ಜನತಾ ಪರಿವಾರ ವಿಲೀನ : ಯಾರು, ಏನು ಹೇಳಿದರು?
ನವದೆಹಲಿ, ಏ. 15 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಎದುರಿಸಲು ಕೇಂದ್ರದಲ್ಲಿ ಆರು ಪಕ್ಷಗಳು ಒಟ್ಟಾಗಿ ಕೈ ಜೋಡಿಸಿದ್ದು ಜನತಾ ಪರಿವಾರ ಒಂದಾಗಿದೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರು ಹೊಸ ಪಕ್ಷದ ನೇತೃತ್ವ ವಹಿಸಿದ್ದಾರೆ.
ನವದೆಹಲಿಯ ಮುಲಾಯಂಸಿಂಗ್ ಯಾದವ್ ನಿವಾಸದಲ್ಲಿ ಬುಧವಾರ ಸಂಜೆ ನಡೆದ ಸಭೆಯ ಬಳಿಕ ಜನತಾ ಪರಿವಾರದ ವಿಲೀನದ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. ಆರು ಪಕ್ಷಗಳ ಮುಖಂಡರ ಜತೆ ಸಮಾಲೋಚನೆ ನಡೆಸಿ ಪಕ್ಷದ ಹೆಸರು, ಚಿಹ್ನೆ ಮತ್ತು ಧ್ವಜವನ್ನು ನಿರ್ಧರಿಸಲಾಗುವುದು ಎಂದು ಶರದ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.[ಜನತಾ ಪರಿವಾರಕ್ಕೆ ಮುಲಾಯಂ ಕಿಂಗ್]
ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯನ್ನು ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಎದುರಿಸಲಿವೆ. 2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿಯೂ ಈ ವಿಲೀನ ಮಹತ್ವ ಪಡೆದುಕೊಂಡಿದೆ. ಆದರೆ, ಬಿಜೆಪಿ ಜನತಾ ಪರಿವಾರ ವಿಲೀನವನ್ನು ಲೇವಡಿ ಮಾಡಿದೆ.
ಜನತಾ ಪರಿವಾರದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಾರ್ಟಿ, ಎಚ್.ಡಿ.ದೇವೇಗೌಡ ನೇತೃತ್ವದದ ಜೆಡಿಎಸ್, ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಕಮಲ್ ಮೊರಾರ್ಕಾ ನೇತೃತ್ವದ ಸಮಾಜವಾದಿ ಜನತಾ ಪಕ್ಷ, ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಮತ್ತು ಓಂ ಪ್ರಕಾಶ್ ಚೌಟಾಲ ನೇತೃತ್ವದ ಐಎನ್ಎಲ್ಡಿ ಪಕ್ಷಗಳಿವೆ. ಜನತಾ ಪರಿವಾರ ವಿಲೀನ ಯಾರು, ಏನು ಹೇಳಿದರು?
ಅವಕಾಶವಾದಿಗಳ ಪರಿವಾರ
ಜನತಾ ಪರಿವಾರ ವಿಲೀನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 'ಇದು ಅವಕಾಶವಾದಿಗಳ ಪರಿವಾರ, ಬಿಜೆಯ ಭಯದಿಂದಾಗಿ ಎಲ್ಲರೂ ಒಂದಾಗಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.
ದಳ ಒಂದಾಗಿದೆ, ದಿಲ್?
ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಜನತಾ ಪರಿವಾರ ವಿಲೀನದ ಬಗ್ಗೆ ವ್ಯಂಗ್ಯವಾಡಿದ್ದಾರೆ. 'ಈ ದಳ ಒಂದಾಗಿದೆ. ಮನಸ್ಸು ಒಂದಾಗಿದೆಯೇ? ಎಂದು ಪ್ರಶ್ನಿಸಿರುವ ಅವರು, ದಿಲ್ ಏಕ್ ಹುವಾ ಹೇ? ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ ಎಂದು ಕುಟುಕಿದ್ದಾರೆ.
|
ಎಲ್ಲರೂ ಅಧಿಕಾರಕ್ಕಾಗಿ ಓಡುತ್ತಿದ್ದಾರೆ
ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಜನತಾ ಪರಿವಾರದ ವಿಲೀನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜನತಾ ಪರಿವಾರದ ವಿಜಯವೋ, ಪರಾಜಯವೋ?
'ಜನತಾ ಪರಿವಾರದ ವಿಜಯವಾಗಲಿ, ಪರಾಜಯವಾಗಲಿ. ಬಿಜೆಪಿ ಏನು ಕೊಟ್ಟು ತೆಗೆದುಕೊಳ್ಳಬೇಕಾಗಿಲ್ಲ' ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪರಿವಾರದ ವಿಲೀನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾ ವಿಜಯವಲ್ಲ, ನಿತೀಶ್ ಮಹಾ ಪ್ರಳಯ
ಜನತಾ ಪರಿವಾರ ವಿಲೀನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಜಿ 'ಇದು ನಿತೀಶ್ ಕುಮಾರ್ ಮಹಾ ವಿಜಯವಲ್ಲ, ಮಹಾ ಪ್ರಳಯ' ಎಂದು ಹೇಳಿದ್ದಾರೆ.
|
ಬಿಹಾರದಲ್ಲಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ
ಜನತಾ ಪರಿವಾರ ಒಂದಾದರೂ ಬಿಹಾರದಲ್ಲಿ ಬಿಜೆಪಿ ಎದುರಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಹೇಳಿದ್ದಾರೆ.