ರಾಹುಲ್ - ಕನ್ಹಯ್ಯಾ 1 ಗಂಟೆ ಮಾತುಕತೆ: ಏನಿರಬಹುದು ವಿಷಯ?
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮಂಗಳವಾರ (ಮಾ 22) ದೆಹಲಿಯ ತುಘಲಕ್ ರಸ್ತೆಯಲ್ಲಿರುವ ರಾಹುಲ್ ನಿವಾಸದಲ್ಲಿ ಭೇಟಿಯಾದ ಕನ್ಹಯ್ಯಾ, ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ. (ಕನ್ಹಯ್ಯನಿಗೆ ಸವಾಲೆಸೆದ 15 ವರ್ಷದ ಬಾಲಕಿ)
ಜೆಎನ್ ಯು ವಿದ್ಯಾರ್ಥಿಗಳು, NSUI ಮತ್ತು ಎಐಎಸ್ಎಫ್ ಸಂಘಟನೆಯ ಸದಸ್ಯರೊಂದಿಗೆ ರಾಹುಲ್ ಗಾಂಧಿ ಜೊತೆ ಚರ್ಚಿಸಿ ಹೊರಬಂದ ಕನ್ಹಯ್ಯಾ ಮತ್ತು ಟೀಂ ಇದೊಂದು ಸೌಜನ್ಯಯುತ ಭೇಟಿ ಎಂದಷ್ಟೇ ಹೇಳಿ, ಮಾಧ್ಯಮದವರ ಹೆಚ್ಚಿನ ಪ್ರಶ್ನೆಗೆ ಉತ್ತರಿಸಲಿಲ್ಲ.
ನಮ್ಮ ಹೋರಾಟಕ್ಕೆ ರಾಹುಲ್ ಗಾಂಧಿ ಉತ್ತಮ ಬೆಂಬಲ ನೀಡಿದ್ದಾರೆ, ಅವರಿಗೆ ಧನ್ಯವಾದ ಹೇಳಲು ಅವರನ್ನು ಭೇಟಿಯಾಗಲು ಬಂದಿದ್ದೇವೆ ಎಂದು NSUI ಸಂಘಟನೆಯ ಮುಖ್ಯಸ್ಥ ಎಂ ಜಾನ್ ಸುದ್ದಿಗಾರರಿಗೆ ವಿವರಿಸಿದ್ದಾರೆ.
ರಾಹುಲ್ ಗಾಂಧಿಯವರು ಜೆಎನ್ ಯು ಹೋರಾಟಕ್ಕೆ ಮಾತ್ರವಲ್ಲ, ಎಫ್ ಟಿಐಐ, ಐಐಟಿ ಮದ್ರಾಸ್, ಹೈದರಾಬಾದ್ ವಿವಿಯ ವಿಚಾರದಲ್ಲೂ ವಿದ್ಯಾರ್ಥಿಗಳ ಪರ ನಿಂತಿದ್ದಾರೆ. ಹಾಗಾಗಿ ಅವರನ್ನು ಭೇಟಿಯಾಗಿದ್ದೇವೆಂದು ಜಾನ್ ಸ್ಪಷ್ಟನೆ ನೀಡಿದ್ದಾರೆ. (ಮೋದಿ ಬಗ್ಗೆ ಕನ್ಹಯ್ಯಾ ಹೇಳಿದ್ದು)
ಹೈದರಾಬಾದ್ ವಿವಿ ಆಖಾಡಕ್ಕೆ ಕನ್ಹಯ್ಯಾ ಕುಮಾರ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಹೋರಾಟ ತೀವ್ರ
ದೇಶದ್ರೋಹ ಭಾಷಣದ ಆರೋಪದ ಮೇಲೆ ಬಂಧಿತನಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ವಿಶೇಷ ಕುತೂಹಲ ಹುಟ್ಟುಹಾಕಿದೆ. ಕಾಂಗ್ರೆಸ್ ಬೆಂಬಲಿತ NSUI ಸಂಘಟನೆ ಮತ್ತು ಕನ್ಹಯ್ಯಾ ಕುಮಾರ್ ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ರಾಹುಲ್ ಭೇಟಿ ಹೊಸ ಶಕ್ತಿಯಾದರೂ ಆಗಬಹುದು.
|
ರಾಹುಲ್ ಗಾಂಧಿ ಟ್ವೀಟ್
AISF ಮತ್ತು ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇನೆಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಯುವರಾಜರು, ಕನ್ಹಯ್ಯಾ ಕುಮಾರ್ ಹೆಸರು ಪ್ರಸ್ತಾವಿಸಲಿಲ್ಲ.
ಮೋದಿ ವಿರುದ್ದ ಹರಿಹಾಯ್ದಿದ್ದ ರಾಹುಲ್
ದೇಶದ್ರೋಹ ಭಾಷಣದ ಆರೋಪದ ಮೇಲೆ ಕನ್ಹಯ್ಯಾ ಕುಮಾರ್ ಅರೆಸ್ಟ್ ಆದ ನಂತರ, ವಿವಿ ಕ್ಯಾಂಪಸ್ಸಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದರು.
ರೋಹಿತ್ ವೇಮುಲ
ಹೈದರಾಬಾದ್ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಘಟನೆಯ ತರುವಾಯ ಸಂಭವಿಸಿದ ಘರ್ಷಣೆಯ ನಂತರ ಕರ್ತವ್ಯಕ್ಕೆ ಹಾಜರಾದ ಹೈದರಾಬಾದ್ ವಿವಿ ಉಪಕುಲಪತಿ ಅಪ್ಪಾ ರಾವ್ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಎದುರಿಸಬೇಕಾಗಿ ಬಂತು.
ಹೈದರಾಬಾದ್ ವಿವಿಗೆ ಕನ್ಹಯ್ಯಾ
ವಿವಿ ಉಪಕುಲಪತಿ ಕೆಲಸಕ್ಕೆ ಹಾಜರಾದ ಬೆನ್ನಲ್ಲೇ ಬುಧವಾರ (ಮಾ 23) ಜೆಎನ್ ಯು ವಿದ್ಯಾರ್ಥಿ ಮುಖಂಡ, ಕನ್ಹಯ್ಯಾ ಕುಮಾರ್ ಹೈದರಾಬಾದ್ ಗೆ ಆಗಮಿಸಿ, ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.