ಕ್ಲಾಸ್ಗೆ ಮಾಸ್ ಬಂಕ್: ಹೊಸ ವೈದ್ಯರಿಗೆ 'ವಿಪ್' ಥೆರಪಿ!
ಜೋಧ್ ಪುರ, ನವೆಂಬರ್. 18: ಕ್ಲಾಸ್ ಬಂಕ್ ಮಾಡಿ ಅಡ್ಡಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದು, ಹಾಲ್ ಟಿಕೆಟ್ ತಡೆ ಹಿಡಿಯುವುದು ಹಳೆ ಸ್ಟೈಲ್, ವಿಪ್ ಜಾರಿ ಮಾಡೋದು ಹೊಸ ಸ್ಟೈಲ್.
ಪಕ್ಷದ ವಿರುದ್ಧ ಓಟ್ ಮಾಡದಂತೆ ಶಾಸಕರಿಗೆ, ಸಹಕಾರ ಸಂಘದ ಸದಸ್ಯರಿಗೆ ವಿಪ್ ಜಾರಿ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಕ್ಲಾಸ್ ಗೆ ಚಕ್ಕರ್ ಹಾಕಿ ಅಡ್ಡಾಡುವ ಕಾಲೇಜು ವಿದ್ಯಾರ್ಥಿಗಳಿಗೂ ವಿಪ್ ಜಾರಿ ಮಾಡಲಾಗಿದೆ![ರುಂಡ-ಮುಂಡ ಬೇರೆಯಾದವನ ಬದುಕಿಸಿದ ವೈದ್ಯ]
ದೀಪಾವಳಿ ರಜೆಗೆಂದು ಊರಿಗೆ ತೆರಳಿ ನಾಪತ್ತೆಯಾಗಿದ್ದ ಜೋಧ್ ಪುರದ ಎಸ್ ಎನ್ ಮೆಡಿಕಲ್ ಕಾಲೇಜಿನ 250 ಜನ ವಿದ್ಯಾರ್ಥಿಗಳಿಗೆ ವಿಪ್ ಜಾರಿ ಮಾಡಲಾಗಿದೆ. ಕ್ಲಾಸ್ ಗೆ ಮಾಸ್ ಬಂಕ್ ಮಾಡಿದ್ದಕ್ಕೆ ಅವರಿಗೆ ಈ ಶಿಕ್ಷೆ.
ಬಂಕ್ ಮಾಡಿದ್ದ ಎಲ್ಲ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು ಪಾಲಕರನ್ನು ಕರೆದುಕೊಂಡು ಬರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಕ್ಷಮಾಪಣೆ ಪತ್ರ ಬರೆದುಕೊಡುವಂತೆ ತಿಳಿಸಲಾಗಿದೆ. 22 ಜನ ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಕಾಲೇಜಿನ ಅಕಾಡಮಿಕ್ ಇನ್ ಚಾರ್ಜ್ ಅಫ್ಜಲ್ ಹಕೀಮ್ ತಿಳಿಸಿದ್ದಾರೆ.[ನಿಮ್ಮ ಮಕ್ಕಳು ವೈದ್ಯರಾಗಬೇಕಾ? ಹಂ... ವಿಚಾರ ಮಾಡಿ!]
ಮಾಸ್ ಬಂಕಿಂಗ್ ಎನ್ನುವುದು ಚಟವಾಗಿ ಮಾರ್ಪಟ್ಟಿದೆ. ಮೊದಲು ಎಚ್ಚರಿಕೆ ನೀಡಲಾಗಿತ್ತು. ಆದರೆ ದೀಪಾವಳಿ ರಜೆ ನವೆಂಬರ್ 8ಕ್ಕೆ ಆರಂಭವಾಗುವುದರಲ್ಲಿದ್ದರೂ ಅಕ್ಟೋಬರ್ 31ದಿಂದ ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿಗಳು ಕ್ಲಾಸ್ ಗೆ ಚಕ್ಕರ್ ಹಾಕಿದ್ದರು, ಕಾಲೇಜಿಗೆ ಯಾವುದೇ ಮಾಹಿತಿ ನೀಡದೇ ತೆರಳಿದ್ದರು. ಹಾಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೆಲ್ಲದರ ಬಗ್ಗೆ ಚರ್ಚೆ ಮಾಡಿದ ನಂತರ ವಿಪ್ ಜಾರಿ ಮಾಡಲಾಯಿತು. ಇನ್ನು ಮುಂದೆ ಇಂಥ ಸಂಗತಿಗಳು ನಡೆಯಬಾರದು. ವಿದ್ಯಾರ್ಥಿಗಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ವಿಪ್ ಜಾರಿ ಮಾಡಲಾಗಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಎ ಎಲ್ ಭಟ್ ತಿಳಿಸಿದರು.
ಒಟ್ಟಿನಲ್ಲಿ ಇನ್ನು ಮುಂದೆ ಕಾಲೇಜಿಗೆ ಬಂಕ್ ಹಾಕಿ ಆರಾಮಾಗಿ ಓಡಾಡಿಕೊಂಡಿರುವವರು ತಕ್ಕ ದಂಡ ತೆರಬೇಕಾಗುತ್ತದೆ. ದೇಶದ ಉಳಿದ ಕಾಲೇಜುಗಳು ಇಂಥ ಕ್ರಮ ತೆಗೆದುಕೊಳ್ಳಲು ಮುಂದಾದರೂ ಯಾವುದೇ ಆಶ್ಚರ್ಯವಿಲ್ಲ.