ದೆಹಲಿ ಫಲಿತಾಂಶ: ನಿತೀಶ್ ಕುಮಾರ್ ಹೇಳಿದ್ದೇನು?
ನವದಎಹಲಿ, ಡಿ 9: ರಾಜಧಾನಿ ದೆಹಲಿ ಅಸೆಂಬ್ಲಿ ಚುನಾವಣೆಯ ಫಲಿತಾಂಶ ದೇಶಕ್ಕೆ ಒಂದಂತೂ ಸಂದೇಶ ನೀಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಆಯ್ಕೆ ಜನತೆಗಿದ್ದರೆ ಮತದಾರ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಒಂದು ವರ್ಷದ ಕೆಳಗೆ ಅಸ್ತಿತ್ವಕ್ಕೆ ಬಂದ ಆಮ್ ಆದ್ಮಿ ಪಕ್ಷ ಜನರಿಗೆ ಹತ್ತಿರವಾಗಿದೆ. ದೆಹಲಿಯ ಜನತೆ ಆ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾನೆ. ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗ ಬೇಕೆಂದು ನಿತೀಶ್ ಕುಮಾರ್ ಹೇಳಿದ್ದಾರೆ.
ನಮ್ಮ ಪಕ್ಷ ಆಮ್ ಆದ್ಮಿ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತದೆ. ಜೆಡಿಯು ಟಿಕೆಟಿನಿಂದ ಜಯಗಳಿಸಿದ ಕೆ ಸಿ ತ್ಯಾಗಿ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಲಿದ್ದಾರೆ. (ಕಿರಣ್ ಬೇಡಿ ಸಲಹೆಗೆ ಕಿವಿಗೊಡುವರೆ ಕೇಜ್ರಿವಾಲ್)
ವಿಭಿನ್ನ ರೀತಿಯ ಪ್ರಚಾರ ತಂತ್ರದಿಂದ ಆಮ್ ಆದ್ಮಿ ಊಹಿಸಲೂ ಅಸಾಧ್ಯವಾದ ಸಾಧನೆ ಮಾಡಿದೆ ಎಂದು ನಿತೀಶ್ ಅಭಿಪ್ರಾಯ ಪಟ್ಟಿದ್ದಾರೆ.
ನರೇಂದ್ರ ಮೋದಿ ಹವಾ ದೇಶದೆಲ್ಲಡೆ ಇದೆ ಎಂದು ಬಿಜೆಪಿ ಹೇಳಿ ಕೊಂಡು ಬರುತ್ತಿದೆ. ಮೋದಿ ಹವಾ ಇದ್ದ ಪಕ್ಷದಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಬಹುಮತ ಸಿಗಬೇಕಾಗಿತ್ತು ಎಂದು ನಿತೀಶ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ದ ದೆಹಲಿಯ ಜನತೆ ಮತ ಚಲಾಯಿಸಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಮಾಡಿದ ದೊಡ್ಡ ತಪ್ಪು ಎಂದು ದೆಹಲಿ ಅಸೆಂಬ್ಲಿಯ ಏಕೈಕ ವಿಜಯೀ ಜೆಡಿಯು ಶಾಸಕ ತ್ಯಾಗಿ ಹೇಳಿದ್ದಾರೆ.