'ಸಲ್ಮಾನ್, ಜಯಲಲಿತಾ ಪ್ರಕರಣದಿಂದ ನ್ಯಾಯಾಂಗಕ್ಕೆ ಕೆಟ್ಟ ಹೆಸರು'
ಬೆಂಗಳೂರು, ಜುಲೈ 19 : ದೇಶದ ನ್ಯಾಯಾಲಯಗಳಲ್ಲಿ ಕೋಟ್ಯಾಂತರ ಕೇಸುಗಳು ಬಾಕಿ ಉಳಿದಿವೆ, ಇದರಿಂದಾಗಿ ಜನರು ಕೋರ್ಟ್ಗೆ ಅಲೆದಾಡುತ್ತಿದ್ದಾರೆ. ಆದರೆ, ಸಲ್ಮಾನ್ ಖಾನ್, ಜಯಲಲಿತಾ ಮುಂತಾದ ಪ್ರಮುಖ ಪ್ರಕರಣಗಳನ್ನು ತಕ್ಷಣ ವಿಲೇವಾರಿ ಮಾಡಲಾಗುತ್ತಿದೆ.
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒನ್ ಇಂಡಿಯಾ ಜೊತೆ ಮಾತನಾಡಿದ ಅವರು, ನ್ಯಾಯಾಲಯದ ಪ್ರಕ್ರಿಯೆ, ತೀರ್ಪುಗಳನ್ನು ನಾನು ಪ್ರಶ್ನೆ ಮಾಡುತ್ತಿಲ್ಲ. ಆದರೆ, ಇಂತಹ ಪ್ರಕರಣಗಳ ಶೀಘ್ರ ವಿಚಾರಣೆಯಿಂದ ನ್ಯಾಯಾಂಗಕ್ಕೆ ಹೆಸರು ಕೆಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಲ್ಮಾನ್ ಖಾನ್ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿಗಳಿಗೆ ಆರೋಪದ ಮೇಲ್ಮನವಿ ಪ್ರಕರಣಗಳ ವಿಚಾರಣೆ ಶೀಘ್ರವಾಗಿ ಮುಗಿದಿದೆ. ಸಾಮಾನ್ಯ ಪ್ರಕರಣಗಳಲ್ಲೂ ತ್ವರಿತ ಗತಿಯ ವಿಚಾರಣೆ ನಡೆಬೇಕು ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಎಲ್ಲಾ ಪ್ರಕರಣಗಳು ಮುಖ್ಯ : 'ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ಬಾಕಿ ಉಳಿದಿವೆ. ಸುಪ್ರೀಂ ಮತ್ತು ಹೈಕೋರ್ಟ್ಗಳು ಸರಿಯಾದ ಸಮಯಕ್ಕೆ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿಲ್ಲ. ಎಲ್ಲಾ ಪ್ರಕರಣಗಳು ಮುಖ್ಯವೇ' ಎಂದು ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ವಿಚಾರಣೆ ನಡೆಸಿವೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ.
'ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣದಲ್ಲಿಯೂ ಬಾಂಬೆ ಹೈಕೋರ್ಟ್ ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿದೆ. ಇತರ ಪ್ರಕರಣಗಳನ್ನು ಏಕೆ ವಿಳಂಬವಗುತ್ತಿವೆ?' ಎಂಬುದು ಸಂತೋಷ್ ಹೆಗ್ಡೆ ಪ್ರಶ್ನಿಸಿದ್ದಾರೆ. 'ಹೈ ಪ್ರೊಪೈಲ್ ಕೇಸುಗಳು ಎಂಬ ಕಾರಣಕ್ಕೆ ಅವುಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವುದು ಸರಿಯೇ?' ಎಂಬುದು ನಿವೃತ್ತ ನ್ಯಾಯಮೂರ್ತಿಗಳ ಪ್ರಶ್ನೆ.
ಇದು ದೊಡ್ಡ ಸಮಸ್ಯೆ : 'ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಉಳಿಯುವುದು ದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಜಡ್ಜ್ಗಳ ಕೊರತೆ, ಸಿಬ್ಬಂದಿಗಳ ಕೊರತೆಯೂ ಇದಕ್ಕೆ ಕಾರಣವಾಗಿದೆ. ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಜಟಾಪಟಿಯ ಕಾರಣ ನೇಮಕಾತಿಗಳು ವಿಳಂವಾಗುತ್ತಿವೆ' ಎನ್ನುತ್ತಾರೆ ಸಂತೋಷ್ ಹೆಗ್ಡೆ.