ಭಾರೀ ಮಳೆ: ತಾತ್ಕಾಲಿಕವಾಗಿ ಸ್ಥಗಿತಗೊಂಡ ಅಮರನಾಥ ಯಾತ್ರೆ
ಶ್ರೀನಗರ, ಜೂನ್ 28: ಬಿಗಿಭದ್ರತೆಯೊಂದಿಗೆ ನಿನ್ನೆ(ಜೂನ್ 27) ಯಿಂದ ಆರಂಭವಾದ ಅಮರನಾಥ ಯಾತ್ರೆಗೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ. ಜಮ್ಮು- ಕಾಶ್ಮೀರದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾತ್ರಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
'ಮುಂದಿನ ಕೆಲವು ಗಂಟೆಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿರುವ ಕಾರಣ ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಾವು ನಿರಂತರವಾಗಿ ಹವಾಮಾನ ಇಲಾಖೆಯ ಸಂಪರ್ಕದಲ್ಲಿದ್ದೇವೆ. ಮಳೆ ನಿಲ್ಲುವ ಲಕ್ಷಣ ಗೋಚರಿಸುತ್ತಿದ್ದಂತೆಯೇ ಯಾತ್ರೆಯನ್ನು ಮುಂದುವರಿಸುತ್ತೇವೆ' ಎಂದು ಯಾತ್ರೆಯ ಮೇಲುಸ್ತುವಾರಿ ವಹಿಸಿರುವ ಗಂಡೇರಬಲ್ ಡೆಪ್ಯುಟಿ ಕಮಿಷನರ್ ಡಾ.ಪಿಯೂಶ್ ಸಿಂಗ್ಲಾ ತಿಳಿಸಿದ್ದಾರೆ.
ಸಮುದ್ರ ಮಟ್ಟದಿಂದ 3880 ಮೀ ಎತ್ತರದಲ್ಲಿರುವ ಅಮರನಾಥ ಗುಹಾಂತರ ದೇವಾಲಯದ ಪ್ರವಾಸಕ್ಕೆ ಈ ಬಾರಿ ಲಕ್ಷಕ್ಕೂ ಹೆಚ್ಚು ಭಕ್ತರು ಹೆಸರು ನೋಂದಾಯಿಸಿದ್ದು, ಮೊದಲ ಬ್ಯಾಚಿನ ಯಾತ್ರೆ ಈಗಾಗಲೇ ಆರಂಭವಾಗಿದೆ.
ಅಮರನಾಥ ಯಾತ್ರಿಕರಿಗೆ ಈ ಬಾರಿ ಕಂಡು ಕೇಳರಿಯದ ಬಿಗಿ ಭದ್ರತೆ
ಕಳೆದ ವರ್ಶಶ ಅಮರನಾಥ ಯಾತ್ರೆಯ ಸಮಯದಲ್ಲಿ ಭಯೋತ್ಪಾದಕ ದಾಳಿ ಸಂಭವಿಸಿ 9 ಯಾತ್ರಿಕರು ಮೃತರಾಗಿದ್ದರಿಂದ ಈ ಬಾರೀ ಗರಿಷ್ಠ ಭದ್ರತೆ ಕಲ್ಪಿಸಲಾಗಿದೆ.