ಕಾಶ್ಮೀರಕ್ಕೆ ಆಗಿದ್ದು ದೇಶದ ಯಾವ ರಾಜ್ಯಕ್ಕಾದರೂ ಆಗಬಹುದು: ಶಶಿ ತರೂರ್
ನವದೆಹಲಿ, ಸೆಪ್ಟೆಂಬರ್ 6: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜಮ್ಮು- ಕಾಶ್ಮೀರದಲ್ಲಿ ಪರಿಚ್ಛೇದ 370 ವಾಪಸ್ ಪಡೆಯಲು ಬಳಸಿದ ವಿಧಾನವನ್ನು ತನ್ನ ಉದ್ದೇಶ ಈಡೇರಿಸಿಕೊಳ್ಳಲು ದೇಶದ ಯಾವ ರಾಜ್ಯದಲ್ಲಾದರೂ ಅನುಸರಿಸಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ.
"ಜನರ ಆಶಯ ಹಾಗೂ ಉದ್ದೇಶಗಳನ್ನು ಗೌರವಿಸುವುದು ಶಾಸಕಾಂಗದ ಹಕ್ಕು. ಆದರೆ ಕಾಶ್ಮೀರ ಜನರ ಆಶಯ ಹಾಗೂ ಉದ್ದೇಶ ದಿಢೀರನೇ ಸಂಸತ್ ಗೆ ವರ್ಗಾವಣೆ ಆಯಿತು. ಅಲ್ಲಿ ಬಿಜೆಪಿಗೆ ಬಹುಮತ ಇದೆ. ಅಲ್ಲಿ ಕೇವಲ ನಾಲ್ವರು ಕಾಶ್ಮೀರಿ ಸಂಸದರು ಇದ್ದಾರೆ. ಅದರಲ್ಲಿ ಒಬ್ಬರು ಶ್ರೀನಗರ್ ನಲ್ಲಿ ಗೃಹ ಬಂಧನದಲ್ಲಿ ಇದ್ದರು. ಭಾರತದ ಪ್ರಜಾಪ್ರಭುತ್ವ ಈಗ ಉತ್ತಮ ಸ್ಥಿತಿಯಲ್ಲಿದೆಯಾ, ಅಥವಾ ಸಂವಿಧಾನದ ಮೂಲ ಆಶಯದ ಉಲ್ಲಘನೆ ಆಗುತ್ತಿದೆಯಾ?
ಕಾಂಗ್ರೆಸ್ ಅಧ್ಯಕ್ಷರ ಗೊಂದಲ ನಿವಾರಣೆಗೆ ಇಂದೊಂದೇ ಮಾರ್ಗ: ಶಶಿ ತರೂರ್
"ಹೀಗೆ ಕಾಶ್ಮೀರದಲ್ಲಿ ಮಾಡುವುದಕ್ಕೆ ಈ ದಿನ ಸಾಧ್ಯವಾದರೆ, ನಾಳೆ ದೇಶದ ಯಾವುದೇ ಭಾಗದಲ್ಲಿ ಹೀಗೆ ಮಾಡಬಹುದು," ಎಂದು ಶಶಿ ತರೂರ್ ಹೇಳಿರುವ ವಿಡಿಯೋವನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದು ಮಾಡಿದ ಒಂದು ತಿಂಗಳಿಗೆ ಸರಿಯಾಗಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವ ನಮ್ಮಂಥ ಜನರಿಗೆ ಸರಕಾರದ ನಡೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜಮ್ಮು- ಕಾಶ್ಮೀರದಲ್ಲಿ ಶಾಸಕಾಂಗ ಅಮಾನತಿನಲ್ಲಿ ಇರುವಾಗ ಸ್ಥಾನಮಾನ ಬದಲಾವಣೆ ಮಾಡಲಾಗಿದೆ. ರಾಜ್ಯಪಾಲರನ್ನು ಕೇಂದ್ರ ಸರಕಾರ ನೇಮಕ ಮಾಡುತ್ತದೆ. ರಾಜ್ಯದಲ್ಲಿ ಶಾಸಕಾಂಗ ಅಮಾನತಿನಲ್ಲಿ ಇರುವಾಗ ರಾಜ್ಯಪಾಲರು ತಾವೇ ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದು ಕೂಡ ಕೇಂದ್ರ ಸರಕಾರಕ್ಕೆ ಬೇಕಾದಂತೆ ಎಂದಿದ್ದಾರೆ ತರೂರ್.
'ಹಿಂದೂ ಪಾಕಿಸ್ತಾನ' ಹೇಳಿಕೆ ನೀಡಿದ್ದ ಸಂಸದ ಶಶಿ ತರೂರ್ ಗೆ ಬಂಧನ ವಾರೆಂಟ್
ಮೂವತ್ತು ದಿನಗಳ ಹಿಂದೆ ಕಾಶ್ಮೀರ ಅಕ್ಷರಶಃ ಕತ್ತಲಲ್ಲಿ ಮುಳುಗಿತು. ಜನರನ್ನು ಅವರ ಮನೆಗಳಲ್ಲಿ ಕೂಡಿ ಹಾಕಲಾಯಿತು. ರಾಜಕಾರಣಿಗಳನ್ನು ವಶಕ್ಕೆ ಪಡೆಯಲಾಯಿತು. ಫೋನ್ ಕೂಡ ಇಲ್ಲದ ಸನ್ನಿವೇಶ. ಇಂಟರ್ ನೆಟ್ ಸಂಪರ್ಕ ಇಲ್ಲ, ಶಾಲೆ, ಕಾಲೇಜು ಹಾಗೂ ಪರೀಕ್ಷೆಗಳು ಇಲ್ಲ. ಇದು ಸಾಮಾನ್ಯ ಸನ್ನಿವೇಶ ಅಲ್ಲ. ಅದು ಉತ್ತಮಗೊಳ್ಳುವ ಸೂಚನೆಯೂ ಇಲ್ಲ ಎಂದು ತರೂರ್ ಹೇಳಿದ್ದಾರೆ.
ಒಂದಿಡೀ ತಿಂಗಳು ನಿಮ್ಮ ಪ್ರೀತಿಪಾತ್ರರ ಜತೆ ಯಾವುದೇ ಸಂಪರ್ಕ ಇಲ್ಲದೆ ಬದುಕುವುದಕ್ಕೆ ಹೇಗೆ ಬಯಸುತ್ತೀರಿ. ಕಾಶ್ಮೀರಿಗಳಿಗೆ ಆಗಿರುವುದು ಇದೇ. ಕಾಶ್ಮೀರದ ಪೋಷಕರು ಯಾವುದೇ ಚಿಂತೆ ಇಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಬಿಡಬಹುದಾದ ಹಾಗೂ ನಂತರ ಏನಾದರೂ ಚಿಂತೆ ಮಾಡದೆ ಇರಬಹುದಾದ ಸ್ಥಿತಿ ಬರುತ್ತಾ ಎಂದು ನಾನು ಸಂಸತ್ ನಲ್ಲಿ ಪ್ರಶ್ನೆ ಮಾಡಿದ್ದೆ. ಆ ಸ್ಥಿತಿಯನ್ನು ಮಾಮೂಲಿಗೆ ತಂದರೆ, ಆ ನಂತರ ಕಾಶ್ಮೀರವನ್ನು ಸಹಜ ಸ್ಥಳವಾಗಿ ಮತ್ತೆ ಮಾತನಾಡಲು ಸಾಧ್ಯ ಎಂದಿದ್ದಾರೆ ತರೂರ್.