ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ ನಡ್ಡಾ
ಜಯಲಲಿತಾ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಗುಸುಗುಸು ಪಿಸುಪಿಸು ಆರಂಭವಾಗಿವೆ. ಇದಕ್ಕೆ ಪುಷ್ಟಿಯೆಂಬಂತೆ ಅಪೋಲೋ ಆಸ್ಪತ್ರೆಯಾಗಲಿ, ರಾಜ್ಯ ಸರಕಾರವಾಗಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ನಡುವೆ ಜಯಾ ಸ್ಥಿತಿ ಗಂಭೀರವಾಗಿದೆ.
ಚೆನ್ನೈ, ಡಿಸೆಂಬರ್ 05 : ಜಯಲಲಿತಾ ಆರೋಗ್ಯ ಸ್ಥಿತಿ ಹೇಗಿದೆ? ಎಂಬ ಬಗ್ಗೆ ಅಪೋಲೋ ಆಸ್ಪತ್ರೆಯಾಗಲಿ, ತಮಿಳುನಾಡು ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಯಾವುದೇ ನಿಖರವಾದ ಮಾಹಿತಿ ಕೊಡುತ್ತಿಲ್ಲ. ಈ ನಡುವೆ ಕೇಂದ್ರ ಆರೋಗ್ಯ ಸಚಿವರು ನೀಡಿರುವ ಒಂದು ಹೇಳಿಕೆ ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.
"ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾದವರು (ಅಪೋಲೋ) ಆಸ್ಪತ್ರೆಯವರು. ನಮ್ಮಿಂದ ಏನೇನು ಸಹಾಯ, ಬೆಂಬಲ ನೀಡಲು ಸಾಧ್ಯವೋ ಅದನ್ನೆಲ್ಲ ನೀಡುತ್ತೇವೆ" ಎಂದು ಕೇಂದ್ರ ಆರೋಗ್ಯ ಸಚಿವ ಜಯ ಪ್ರಕಾಶ್ ನಡ್ಡಾ ಅವರು ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಅರ್ಥವೇನು ಅವರೇ ವಿವರಿಸಬೇಕು.
ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿರುವ ಸಂಸದೆ ಶಶಿಕಲಾ ಪುಷ್ಪಾ ಅವರು ಕೂಡ, ಜಯಲಲಿತಾ ಆರೋಗ್ಯದ ಕುರಿತು ಯಾವುದೇ ಪಾರದರ್ಶಕತೆ ಇಲ್ಲ. ಅವರು ಇನ್ನೂ ಬದುಕಿರುವ ಬಗ್ಗೆ ಜನ ತಿಳಿಯಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯ ಪ್ರವೇಶಿಸಿ, ಊಹಾಪೋಹಗಳಿಗೆ ಕೊನೆ ಹಾಡಬೇಕು ಎಂದು ಆಗ್ರಸಿದ್ದಾರೆ.
ಡಿಎಂಕೆ ಪಕ್ಷದ ಸಂಸದರೊಬ್ಬರಿಗೆ ಕಪಾಳಮೋಕ್ಷ ಮಾಡಿದ ನಂತರ ಶಶಿಕಲಾ ಪುಷ್ಪಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಳ್ಳಲಾಗಿತ್ತು. ನಂತರ ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕೆಂದು ಅವರು ಒತ್ತಾಯಿಸಿದ್ದರು.