ಬುಮ್ರಾ ಮನ ನೋಯಿಸಿದ ಟ್ವೀಟ್ ಡಿಲೀಟ್ ಮಾಡಿದ ಜೈಪುರ ಪೊಲೀಸ್
ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನೊ ಬಾಲ್ ಎಸೆದಿದ್ದ ಭಾರತ ತಂಡದ ಜಸ್ ಪ್ರೀತ್ ಬುಮ್ರಾ ಫೋಟೋವೊಂದನ್ನು ಬಳಸಿದ್ದಕ್ಕೆ ಬುಮ್ರಾ ಅವರಲ್ಲಿ ಕ್ಷಮೆ ಕೋರಿದ ಜೈಪುರ ಪೊಲೀಸ್.
ಜೈಪುರ, ಜೂನ್ 24: ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ ಪ್ರೀತ್ ಬುಮ್ರಾ ಅವರ ಬೇಸರಕ್ಕೆ ಕಾರಣವಾಗಿದ್ದ ತಮ್ಮ ಇಲಾಖೆಯ ಟ್ವೀಟ್ ಒಂದನ್ನು ಜೈಪುರ ಪೊಲೀಸ್ ಡಿಲೀಟ್ ಮಾಡಿದೆ.
ಟ್ವೀಟ್ ಡಿಲೀಟ್ ಮಾಡಿದ ನಂತರ, ಟ್ವೀಟಟ್ ಮಾಡಿರುವ ಇಲಾಖೆ, 'ನಿಮ್ಮ ಮನಸ್ಸು ನೋಯಿಸಲೆಂದು ನಾವು ಈ ಟ್ವೀಟ್ ಮಾಡಿರಲಿಲ್ಲ. ಬದಲಿಗೆ, ಜನರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು ಮೂಡಿಸಲು ಪೂರಕವಾಗಿ ನಿಮ್ಮ ಫೋಟೋ ಬಳಸಿಕೊಂಡಿದ್ದೆವು' ಎಂದಿದೆ. ಅಲ್ಲದೆ, ಬುಮ್ರಾ ಅವರನ್ನು ಹಾಡಿ ಹೊಗಳಿರುವ ಇಲಾಖೆ, 'ನೀವು ಯುವಜನತೆಯ ಕಣ್ಮಣಿ' ಎಂದಿದೆ.
ಆದರೆ, ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದೇ ಎಂಬುದರ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿಲ್ಲ.
.@jaspritbumrah93, we only intended to create more awareness about traffic rules.
— Traffic Police JPR (@traffic_jpr) June 23, 2017
ಏನಾಗಿತ್ತು?
ಇತ್ತೀಚೆಗೆ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ತಾವು ಮಾಡಿದ್ದ ನೊ ಬಾಲ್ ಎಸೆತದ ಚಿತ್ರವನ್ನು ಟ್ರಾಫಿಕ್ ನಿಯಮಗಳ ಎಚ್ಚರಿಕೆ ಸಾರುವ ಚಿತ್ರಗಳಲ್ಲಿ ಬಳಸಿರುವ ಜೈಪುರ ಪೊಲೀಸರ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಜಸ್ ಪ್ರೀತ್ ಬುಮ್ರಾ ಮುನಿಸಿಕೊಂಡಿದ್ದರು.
.@jaspritbumrah93, you are a youth icon & an inspiration for all of us.
— Traffic Police JPR (@traffic_jpr) June 23, 2017
ಗೆರೆ ದಾಟಿದರೆ ಅನಾಹುತವಾದೀತು, ಪೊಲೀಸರ ವಿನೂತನ ಟ್ವೀಟ್!
ಇತ್ತೀಚೆಗೆ, ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬುಮ್ರಾ ಅವರು, ಬೌಲಿಂಗ್ ಮಾಡುವಾಗ ನೊ ಬಾಲ್ ಎಸೆದಿದ್ದರು. ಆದರೆ, ಅದೇ ಎಸೆತವನ್ನು ಎದುರಿಸಿದ್ದ ಪಾಕಿಸ್ತಾನದ ಬ್ಯಾಟ್ಸ್ ಮನ್ ಫಕ್ತರ್ ಜಮಾನ್ ಅವರು ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ಕೊಟ್ಟಿದ್ದರು.
ಆ ಎಸೆತ ನೊ ಬಾಲ್ ಆಗಿದ್ದರಿಂದ ಫಕ್ತರ್ ಅವರು ಬಚಾವಾದರು. ಆದರೆ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಫಕ್ತರ್ ಆನಂತರ ಬಿರುಸಿನ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದರು. ಅವರ ಶತಕದ ನೆರವಿನಿಂದಾಗಿ ಪಾಕಿಸ್ತಾನ ತಂಡವು, ಆ ಪಂದ್ಯದಲ್ಲಿ ಭಾರತ ತಂಡವನ್ನು 180 ರನ್ ಗಳ ಅಂತರದಲ್ಲಿ ಸೋಲಿಸಿ, ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಹೀಗೆ, ಬುಮ್ರಾ ಮಾಡಿದ ಒಂದು ತಪ್ಪು ಹೇಗೆ ದುಬಾರಿಯಾಗಿ ಪರಿಣಮಿಸಿತು ಎಂಬುದನ್ನು ಆಧಾರವಾಗಿಟ್ಟುಕೊಂಡು ಜೈಪುರ ಪೊಲೀಸರು ಟ್ರಾಫಿಕ್ ಸಿಗ್ನಲ್ ಬಳಿಯ ಗೆರೆಗಳನ್ನು ದಾಟಬೇಡಿ ಎಂಬ ಫಲಕಗಳನ್ನು ಜೈಪುರದಲ್ಲೆಲ್ಲಾ ಹಾಕಿದ್ದಾರೆ. ಇದರಲ್ಲಿ ಬುಮ್ರಾ ಅವರು ನೊ ಬಾಲ್ ಮಾಡಿದ (ಕ್ರೀಸ್ ಗೆರೆಯನ್ನು ದಾಟಿದ) ಚಿತ್ರವನ್ನು ಉಪಯೋಗಿಸಲಾಗಿದೆ. ಜತೆಗೆ ಇಂಥ ಒಂದು ಸಣ್ಣ ತಪ್ಪು ದುಬಾರಿಯಾಗಬಲ್ಲದು ಎಂಬ ಸಂದೇಶವನ್ನೂ ಹಾಕಲಾಗಿದೆ. ಇದು, ಬುಮ್ರಾಗೆ ತಪ್ಪಾಗಿ ಕಂಡಿದೆ.
ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100' ಸಹಾಯವಾಣಿಗೆ ಚಾಲನೆ
ಜೈಪುರ ಪೊಲೀಸರ ನಡೆಯನ್ನು ಟ್ವಿಟರ್ ನಲ್ಲಿ ಆಕ್ಷೇಪಿಸಿರುವ ಅವರು, ''ನಿಮ್ಮ ಈ ನಡೆ ದೇಶಕ್ಕೆ ನೀವು ಎಷ್ಟು ಗೌರವ ಕೊಡುತ್ತಿದ್ದೀರಿ ಎಂಬುದು ಗೊತ್ತಾಗುತ್ತದೆ'' ಎಂದು ಛೇಡಿಸಿದ್ದಾರೆ.
ಇದರಿಂದ ಎಚ್ಚೆತ್ತ ಜೈಪುರ ಪೊಲೀಸರು, ತಮ್ಮ ಈ ಫಲಕಗಳು ನಿಮ್ಮನ್ನು (ಬುಮ್ರಾ) ನೋಯಿಸಬೇಕೆಂಬ ದುರುದ್ದೇಶದಿಂದ ಕೂಡಿಲ್ಲ. ಜನರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು ಮೂಡಿಸುವುದಕ್ಕೋಸ್ಕರವಾಗಿ ಇದನ್ನು ಬಳಸಲಾಗಿದೆ'' ಎಂದು ಸ್ಪಷ್ಟನೆ ನೀಡಿದೆ.
ಆದರೆ, ಈ ಉತ್ತರ ಬುಮ್ರಾ ಅವರಿಗೆ ಸಮಾಧಾನ ತಂದಿಲ್ಲ. ಹಾಗಾಗಿ, ತಪ್ಪುಗಳು ಸಹಜ. ನೀವೂ ಮನುಷ್ಯರೇ ತಾನೆ. ನಿಮ್ಮಿಂದಲೂ ತಪ್ಪಾಗುತ್ತವೆ ಎಂದು ಮತ್ತೆ ಕಾಲೆಳೆದಿದ್ದಾರೆ.
ಅಸಲಿಗೆ, ಬುಮ್ರಾ ಅವರ ಈ ಚಿತ್ರವನ್ನು ಮೊದಲು ಬಳಸಿದ್ದು ಬೆಂಗಳೂರು ಟ್ರಾಫಿಕ್ ಪೊಲೀಸರು. ಇದನ್ನು ಜೈಪುರ ಪೊಲೀಸರು ಆನಂತರ ನಕಲು ಮಾಡಿದ್ದರು.