ಒಡಿಶಾ, ಆಂಧ್ರಪ್ರದೇಶ, ಕೇರಳದಲ್ಲಿ ಜವಾದ್ ಚಂಡಮಾರುತ: NDRFನ 64 ತಂಡ ನಿಯೋಜನೆ
ನವದೆಹಲಿ ಡಿಸೆಂಬರ್ 3: ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯನ್ನು ಜವಾದ್ ಚಂಡಮಾರುತ ಶನಿವಾರದಂದು ತಲುಪುವ ಸಾಧ್ಯತೆಯಿದೆ. ಜವಾದ್ ಚಂಡಮಾರುತ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ ಎಲ್ಲರ ಚಿತ್ತ 'ಜವಾದ್' ಚಂಡಮಾರುತದತ್ತ ನೆಟ್ಟಿದೆ. IMD ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದಾಗಿ ಸೈಕ್ಲೋನಿಕ್ ಮಾರುತವಾಗಿ ತೀವ್ರಗೊಂಡಿದೆ. ನಂತರ ಚಂಡಮಾರುತವು ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿಯುದ್ದಕ್ಕೂ ಉತ್ತರ-ಈಶಾನ್ಯಕ್ಕೆ ಚಲಿಸುತ್ತದೆ ಮತ್ತು ಡಿಸೆಂಬರ್ 5 ಮಧ್ಯಾಹ್ನದ ವೇಳೆಗೆ ಪುರಿಯ ಸುತ್ತಮುತ್ತಲಿನ ಕರಾವಳಿಯನ್ನು ಮುಟ್ಟುವ ಸಾಧ್ಯತೆಯಿದೆ. ಈ ಚಂಡಮಾರುತದ ಹೆಸರನ್ನು 'ಜವಾದ್' ಎಂದು ಸೌದಿ ಅರೇಬಿಯಾ ಪ್ರಸ್ತಾಪಿಸಿದೆ.
IMD ಎಚ್ಚರಿಕೆ
ಹವಾಮಾನ ಇಲಾಖೆಯ ಪ್ರಕಾರ, ಶುಕ್ರವಾರ ಸಂಜೆಯ ವೇಳೆಗೆ ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ದಕ್ಷಿಣ ಕರಾವಳಿ ಒಡಿಶಾದಲ್ಲಿ ಭಾರಿ ಮಳೆ ಪ್ರಾರಂಭವಾಗುವ ಸಾಧ್ಯತೆಯಿದೆ. ಶನಿವಾರ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು IMD ತಿಳಿಸಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳು ಮತ್ತು ಒಡಿಶಾದ ಗಜಪತಿ, ಗಂಜಾಂ, ಪುರಿ, ಜಗತ್ಸಿಂಗ್ಪುರ ಜಿಲ್ಲೆಗಳಿಗೆ ಶನಿವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗಿದ್ದು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹವಾಮಾನ ಎಚ್ಚರಿಕೆಯನ್ನು ರವಾನಿಸಲು ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿದೆ.
64 NDRF ತಂಡಗಳ ನಿಯೋಜನೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೇಲೆ ‘ಜವಾದ್' ಚಂಡಮಾರುತ ಪರಿಣಾಮ ಬೀರುವ ನಿರೀಕ್ಷೆಯಿಂದ 64 ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ. ಒಂದು NDRF ತಂಡವು ಸುಮಾರು 30 ಸಿಬ್ಬಂದಿಗಳನ್ನು ಹೊಂದಿದ್ದು ಈ ತಂಡ ಕಟ್ಟರ್ಗಳು, ಬೇರುಸಹಿತ ಮರಗಳನ್ನು ಕತ್ತರಿಸಲು ವಿದ್ಯುತ್ ಗರಗಸಗಳು, ಗಾಳಿ ತುಂಬಬಹುದಾದ ದೋಣಿ ಮತ್ತು ಇತರ ಕೆಲವು ಪರಿಹಾರ ಮತ್ತು ರಕ್ಷಣಾ ಗ್ಯಾಜೆಟ್ಗಳನ್ನು ಹೊಂದಿದ್ದಾರೆ. ಜೊತೆಗೆ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯು ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಡಗುಗಳು ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ.
ಪರಿಸ್ಥಿತಿಯನ್ನು ನಿಭಾಯಿಸುವ ವಿಶ್ವಾಸ ನಮಗಿದೆ
ಎನ್ಡಿಆರ್ಎಫ್ ಮಹಾನಿರ್ದೇಶಕ (ಡಿಜಿ) ಅತುಲ್ ಕರ್ವಾಲ್ ಮಾತನಾಡಿ, ದುರ್ಬಲ ರಾಜ್ಯಗಳಲ್ಲಿ 46 ತಂಡಗಳನ್ನು ನಿಯೋಜಿಸಲಾಗಿದೆ. 18 ತಂಡಗಳನ್ನು ಮೀಸಲು ಇರಿಸಲಾಗಿದೆ. ಪೀಡಿತ ರಾಜ್ಯಗಳು ಮತ್ತು ನಾಗರಿಕರಿಗೆ ಸಹಾಯ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು. ಚಂಡಮಾರುತದ ಎಚ್ಚರಿಕೆಯ ದೃಷ್ಟಿಯಿಂದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ಸಿಎಂಸಿ), ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಮತ್ತು ಇತರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಎನ್ಡಿಆರ್ಎಫ್ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ
ಉತ್ತರ ಆಂಧ್ರಪ್ರದೇಶ-ಒಡಿಶಾ ಕರಾವಳಿಗೆ ಅಪ್ಪಳಿಸಲಿರುವ ‘ಜವಾದ್' ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸನ್ನದ್ಧತೆಯನ್ನು ಪರಿಶೀಲಿಸಿದರು. ಸಭೆಯಲ್ಲಿ, ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜವಾದ್ ಚಂಡಮಾರುತದ ರಚನೆಯಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಂಬಂಧಿಸಿದ ರಾಜ್ಯಗಳು, ಕೇಂದ್ರ ಸಚಿವಾಲಯಗಳು ಮತ್ತು ಏಜೆನ್ಸಿಗಳ ಸನ್ನದ್ಧತೆಯನ್ನು ಪರಿಶೀಲಿಸಲು ಪಿಎಂ ಮೋದಿ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.ಗೃಹ ವ್ಯವಹಾರಗಳ ಸಚಿವಾಲಯ (MHA) 24×7 ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಬಂಧಿಸಿದ ಕೇಂದ್ರ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿಕೆ ತಿಳಿಸಿದೆ.
ವಿದ್ಯುತ್ ತುರ್ತು ವ್ಯವಸ್ಥೆ
MHA ಈಗಾಗಲೇ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (SDRF) ಮೊದಲ ಕಂತನ್ನು ಎಲ್ಲಾ ರಾಜ್ಯಗಳಿಗೆ ಮುಂಚಿತವಾಗಿ ಬಿಡುಗಡೆ ಮಾಡಿದೆ. ವಾಯುಪಡೆ ಮತ್ತು ಸೇನೆಯ ಇಂಜಿನಿಯರ್ ಟಾಸ್ಕ್ ಫೋರ್ಸ್ ಘಟಕಗಳು, ದೋಣಿಗಳು ಮತ್ತು ರಕ್ಷಣಾ ಸಾಧನಗಳೊಂದಿಗೆ ನಿಯೋಜನೆಗಾಗಿ ಸ್ಟ್ಯಾಂಡ್ಬೈನಲ್ಲಿವೆ ಎಂದು ಪಿಎಂಒ ತಿಳಿಸಿದೆ. ವಿದ್ಯುತ್ ಸಚಿವಾಲಯವು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದೆ ಮತ್ತು ವಿದ್ಯುಚ್ಛಕ್ತಿ ತಕ್ಷಣದ ಮರುಸ್ಥಾಪನೆಗಾಗಿ ಸಿದ್ಧತೆ ಟ್ರಾನ್ಸ್ಫಾರ್ಮರ್ಗಳು, ಡೀಸೆಲ್ ಜನರೇಟರ್ ಸೆಟ್ಗಳು ಮತ್ತು ಸಲಕರಣೆಗಳನ್ನು ಇರಿಸಿಕೊಂಡಿದೆ. ಸಂವಹನ ಸಚಿವಾಲಯವು ಎಲ್ಲಾ ಟೆಲಿಕಾಂ ಟವರ್ಗಳು ಮತ್ತು ಎಕ್ಸ್ಚೇಂಜ್ಗಳನ್ನು ನಿರಂತರ ನಿಗಾ ಇರಿಸುತ್ತಿದೆ ಮತ್ತು ಟೆಲಿಕಾಂ ನೆಟ್ವರ್ಕ್ ಅನ್ನು ಪುನಃಸ್ಥಾಪಿಸಲು ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಹೇಳಿಕೆ ತಿಳಿಸಿದೆ.
Recommended Video
ಕೇರಳದಲ್ಲೂ ಜವಾದ್ ಚಂಡಮಾರುತ ಎಫೆಕ್ಟ್
ತಿರುವನಂತಪುರಂ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಮಲಪ್ಪುರಂ, ವಯನಾಡ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಚಂಡಮಾರುತದಿಂದ ಲಕ್ಷದ್ವೀಪ ಮತ್ತು ಕೇರಳಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇರಳ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 3 ರಿಂದ 7 ರವರೆಗೆ ಕೇರಳದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಜನರು ಜಾಗರೂಕರಾಗಿರಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ಎಚ್ಚರಿಕೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಮಲಪ್ಪುರಂ, ವಯನಾಡ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಜಾಗರಣೆ ನಡೆಯಲಿದೆ. ಭಾರಿ ಮಳೆಯ ನಡುವೆಯೂ ಕಟ್ಟೆಚ್ಚರ ವಹಿಸುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ.