ತು ಅಮರ ಉಜಾಲಾ ಡಿಜಿಟಲ್ ಸಂಪಾದಕ ವಿನೋದ್ ವರ್ಮಾರನ್ನು ಇದ್ದಕ್ಕಿದ್ದಂತೆ ಬಂಧಿಸಲಾಗಿದೆ.
ಬಂಧನದ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬರಬೇಕಿದೆ. ವಿನೋದ್ ಅವರ ಬಂಧನವನ್ನು ಪತ್ರಿಕೋದ್ಯಮದ ಮೇಲಿನ ಪ್ರಹಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಿಂಬಿಸಲಾಗುತ್ತಿದೆ.
ಛತ್ತೀಸಘಡದಲ್ಲಿ ಇತ್ತೀಚೆಗೆ ನಡೆದ ಪತ್ರಕರ್ತರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುವ ತಂಡದಲ್ಲಿ ವಿನೋದ್ ವರ್ಮಾ ಕೂಡ ಇದ್ದರು. ಅವರಿಂದ 300 ಸಿಡಿ ಮತ್ತು ಒಂದು ಪೆನ್ ಡ್ರೈವ್ ಕೂಡ ವಶಪಡಿಸಿಕೊಳ್ಳಲಾಗಿದೆ.
ಒಂದು ಮಾಹಿತಿಯ ಪ್ರಕಾರ, ಅವರು ಛತ್ತೀಸಘಡದ ಮಂತ್ರಿಯೊಬ್ಬರ ಮೇಲೆ ಕುಟುಕು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದರು.