ಪಾಕ್ ದಾಳಿ ವೇಳೆ ಆರೆಸ್ಸೆಸ್ ನೆರವು ಕೋರಿದ್ದರು ನೆಹರೂ: ಉಮಾ ಭಾರತಿ
ಭೋಪಾಲ್, ಫೆಬ್ರವರಿ 14: ಸ್ವಾತಂತ್ರ್ಯಾ ನಂತರ ಪಾಕಿಸ್ತಾನವು ಜಮ್ಮು- ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಆರೆಸ್ಸೆಸ್ ನ ನೆರವು ಕೇಳಿದ್ದರು. ಸಂಘದ ಸ್ವಯಂಸೇವಕರು ಸಹಾಯಕ್ಕೆ ತೆರಳಿದ್ದರು ಎಂದು ಕೇಂದ್ರ ಸಚಿವೆ ಮಂಗಳವಾರ ಇಲ್ಲಿ ಹೇಳಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂಘ ಹಾಗೂ ಸೈನ್ಯದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ನಂತರ ಉಮಾ ಭಾರತಿ ಈ ಮಾತನ್ನು ಹೇಳಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಉಮಾ ಭಾರತಿ, ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಮೋಹನ್ ಭಾಗ್ವತ್ ಸೇನೆ ಕುರಿತ ಹೇಳಿಕೆಗೆ ಆರೆಸ್ಸೆಸ್ ಸ್ಪಷ್ಟನೆ
ದೇಶ ಸ್ವತಂತ್ರಗೊಂಡ ನಂತರ ಕಾಶ್ಮೀರದಲ್ಲಿ ಆಳ್ವಿಕೆ ನಡೆಸುತ್ತಿದ್ದ ಮಹಾರಾಜ ಹರಿಸಿಂಗ್, ಜಮ್ಮು-ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಸಹಿ ಹಾಕುವಂತೆ ಶೇಖ್ ಅಬ್ದುಲ್ಲಾ ಅವರು ಹರಿ ಸಿಂಗ್ ರನ್ನು ಒತ್ತಾಯಿಸುತ್ತಿದ್ದರು ಎಂದಿದ್ದಾರೆ.
"ನೆಹರೂ ದ್ವಂದ್ವದಲ್ಲಿದ್ದರು. ಆಗ ಪಾಕಿಸ್ತಾನ ದಿಢೀರ್ ದಾಳಿ ನಡೆಸಿ, ಪಾಕ್ ಸೈನಿಕರು ಉಧಂಪುರ್ ವರೆಗೆ ಬಂದಿದ್ದರು" ಎಂದು ಉಮಾ ಭಾರತಿ ಹೇಳಿದ್ದಾರೆ. ಸೈನ್ಯದ ಬಳಿ ಅತ್ಯಾಧುನಿಕ ಸಲಕರಣೆಗಳಿರಲಿಲ್ಲ. ಅಲ್ಲಿ ತಕ್ಷಣ ತಲುಪುವುದಕ್ಕೆ ಅದು ಅನಿರೀಕ್ಷಿತ ದಾಳಿಯಾಗಿತ್ತು ಎಂದು ಅವರು ಹೇಳಿದ್ದಾರೆ.
ಆಗ ನೆಹರೂ ಜೀ ಗುರು ಗೋಳ್ವಾಲ್ಕರ್ (ಆಗಿನ ಆರೆಸ್ಸೆಸ್ ಮುಖ್ಯಸ್ಥ ಎಂಎಸ್ ಗೋಳ್ವಾಲ್ಕರ್) ಅವರಿಗೆ ಪತ್ರ ಬರೆದು ಆರೆಸ್ಸೆಸ್ ಸ್ವಯಂಸೇವಕರ ನೆರವು ಕೇಳಿದ್ದರು. ಆರೆಸ್ಸೆಸ್ ಸ್ವಯಂಸೇವಕರು ಸಹಾಯ ಮಾಡುವ ಸಲುವಾಗಿ ಜಮ್ಮು- ಕಾಶ್ಮೀರಕ್ಕೆ ತೆರಳಿದ್ದರು" ಎಂದು ಉಮಾ ಭಾರತಿ ಹೇಳಿದ್ದಾರೆ.
ಯುದ್ಧ ಸಂದರ್ಭ ಬಂದರೆ ಆರೆಸ್ಸೆಸ್ ಸ್ವಯಂಸೇವಕರು ಮೂರು ದಿನದಲಿ ಮಾಡಿ ಮುಗಿಸುವುದಕ್ಕೆ ಸೈನ್ಯವು ಆರೇಳು ತಿಂಗಳು ತೆಗೆದುಕೊಳ್ಳುತ್ತದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಮೋಹನ್ ಭಾಗವತ್ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೆಸ್ಸೆಸ್ ಸಮರ್ಥನೆ ಮಾಡಿಕೊಂಡಿದೆ.