ಜಾಮೀನು ಬೇಕಾ? ಕೇರಳ ಪ್ರವಾಹ ನಿಧಿಗೆ ಹಣ ಕೊಡಿ: ಜಾರ್ಖಂಡ್ ಹೈ ಕೋರ್ಟ್
ರಾಂಚಿ (ಜಾರ್ಖಂಡ್), ಆಗಸ್ಟ್ 28: ಜಾರ್ಖಂಡ್ ನಲ್ಲಿ ಮೂವರು ಆರೋಪಿಗಳ ನಿರೀಕ್ಷಣಾ ಜಾಮೀನಿಗೆ ಹೈ ಕೋರ್ಟ್ ಮಂಜೂರು ಮಾಡಿದ ರೀತಿ ಆಸಕ್ತಿಕರವಾಗಿದೆ. ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಪಾವತಿಸಬೇಕು ಎಂಬ ನಿಬಂಧನೆ ಪೂರೈಸಿದ ಮೂವರಿಗೆ ಹೈ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಕೇರಳದಲ್ಲಿನ ಸದ್ಯದ ಸನ್ನಿವೇಶಕ್ಕೆ ಸಹಾಯದ ಅಗತ್ಯ ಇರುವುದನ್ನು ನ್ಯಾಯಮೂರ್ತಿ ಎ.ಬಿ.ಸಿಂಗ್ ಅವರ ಪೀಠವು ಗಮನಿಸಿದೆ. ವಂಚನೆ ಹಾಗೂ ಫೋರ್ಜರಿ ಪ್ರಕರಣದಲ್ಲಿ ಆರೋಪಿಯಾಗಿರುವ ಉತ್ಪಲ್ ರೇ ಎಂಬಾತ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದು, ಪ್ರವಾಹ ಪರಿಹಾರ ನಿಧಿಗೆ ಏಳು ಸಾವಿರ ರುಪಾಯಿ ಪಾವತಿಸಿದರೆ ಜಾಮೀನು ನೀಡಲಾಗುವುದು ಎಂದು ಪ್ರಕರಣವು ವಿಚಾರಣೆಗೆ ಬಂದಾಗ ತಿಳಿಸಲಾಗಿದೆ.
ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...
ವಂಚನೆ ಪ್ರಕರಣದ ಆರೋಪಿಗಳಾದ ಧಾನೇಶ್ವರ್ ಮಂಡಲ್ ಮತ್ತು ಶಂಭು ಮಂಡಲ್ ಕೂಡ ಇದೇ ರೀತಿಯಲ್ಲಿ ಐದು ಸಾವಿರ ರುಪಾಯಿಯನ್ನು ಪರಿಹಾರ ನಿಧಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಹಣವನ್ನು ಪರಿಹಾರ ನಿಧಿಗೇ ಪಾವತಿಸಿರುವುದಕ್ಕೆ ಸಾಕ್ಷ್ಯವನ್ನು ಕೋರ್ಟ್ ಗೆ ಸಲ್ಲಿಸಬೇಕು ಎಂದು ಹೇಳಿತ್ತು.
ಮಧ್ಯಪ್ರದೇಶ ಹಾಗೂ ಕರ್ನಾಟಕ ಹೈ ಕೋರ್ಟ್ ಸಹ ಇಂಥದ್ದೇ ಸೂಚನೆ ನೀಡಿವೆ. ಕೇರಳ ಪ್ರವಾಹ ಪರಿಹಾರ ನಿಧಿಗೆ ಹಣ ಪಾವತಿಸಲು ತಿಳಿಸಲಾಗಿದೆ ಎಂದು ಜಾರ್ಖಂಡ್ ಹೈ ಕೋರ್ಟ್ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಸಿಕರ್ವರ್ ತಿಳಿಸಿದ್ದಾರೆ.