ಅಕ್ರಮ ಗಣಿಗಾರಿಕೆ: ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮನೆ ಮೇಲೆ ಇಡಿ ದಾಳಿ
ರಾಂಚಿ, ಮೇ 07: ಜಾರ್ಖಂಡ್ ರಾಜ್ಯದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ತಂಡವು ನಿರಂತರವಾಗಿ ದಾಳಿ ನಡೆಸುತ್ತಿದೆ. ಉನ್ನತ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಸಿಎ ಸುಮನ್ ಅವರನ್ನು ಇಡಿ ತಂಡ ವಿಚಾರಣೆಗೆ ಕರೆದುಕೊಂಡು ಹೋಗಿದೆ. ಐಎಎಸ್ ಪೂಜಾ ಸಿಂಘಾಲ್ ಅವರ ಪತಿ ಅಭಿಷೇಕ್ ಝಾ ನಡೆಸುತ್ತಿರುವ ಪಲ್ಸ್ ಆಸ್ಪತ್ರೆಯಲ್ಲಿ ಎರಡನೇ ದಿನವಾದ ಶನಿವಾರವು ಇಡಿ ದಾಳಿಯನ್ನು ಮುಂದುವರೆಸಿದೆ.
ಜಾರ್ಖಂಡ್ ಮಹಿಳಾ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರಿಗೆ ಸಂಕಷ್ಟಗಳು ಹೆಚ್ಚಾಗುತ್ತಿವೆ, ಇಡಿ ತನ್ನ ತನಿಖೆಯನ್ನು ಬಿಗಿಗೊಳಿಸಿದ್ದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲೂ ಸಿಕ್ಕಿಬಿದ್ದಿದ್ದಾರೆ. ಪೂಜಾ ಸಿಂಘಾಲ್ ಅವರ ಪತಿ, ಸಹೋದರ, ಪತಿಯ ಸಿಎ ಸುಮನ್ ಕುಮಾರ್ ಮತ್ತು ಇತರರನ್ನು ವಶಕ್ಕೆ ಪಡೆದಿರುವ ಇಡಿ ಇವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಸಿ.ಎಂ. ಸುಮನ್ ಸಿಂಗ್ ಅವರ ಮನೆಯಿಂದ 20 ಕೋಟಿ ರೂ ವಶಪಡಿಸಿಕೊಳ್ಳಲಾಗಿದೆ. ಪೂಜಾ ಸಿಂಘಾಲ್ ಅವರ ಸಿಎ ಸುಮನ್ ಅವರನ್ನು ಇಡಿ ತಂಡ ತನ್ನೊಂದಿಗೆ ಕರೆದುಕೊಂಡು ಹೋಗಿದ್ದು ಇಡಿ ಮೂಲಗಳ ಪ್ರಕಾರ ಆಕೆ ವಿಚಾರಣೆಗೆ ಸಹಕರಿಸುತ್ತಿಲ್ಲ. ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ರಹಸ್ಯ ಅಡಗುತಾಣಗಳ ಮೇಲೆ ಇಡಿ ದಾಳಿಗಳು ಇಂದಿಗೂ ಮುಂದುವರೆದಿದ್ದು ಗಣಿಗಾರಿಕೆ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೂಜಾ ಸಿಂಘಾಲ್ ಅವರ ಪತಿ ಅಭಿಷೇಕ್ ಝಾ ಅವರ ಸಿಎ ಸುಮನ್ ಕುಮಾರ್ ಅವರನ್ನು ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದ್ದು ಮತ್ತೊಂದೆಡೆ, ಎರಡನೇ ದಿನ ರಾಂಚಿಯ ಬರಿಯಾಟುನಲ್ಲಿರುವ ಪಲ್ಸ್ ಆಸ್ಪತ್ರೆಗೆ ತಲುಪಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು ಹಾಗೂ ಬೇನಾಮಿ ಆಸ್ತಿಗಳ ಹಲವು ದಾಖಲೆಗಳು ಪತ್ತೆಯಾಗಿವೆ. ಇದೀಗ ಈ ಪ್ರಕರಣದಲ್ಲಿ ಕೆಲವರ ಬಂಧನವೂ ಆಗುವ ಸಾಧ್ಯತೆ ಇದೆ. ಜಾರ್ಖಂಡ್ ಕೇಡರ್ನ ಹಿರಿಯ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.
ಪೂಜಾ ಸಿಂಘಾಲ್ ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಮತ್ತು ಜಾರ್ಖಂಡ್ ಸ್ಟೇಟ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (JSMDC)ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಜಾರ್ಖಂಡ್ ಹೈಕೋರ್ಟ್ ವಕೀಲ ರಾಜೀವ್ ಅವರು ಕಳೆದ 2022ರ ಫೆಬ್ರವರಿ ಇಡಿಯಲ್ಲಿ ಪೂಜಾ ಸಿಂಘಾಲ್ ವಿರುದ್ಧ ದೂರು ದಾಖಲಿಸಿದ್ದರು.
ಅಕ್ರಮ ಗಣಿಗಾರಿಕೆ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಪೂಜಾ ಸಿಂಘಾಲ್ ವಿರುದ್ಧ ಇಡಿ ಸ್ವೀಕರಿಸಿತ್ತು. ಪಲ್ಸ್ ಆಸ್ಪತ್ರೆಯ 11 ಬ್ಯಾಂಕ್ ಖಾತೆಗಳನ್ನು ಇಡಿ ಪತ್ತೆ ಹಚ್ಚಿದೆ. ಈ ಖಾತೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲಾ ಬ್ಯಾಂಕ್ ಖಾತೆಗಳು ಖಾಸಗಿ ಬ್ಯಾಂಕ್ಗಳಿಗೆ ಸೇರಿವೆ. ಇಡಿ ಅಧಿಕಾರಿಗಳ ಪ್ರಕಾರ ಪಲ್ಸ್ ಆಸ್ಪತ್ರೆಯ ಎರಡು ಬ್ಯಾಂಕ್ಗಳಲ್ಲಿ ತರುವ ಸೌಲಭ್ಯವೂ ಲಭ್ಯವಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ನ ಹಿರಿಯ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಆಕೆಗೆ ಸಂಬಂಧಿಸಿದ ವ್ಯಕ್ತಿಗಳ 25 ಸ್ಥಳಗಳ ಮೇಲೆ ಇಡಿ ತಂಡ ಶುಕ್ರವಾರ ಬೆಳಗ್ಗೆ 7ಗಂಟೆಯಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಮೂಲಗಳ ಪ್ರಕಾರ ಈ ಜಾರ್ಖಂಡ್ನ ರಾಂಚಿ, ಖುಂತಿ, ರಾಜಸ್ಥಾನದ ಜೈಪುರ, ಹರಿಯಾಣದ ಫರಿದಾಬಾದ್ ಮತ್ತು ಗುರುಗ್ರಾಮ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಿಹಾರದ ಮುಜಾಫರ್ಪುರ ಮತ್ತು ದೆಹಲಿ ಎನ್ಸಿಆರ್ನಲ್ಲಿ ಇವರ ಅಡಗುತಾಣಗಳಲ್ಲಿ ಖಾತೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.