ಮದುವೆ ಮಂಟಪಕ್ಕೆ ನುಗ್ಗಿ, ಗನ್ ತೋರಿಸಿ ಪ್ರಿಯಕರನ ಅಪಹರಿಸಿದ ಯುವತಿ
ನೀವು ಯಾವುದಾದರೂ ಸಿನಿಮಾದಲ್ಲಿ ನೋಡಿರಬಹುದಾದ ದೃಶ್ಯಕ್ಕಿಂತ ತುಂಬ ವಿಭಿನ್ನ ಎನಿಸುವಂಥದ್ದು ಈ ವರದಿಯ ಹೂರಣ. ತನ್ನನ್ನು ಪ್ರೀತಿಸಿ, ಮತ್ತೊಬ್ಬಳ ಜತೆ ಮದುವೆ ಆಗಲು ಮುಂದಾದವನನ್ನು ಯುವತಿಯೊಬ್ಬಳು ಗನ್ ತೋರಿಸಿ ಅಪಹರಿಸಿದ್ದಾಳೆ
ಕಾನ್ಪುರ್, ಮೇ 18: ಮದುವೆ ಮಂಟಪದಿಂದ ವಧುವನ್ನು ಹುಡುಗನೊಬ್ಬ ಹಾರಿಸಿಕೊಂಡು ಹೋಗುವುದನ್ನು ನೀವು ಯಾವುದಾದರೂ ಸಿನಿಮಾದಲ್ಲಿ ನೋಡಿರ್ತೀರಿ. ಆದರೆ ಉತ್ತರಪ್ರದೇಶದ ಹಮೀರ್ ಪುರ್ ನ ಮೌದಾಹದಲ್ಲಿ ಈ ದೃಶ್ಯ ಸ್ವಲ್ಪ ಉಲ್ಟಾ ಆಗಿದೆ. ಮದುವೆ ಮಂಟಪಕ್ಕೆ ನುಗ್ಗಿದ ಯುವತಿಯೊಬ್ಬಳು ಗನ್ ತೋರಿಸಿ, ವರನನ್ನೇ ಹಾರಿಸಿಕೊಂಡು ಹೋಗಿದ್ದಾಳೆ.
ಈ ಘಟನೆ ಮಂಗಳವಾರ ನಡೆದಿದೆ. ಆದರೆ ಸ್ಥಳೀಯರ ಪ್ರಕಾರ ವರನಿಗೂ ಆ ಯುವತಿಗೂ ಪ್ರೀತಿ ಇತ್ತು. ಯಾವಾಗ ಈ ಹುಡುಗ ಕೈ ಕೊಡಲು ನೋಡಿದನೋ ಯುವತಿಯು ಇಂಥ ನಿರ್ಧಾರಕ್ಕೆ ಬಂದಿದ್ದಾಳೆ. ಅಪಹರಣವಾದ ವ್ಯಕ್ತಿಯ ಹೆಸರು ಅಶೋಕ್ ಯಾದವ್. ವೈದ್ಯರೊಬ್ಬರ ಕ್ಲಿನಿಕ್ ನಲ್ಲಿ ಆತ ಕಾಂಪೌಂಡರ್ ಆಗಿದ್ದ. ಅಲ್ಲೇ ಈ ಯುವತಿಯೂ ಕೆಲಸ ಮಾಡುತ್ತಿದ್ದಳಂತೆ.[ಮಾಂಸಾಹಾರ ಇಲ್ಲ ಅನ್ನೋ ಕಾರಣಕ್ಕೆ ಉ.ಪ್ರದಲ್ಲಿ ಮದುವೆಯೇ ಮುರಿದುಬಿತ್ತು]
ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ಆದರೆ ಯಾವಾಗ ಅಶೋಕ್ ನ ಮದುವೆ ಭವಾನಿಪುರ್ ನ ಹುಡುಗಿ ಜತೆಗೆ ಮದುವೆ ನಿಗದಿಯಾಯಿತೋ ಈ ಪ್ರೇಯಸಿಯ ಎಸ್ಸೆಮ್ಮೆಸ್ಸು, ವಾಟ್ಸ್ ಅಪ್ ಯಾವುದಕ್ಕೂ ಆತ ಉತ್ತರ ನೀಡಿಲ್ಲ. ಸೋಮವಾರ ಮಧ್ಯರಾತ್ರಿ ವೇಳೆಗೆ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಒಂದಷ್ಟು ಜನರು ಹಾಗೂ ಶಸ್ತ್ರಗಳ ಜತೆಗೆ ನುಗ್ಗಿದ ಹುಡುಗಿ, ನನ್ನನ್ನು ಪ್ರೀತಿಸಿ ಯಾರನ್ನೋ ಮದುವೆ ಆಗ್ತಿಯಾ? ಇದಕ್ಕೆ ನಾನು ಒಪ್ಪಲ್ಲ ಎಂದು ಆತನ ಕತ್ತಿನ ಪಟ್ಟಿ ಹಿಡಿದು ಎಳೆದೊಯ್ದಿದ್ದಾಳೆ.
ಆದರೆ, ಪೊಲೀಸರ ಪ್ರಕಾರ ಇದು ಅಶೋಕ್ ಹಾಗೂ ಆ ಯುವತಿ ಸೇರಿ ಆಡಿದ ನಾಟಕ. ಅಷ್ಟು ಜನರ ಮಧ್ಯೆ ಹಾಗೆ ಎತ್ತಿ ಹಾಕಿಕೊಂಡು ಹೋಗಲು ಸಾಧ್ಯವಾ ಅಂತಾರೆ. ಅದೇನೋ ಗೊತ್ತಿಲ್ಲ. ಆದರೆ ಘಟನೆ ನಡೆದಿರುವುದು ಸತ್ಯ.