ಜನ ಆಶೀರ್ವಾದ ಯಾತ್ರೆ: ಆ. 16 ರಿಂದ 43 ಕೇಂದ್ರ ಸಚಿವರುಗಳಿಂದ ತಲಾ 400 ಕಿಮೀ ಪ್ರಯಾಣ
ನವದೆಹಲಿ, ಜು.31: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಮ್ಮ 43 ನೂತನ ಸಚಿವರುಗಳನ್ನು ಪರಿಚಯಿಸಲು ಅನುಮತಿ ನೀಡಲಾಗಿಲ್ಲ. ಆದರೆ ಪಕ್ಷವು ಆ ಸಚಿವರುಗಳನ್ನು 19 ರಾಜ್ಯಗಳಲ್ಲಿ ಆಗಸ್ಟ್ 16 ರಿಂದ ಆರಂಭವಾಗುವ ಮೂರು ದಿನಗಳ ಸುದೀರ್ಘ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ಸಾಮಾನ್ಯ ಜನರಿಗೆ ಪರಿಚಯಿಸಲಿದೆ.
ನ್ಯೂಸ್ 18 ವಿಸ್ತೃತ ಯೋಜನೆಯ ವಿವರಗಳನ್ನು ಪಡೆದಿದ್ದು ಈ ಬಗ್ಗೆ ವರದಿ ಪ್ರಕಟಿಸಿದೆ. ಈ ಜನ ಆಶೀರ್ವಾದ ಯಾತ್ರೆಯಡಿಯಲ್ಲಿ 43 ಸಚಿವರು ಪ್ರತಿಯೊಬ್ಬರೂ ದೆಹಲಿಯಿಂದ ತೆರಳಿ ತಮ್ಮ ತವರು ಕ್ಷೇತ್ರದಿಂದ ಸುಮಾರು 300-400 ಕಿಲೋಮೀಟರ್ ದೂರದಲ್ಲಿ ಇಳಿಯಲಿದ್ದಾರೆ. ಬಳಿಕ ಮುಂದಿನ ಮೂರು ದಿನಗಳಲ್ಲಿ ತೆರೆದ ವಾಹನದಲ್ಲಿ ಮೂರು ನಾಲ್ಕು ಲೋಕಸಭಾ ಕ್ಷೇತ್ರಗಳ ಮೂಲಕ ಹಾದುಹೋಗುತ್ತಾರೆ. ಈ ಮೂಲಕ ಬಿಜೆಪಿಯು ಸುಮಾರು 150 ಲೋಕಸಭಾ ಕ್ಷೇತ್ರಗಳನ್ನು ಮತ್ತು 15,000 ಕಿ.ಮೀ.ಗಳಲ್ಲಿ ತನ್ನ ಆಶೀರ್ವಾದ ಯಾತ್ರೆ ನಡೆಸಲು ಯೋಜಿಸಿದೆ. ಈ ನಡುವೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ಮುಂದಿನ ಚುನಾವಣೆಯ ಕಾರ್ಯತಂತ್ರದ ಭಾಗವೂ ಇದಾಗಿದೆ ಎನ್ನಲಾಗಿದೆ.
ಯುಪಿಯಲ್ಲಿ ಬ್ರಾಹ್ಮಣರ ಮತಕ್ಕೆ ಬಲೆ: ವಿಪಕ್ಷದ ಓಲೈಕೆ, ಬಿಜೆಪಿಯಿಂದ ಉಳಿಸಿಕೊಳ್ಳುವ ಪ್ರಯತ್ನ
ಉದಾಹರಣೆಗೆ, ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಮೂರು ದಿನಗಳ ಕಾಲ ತಮ್ಮ ಕ್ಷೇತ್ರವಾದ ಆರಾಹ್ ಕಡೆಗೆ ಪ್ರಯಾಣಿಸಲು ಗಯಾದಲ್ಲಿ ಬಂದಿಳಿಯುತ್ತಾರೆ. ಹಾಗೆಯೇ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅಲ್ವಾರ್ ಕಡೆಗೆ ಹೋಗಲು ರಾಜಸ್ಥಾನದಲ್ಲಿ ಇಳಿಯುತ್ತಾರೆ. ಸಚಿವರುಗಳು ಹಳ್ಳಿಗಳಲ್ಲಿ ಅಥವಾ ಸಣ್ಣ ಪಟ್ಟಣಗಳಲ್ಲಿ ರಾತ್ರಿ ಉಳಿದುಕೊಳ್ಳುತ್ತಾರೆ. ಬಳಿಕ ಮೂರು ದಿನಗಳ ಪ್ರಯಾಣದಲ್ಲಿ ಪ್ರಮುಖ ಧಾರ್ಮಿಕ ಸಂತರು, ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಆಟಗಾರರು, ಹುತಾತ್ಮರ ಕುಟುಂಬಗಳು, ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುತ್ತಾರೆ. ಹಾಗೆಯೇ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಪೂಜೆ ಸಲ್ಲಿಸುತ್ತಾರೆ.
ಹಳೆ ರೂಢಿ ಮುರಿಯಲು ಬಯಸುವ ಮೋದಿ
ಜನ ಆಶೀರ್ವಾದ ಯಾತ್ರೆ ತಮ್ಮ ಪ್ರದೇಶದ ಮೂಲಕ ಹಾದುಹೋಗುವಾಗ ಅಂದರೆ ಆಗಸ್ಟ್ 16 ರಿಂದ ಎಲ್ಲಾ ಬಿಜೆಪಿ ಸಂಸದರು ಕೂಡ ತಮ್ಮ ಕ್ಷೇತ್ರದಲ್ಲಿ ಇರಬೇಕೆಂದು ಈಗಾಗಲೇ ಬಿಜೆಪಿ ಪಕ್ಷವು ಸೂಚಿಸಿದೆ. "ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲು, ಇತಿಹಾಸದಲ್ಲಿ ಕೇಂದ್ರ ಸಚಿವರು ಮರದ ಕೊಂಬೆಯ ಮೇಲೆ ಹಣ್ಣುಗಳಂತೆ ಇರುತ್ತಿದ್ದರು. ಹಾಗೆಯೇ ಸಾರ್ವಜನಿಕರಿಗೆ ದೂರವಿರುತ್ತಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಹಳೆಯ ಪುರಾಣ ಮುರಿಯಲು ಬಯಸಿದ್ದಾರೆ. ತನ್ನ ಸಚಿವ ಮಂಡಳಿಯ ಪ್ರತಿಯೊಬ್ಬ ಸಚಿವರು ಜನರೊಂದಿಗೆ ಸಂಪರ್ಕ ಹೊಂದಿರಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯಸುತ್ತಾರೆ. ಹಾಗೆಯೇ ಸಾರ್ವಜನಿಕರೂ ಸಹ ಸಚಿವರುಗಳೊಂದಿಗೆ ಸಂಪರ್ಕವನ್ನು ಈ ಜನ ಆಶೀರ್ವಾದ ಯಾತ್ರೆ ಮೂಲಕ ಪಡೆಯಬಹುದಾಗಿದೆ," ಎಂದು ಪಕ್ಷದ ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.
ಪ್ರಥಮ ಬಾರಿ ಒಬಿಸಿ, ಹಿಂದುಳಿದ ವರ್ಗಕ್ಕೆ ಪ್ರಾತಿನಿಧ್ಯ
"ಇತ್ತೀಚಿನ ಸಚಿವ ಸಂಪುಟ ವಿಸ್ತರಣೆಯು ಸಮತೋಲನ ಮತ್ತು ವ್ಯಾಪಕ ಪ್ರಾತಿನಿಧ್ಯಕ್ಕೆ ಉದಾಹರಣೆಯಾಗಿದೆ. ಒಂದೆಡೆ, 11 ಮಹಿಳಾ ಸಚಿವರುಗಳು ಮಂತ್ರಿ ಮಂಡಳಿಯಲ್ಲಿ ಸ್ಥಾನ ಪಡೆದರೆ ಮತ್ತೊಂದೆಡೆ, ಗರಿಷ್ಠ ಸಂಖ್ಯೆಯ ಪ್ರದೇಶಗಳು ಪ್ರಾತಿನಿಧ್ಯ ಪಡೆದಿವೆ," ಎಂದು ನಿರ್ದೇಶನ ಹೇಳುತ್ತದೆ. ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು, "ಅನೇಕ ಒಬಿಸಿ ವರ್ಗ, ಹಿಂದುಳಿದ ಜಾತಿಗಳು ಮೊದಲ ಬಾರಿಗೆ ಮಂತ್ರಿಗಳ ಮಂಡಳಿಯಲ್ಲಿ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಹಿಂದುಳಿದ ಪ್ರದೇಶಗಳು ಮೊದಲ ಬಾರಿಗೆ ಮಂತ್ರಿ ಮಂಡಳಿಯಲ್ಲಿ ಪ್ರಾತಿನಿಧ್ಯ ಪಡೆದುಕೊಂಡಿದೆ. ತಮ್ಮ ಪ್ರದೇಶ ಅಥವಾ ಜಾತಿಗೆ ಸೇರಿದ ಜನರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಎಂಬುವುದನ್ನು ಜನರಿಗೆ ಸ್ಪಷ್ಟವಾಗಿ ತಿಳಿಸುವುದು ಈ ಯಾತ್ರಯ ಹಿಂದಿರುವ ಉದ್ದೇಶವಾಗಿದೆ," ಎಂದು ತಿಳಿಸಿದರು.
ಯುಪಿ ಚುನಾವಣೆ ಅಖಾಡ: ಪವಾರ್-ಅಖಿಲೇಶ್ ಮೈತ್ರಿ, ಕುತೂಹಲ ಮೂಡಿಸಿದ ರಣತಂತ್ರ
ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮೋದಿ
ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷಗಳು ಮತ್ತು ಅದರ "ಮನಸ್ಥಿತಿ" ಯನ್ನು ತರಾಟೆಗೆ ತೆಗೆದುಕೊಂಡರು. ಹೊಸದಾಗಿ ಸಚಿವರಾಗಿ ಆಯ್ಕೆಯಾದ ಮಹಿಳೆಯರು, ದಲಿತರು ಮತ್ತು ಪರಿಶಿಷ್ಟ ಪಂಗಡದ ಸಂಸದರನ್ನು ಸಂಸತ್ತಿನಲ್ಲಿ ಪರಿಚಯಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ವಿರೋಧಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದರು. ಗ್ರಾಮೀಣ ಹಿನ್ನೆಲೆಗೆ ಸೇರಿದ ಹೊಸ ಕೇಂದ್ರ ಮಂತ್ರಿಗಳನ್ನು ಮತ್ತು ರೈತ ಸಮುದಾಯದ ಮಕ್ಕಳನ್ನು ಪರಿಚಯಿಸಲು ಪ್ರಯತ್ನಿಸುತ್ತಿರುವಾಗ, ಕೆಲವು ವಿರೋಧ ಪಕ್ಷದ ಸದಸ್ಯರು ಸಂತೋಷವಾಗಿಲ್ಲ ಎಂದು ತೋರಿಸಿದರು ಎಂದು ಮೋದಿ ಹೇಳಿದ್ದರು. ಇದೀಗ ಈ ಹಿನ್ನೆಲೆ ಬಿಜೆಪಿ ಪಕ್ಷವು ಜನ ಆಶೀರ್ವಾದ ಯಾತ್ರೆಯ ಮೂಲಕ, ಸಾರ್ವಜನಿಕರಲ್ಲಿ ಸಂದೇಶವನ್ನು ಬಲಪಡಿಸುತ್ತದೆ ಮತ್ತು ಸಾರ್ವಜನಿಕರ ಆಶೀರ್ವಾದವನ್ನು ಪಡೆಯುತ್ತದೆ ಎಂದು ಹೇಳಿಕೊಂಡಿದೆ.
ಚುನಾವಣೆಗೂ ಮುನ್ನ ಆರ್ಎಸ್ಎಸ್ನಲ್ಲಿ ಬದಲಾವಣೆ: ನೂತನ ಬಿಜೆಪಿ ಸಂಪರ್ಕ್ ಅಧಿಕಾರಿ ಅರುಣ್ ಯಾರು?
ಭವ್ಯ, ಆಕರ್ಷಕ, ಪರಿಣಾಮಕಾರಿ ಜನ ಆಶೀರ್ವಾದ ಯಾತ್ರೆ
ಜನ ಆಶೀರ್ವಾದ ಯಾತ್ರೆಯು "ಭವ್ಯ, ಆಕರ್ಷಕ ಮತ್ತು ಪರಿಣಾಮಕಾರಿಯಾಗಿರಬೇಕು ಮತ್ತು ಸಾಮಾನ್ಯ ಜನರನ್ನು ತಲುಪಬೇಕು" ಎಂದು ಪಕ್ಷದ ನಿರ್ದೇಶನ ಹೇಳುತ್ತದೆ. ಸಚಿವರುಗಳು ಹೊಸ ಜಿಲ್ಲೆಯನ್ನು ಪ್ರವೇಶಿಸಿದಾಗ ಸಚಿವರುಗಳನ್ನು ಪ್ರೀತಿಯಿಂದ ಸ್ವಾಗತಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ದೂರ ಮತ್ತು ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ಗಳನ್ನು ಬಳಸುವುದು ಮುಂತಾದ ಎಲ್ಲಾ ಕೊರೊನಾ ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸಹ ಉಲ್ಲೇಖಿಸಲಾಗಿದೆ. ಈ ಭವ್ಯ, ಆಕರ್ಷಕ ಜನ ಆಶೀರ್ವಾದ ಯಾತ್ರೆಯ ಮಾರ್ಗದುದ್ದಕ್ಕೂ ಪ್ರಧಾನ ಮಂತ್ರಿ ಮೋದಿ ಸರ್ಕಾರದಿಂದ ಮಾಡಿದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುವ ಬ್ಯಾನರ್, ಪ್ಲಕ್ ಕಾರ್ಡ್ಗಳನ್ನು, ಹೋರ್ಡಿಂಗ್ಗಳನ್ನು ಹಾಕಬೇಕು. ಪ್ರಧಾನಮಂತ್ರಿಗಳ ಚಿತ್ರ ಮತ್ತು ಬಿಜೆಪಿಯ 'ಕಮಲ' ಚಿಹ್ನೆಯ ದೊಡ್ಡ ಕಟ್ ಔಟ್ ಇರಬೇಕು ಎಂದು ಹೇಳಲಾಗಿದೆ.
ಯಾತ್ರೆಯಲ್ಲಿ ವಿವಿಧ ನಿಲುಗಡೆಗಳಲ್ಲಿ ಸಣ್ಣ ಮತ್ತು ಪರಿಣಾಮಕಾರಿ ಭಾಷಣಗಳನ್ನು ಮಾಡಲು ಮತ್ತು ಮೋದಿ ಸರ್ಕಾರದ ಉದ್ದೇಶಗಳ ಬಗ್ಗೆ ಮಾತನಾಡಲು, ವಿವಿಧ ಯೋಜನೆಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಲು ಸಚಿವರುಗಳಿಗೆ ತಿಳಿಸಲಾಗಿದೆ. "ಎಲ್ಲಾ ಹೊಸ ಮತ್ತು ಹಳೆಯ ಪಕ್ಷದ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಬೇಕು. ವ್ಯಾಪಕವಾದ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಯಬೇಕು," ಎಂದು ಪಕ್ಷದ ನಿರ್ದೇಶನ ಹೇಳುತ್ತದೆ. ಈ ಜನ ಆಶೀರ್ವಾದ ಯಾತ್ರೆಗಾಗಿ ಒಟ್ಟು 19 ರಾಜ್ಯ ಮುಖ್ಯಸ್ಥರು, ಒರ್ವ ಉಸ್ತುವಾರಿ ಮತ್ತು 43 ಯಾತ್ರೆಯ ತಲಾ ನಾಲ್ಕು ಸಹ-ಉಸ್ತುವಾರಿಗಳು ಮತ್ತು ಯಾತ್ರೆಯ ಮಾಧ್ಯಮ ಉಸ್ತುವಾರಿಗಳನ್ನು ನೇಮಿಸಲಾಗುತ್ತದೆ.
ಬಿಜೆಪಿಯನ್ನು ಸೋಲಿಸಲು 'ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ' ಪ್ರಾರಂಭ: ಟಿಕಾಯತ್ ಘೋಷಣೆ
ಎಲ್ಲೆಲ್ಲಿ ನಡೆಯಲಿದೆ ಈ ಯಾತ್ರೆ
ಈ ಜನ ಆಶೀರ್ವಾದ ಯಾತ್ರೆಯು ಒಟ್ಟು ಹತ್ತೊಂಬತ್ತು ರಾಜ್ಯಗಳಲ್ಲಿ ನಡೆಯಲಿದೆ. ನವದೆಹಲಿ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ತ್ರಿಪುರಾ, ಜಾರ್ಖಂಡ್, ಗುಜರಾತ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ತಮಿಳುನಾಡು, ಒಡಿಶಾ, ಮಣಿಪುರ, ಮಹಾರಾಷ್ಟ್ರ, ಅಸ್ಸಾಂ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಈ ಯಾತ್ರೆಗಳು ನಡೆಯಲಿದೆ. ಈ ರಾಜ್ಯಗಳ ಈ ಯಾತ್ರೆಯ ಉಸ್ತುವಾರಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಎಂ. ಚುಬಾ ಆಓ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿಗಳಾದ ಅರವಿಂದ್ ಮೆನನ್, ವಿನೋದ್ ಸೋಂಕರ್, ಸುನಿಲ್ ದೇವಧರ್, ಸತ್ಯ ಕುಮಾರ್ ಮತ್ತು ಪಂಕಜಾ ಮುಂಡೆ ನಡುವೆ ವಿಂಗಡಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
Recommended Video