ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಜೆಡಿಯು ಅಧ್ಯಕ್ಷ
ಬೆಂಗಳೂರು, ನವೆಂಬರ್ 30: ಸಂಯುಕ್ತ ಜನತಾದಳ(ಜೆಡಿಯು)ದ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಮಹಿಮಾ ಪಟೇಲ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಇತ್ತ ಕೇರಳ ಜೆಡಿಯು ಅಧ್ಯಕ್ಷ ಎಂ. ಪಿ. ವೀರೇಂದ್ರ ಕುಮಾರ್ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.
'ನನ್ನ ನಿರ್ಧಾರವನ್ನು ಈಗಾಗಲೇ ನಿತೀಶ್ ಕುಮಾರ್ ಅವರಿಗೆ ತಿಳಿಸಿದ್ದೇನೆ. ಪಕ್ಷದ ರಾಜ್ಯ ಸಮಿತಿಯಲ್ಲಿ ಪಕ್ಷದ ಭವಿಷ್ಯದ ಕುರಿತು ಚರ್ಚಿಸಲಿದ್ದೇನೆ. ನಂತರ ಮುಂದಿನ ಯೋಜನೆಗಳ ಬಗ್ಗೆ ತಿಳಿಸುತ್ತೇನೆ ಎಂದು 'ಮಾತೃಭೂಮಿ' ಮಲಯಾಳ ದಿನಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ವೀರೇಂದ್ರ ಕುಮಾರ್ ಹೇಳಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ (ಯುಡಿಎಫ್) ಪಾಲುದಾರ ಪಕ್ಷವಾಗಿದೆ ಜೆಡಿಯು. 2009ರಲ್ಲಿ ಕೋಯಿಕ್ಕೋಡ್ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಿಪಿಐ-ಎಂ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ವೀರೇಂದ್ರ ಅವರು ಯುಡಿಎಫ್ ಜೊತೆ ಕೈಜೋಡಿಸಿದ್ದರು.
ವೀರೇಂದ್ರ ಕುಮಾರ್ ಅವರು ಜೆಡಿಯುಗೆ ರಾಜೀನಾಮೆ ನೀಡಿ ಮರಳಿ ಸಿಪಿಐ-ಎಂ ಬಣ ಸೇರಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.
ವೀರೇಂದ್ರ ಕುಮಾರ್ ಅವರು 1996ರಲ್ಲಿ ಜನತಾದಳದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಯುಕ್ತರಂಗ ಸರ್ಕಾರದಲ್ಲಿ ಸಚಿವರಾಗಿದ್ದರು. 1999ರಿಂದ 2010ರವರೆಗೆ ಜನತಾದಳ (ಜಾತ್ಯತೀತ) ಎಚ್.ಡಿ. ದೇವೇಗೌಡ ಅವರ ಜೊತೆಗಿದ್ದರು. ನಂತರ ಕೇರಳದ ಜೆಡಿಯು ಅಧ್ಯಕ್ಷರಾಗಿ ಮುಂದುವರೆದಿದ್ದರು.