ಜನಧನ ಯೋಜನೆಯಡಿ ಜೀವ ವಿಮಾ ಸೌಲಭ್ಯ
ಮುಂಬೈ, ಸೆ. 30 : ಪ್ರಧಾನಿ ಮಂತ್ರಿ ಜನಧನ ಯೋಜನೆಯಡಿ ಖಾತೆ ತೆರದ ಪ್ರತಿಯೊಬ್ಬರಿಗೂ ಜೀವ ವಿಮೆ ನೀಡಲು ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಜಿ.ಎಸ್. ಸಂಧು ತಿಳಿಸಿದ್ದಾರೆ.
ಇಂಡೋ-ಅಮೆರಿಕನ್ ವಾಣಿಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಜನಧನ ಯೋಜನೆಯಡಿ ಈಗಾಗಲೇ ಒಂದು ಲಕ್ಷ ರೂ. ಅಪಘಾತ ವಿಮೆ ನೀಡಿಕೆ ಚಾಲ್ತಿಯಲ್ಲಿದೆ. ಎಚ್ಡಿಎಫ್ಸಿ ಇದರ ಜವಾಬ್ದಾರಿ ಹೊತ್ತುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.(ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?)
ಅದರೊಂದಿಗೆ ಈಗ 30 ಸಾವಿರ ರೂ. ಜೀವ ವಿಮೆ ಒದಗಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಯೋಜನೆಯ ಜವಾಬ್ದಾರಿಯನ್ನು ಎಲ್ಐಸಿ ವಹಿಸಿಕೊಳ್ಳಲಿದೆ ಎಂದು ಸಂಧು ತಿಳಿಸಿದ್ದಾರೆ.
ಎಲ್ಲರಿಗೂ ವಿಮೆ ಲಾಭ ತಲುಪಬೇಕು ಎಂಬ ಚಿಂತನೆ ಇಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದೆ. ಸಂಪೂರ್ಣ ರೂಪುರೇಷೆ ಇನ್ನು ಸಿದ್ಧವಾಗಬೇಕಿದೆ. 30 ಸಾವಿರ ರೂ. ವಿಮೆಯ ಪ್ರಿಮಿಯಂ ಯಾರು ತುಂಬಬೇಕು? ಅದನ್ನು ಸರ್ಕಾರವೇ ನೀಡುತ್ತದೆಯೋ? ಇನ್ಶೂರೆನ್ಸ್ ಕಂಪನಿ ನೀಡುತ್ತದೆಯೋ ಅಥವಾ ಖಾತೆದಾರರೇ ತುಂಬಬೇಕೋ ಎಂಬುದರ ಕುರಿತು ಕೆಲ ಗೊಂದಲಗಳಿದ್ದು ಅದನ್ನು ನಿವಾರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.(ಅಕ್ಟೋಬರ್ ಮೊದಲ ವಾರವಿಡೀ ಬ್ಯಾಂಕ್ ತೆರೆಯಲ್ಲ)
ಮೈಕ್ರೋ ವಿಮೆಯನ್ನು ಇನಷ್ಟು ಜನರಿಗೆ ವಿಸ್ತರಿಸಬೇಕಿದೆ. ಕೇವಲ 50 ಲಕ್ಷ ಜನ ಈ ಸೌಲಭ್ಯಕ್ಕೆ ಒಳಪಡುತ್ತಿದ್ದು ಅದನ್ನು 30 ಕೋಟಿ ಜನರಿಗೆ ವಿಸ್ತರಿಸುವ ಗುರಿಯಿದೆ. 50 ಸಾವಿರದವರೆಗೂ ವಿಮಾ ಸೌಲಭ್ಯ ಪಡೆಯಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಈ ಎಲ್ಲ ಗೊಂದಲ ನಿವಾರಿಸಿ ಎಲ್ಲರಿಗೂ ಸರ್ಕಾರದ ಸವಲತ್ತು ತಲುಪುವಂತೆ ಮಾಡಲಾಗುವುದು. ಜನರಲ್ಲಿ ವಿಮಾ ಸೌಲಭ್ಯದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.