ತಬ್ರೇಜ್ ಸಾವಿನ ಪ್ರಕರಣದ ದಿಕ್ಕನ್ನೇ ಬದಲಿಸಿದ ಅಟಾಪ್ಸಿ ವರದಿ
ರಾಂಚಿ, ಸೆಪ್ಟೆಂಬರ್ 10: ಕಳೆದ ಜೂನ್ ತಿಂಗಳಿನಲ್ಲಿ ತಬ್ರೇಜ್ ಅನ್ಸಾರಿ ಎಂಬುವವರನ್ನು ಮೋಟರ್ ಸೈಕಲ್ ಕದ್ದಿದ್ದಾನೆಂದು ಆರೋಪಿಸಿ ಜನರ ಗುಂಪೊಂದು ಹೊಡೆದು ಕೊಂದ ಬರ್ಬರ ಘಟನೆ ವಿಚಿತ್ರ ತಿರುವು ಪಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ಮೇಲೆ ಹೇರಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಪೊಲೀಸರು ಕೈಬಿಟ್ಟಿದ್ದಾರೆ! ಅದಕ್ಕೆ ಕಾರಣ ಅಟಾಪ್ಸಿ ವರದಿ! ತಬ್ರೇಜ್ ಹೃದಯಾಘಾತದಿಂದ ಮರಣ ಹೊಂದಿದ್ದಾನೆಂದು ಅಟಾಪ್ಸಿ ವರದಿ ಹೇಳಿರುವುದರಿಂದ ಆತನನ್ನು ಹೊಡೆದು ಕೊಲ್ಲಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಪ್ರಕರಣವನ್ನು ಕೈಬಿಡಲಾಗಿದೆ.
ಮದುವೆಯಾಗಿ ಒಂದೂವರೆ ತಿಂಗಳಾಗಿತ್ತಷ್ಟೇ.. ತಬ್ರಿಝ್ ಸಾವಿನ ಕಣ್ಣೀರ ಕತೆ
ಕಳೆದ ಜೂನ್ ತಿಂಗಳಿನಲ್ಲಿ 24 ವರ್ಷದ ಯುವಕ ತಬ್ರೇಜ್ ಜಮ್ಷೆಡ್ಪುರದಿಂದ ಸರೈಕೆಲಾ ಖರ್ಸವಾನ್ ಜಿಲ್ಲೆಯ ಕರ್ಸೋವಾದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಲವು ಜನರಿದ್ದ ಗುಂಪೊಂದು ಅವರ ಮೇಲೆ ದಾಳಿ ಮಾಡಿತ್ತು. ದ್ವಿಚಕ್ರ ವಾಹನ ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಕಂಬಕ್ಕೆ ಕಟ್ಟಿ ಹಿಂಸಿಸಲಾಗಿತ್ತು. ಕೆಲವು ಮೂಲಗಳ ಪ್ರಕಾರ ಆತನ ಬಳಿ 'ಜೈ ಶ್ರೀರಾಮ್' ಘೋಷಣೆ ಕೂಗುವಂತೆಯೂ ಒತ್ತಾಯಿಸಲಾಗಿತ್ತು.
ಹೊಡೆತ ಸಹಿಸಲಾಗದೆ ಪ್ರಜ್ಞೆ ಕಳೆದುಕೊಂಡಿದ್ದ ತಬ್ರೇಜ್ ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಆತನನ್ನು ನಾಲ್ಕು ದಿನದ ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ವಿಳಂಬವಾಗಿದ್ದರಿಂದ ಆತ ಮೃತಪಟ್ಟಿದ್ದ.
ಪೊಲೀಸರ ಬಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆತ ಹಲವು ಬಾರಿ ಬೇಡಿಕೊಂಡಿದ್ದರೂ ಪೊಲೀಸರು ಸ್ಪಂದಿಸಿರಲಿಲ್ಲ. ಮದುವೆಯಾಗಿ ಒಂದೂವರೆ ತಿಂಗಳ ನಂತರ ನಡೆದ ಈ ಘಟನೆಯಲ್ಲಿ ತಬ್ರೇಜ್ ಮರಣಹೊಂದಿದ್ದ.
ಜಾರ್ಖಂಡ್: ಮೋಟರ್ ಸೈಕಲ್ ಕದ್ದ ಎಂದು ಹೊಡೆದು ಕೊಂದ ಜನ
ಆತನ ಮೇಲೆ ನಡೆದ ಹಲ್ಲೆಯಿಂದಾಗಿ ಆತ ಸಾವಿಗೀಡಾಗಿದ್ದಾನೆಂದು ಕುಟುಂಬ ಆರೋಪಿಸಿ, ಪ್ರಕರಣ ದಾಖಲಿಸಿದ್ದರಿಂದ ಹಲ್ಲೆ ನಡೆಸಿದ್ದ 11 ಜನರನ್ನು ಪೊಲೀಸರು ಬಂಧಿಸಿದ್ದರು. ಆದರೆ ಮರಣೋತ್ತರ ವರದಿಯಲ್ಲಿ ಆತ ಸತ್ತಿದ್ದು ಹೃದಯಾಘಾತದಿಂದ ಎಂದು ಉಲ್ಲೇಖವಾಗಿರುವುದರಿಂದ ಪ್ರಕರಣವನ್ನೇ ಕೈಬಿಡಲಾಗಿದೆ.
ಕಂಬಕ್ಕೆ ಕಟ್ಟಿ ಥಳಿಸಿ ಹತ್ಯೆ: ಐವರ ಬಂಧನ, ಪೊಲೀಸರ ಅಮಾನತು
ಹಿಂಸೆಯಿಂದ ಮತ್ತು ಭಯದಿಂದ ಹೆದರಿ ತಬ್ರೇಜ್ ಸಾವಿಗೀಡಾಗಿರಬಹುದು. ಅಂದಮೇಲೆ ಆತನ ಸಾವಿಗೆ ಆರೋಪಿಗಳೇ ಕಾರಣವಲ್ಲವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.