ರೋಹ್ಟಕ್ ರೈಲು ನಿಲ್ದಾಣದ ಅಧಿಕಾರಿಗಳಿಗೆ ಜೈಷ್ ಉಗ್ರರ ಬೆದರಿಕೆ ಪತ್ರ
ರೋಹ್ಟಕ್, ಸೆಪ್ಟೆಂಬರ್ 17: ದೇಶದ 6 ರಾಜ್ಯಗಳ ಪ್ರಮುಖ ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸುವುದಾಗಿ ಜೈಷ್ ಉಗ್ರರು ರೈಲ್ವೆ ಅಧಿಕಾರಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ.
ಅಕ್ಟೋಬರ್ 6ರೊಳಗೆ ಆರು ರೈಲು ನಿಲ್ದಾಣಗಳ ಮೇಲೆ ದಾಳಿ ನಡೆಸುವುದಾಗಿ ರೋಹ್ಟಕ್ ರೈಲು ನಿಲ್ದಾಣದ ಅಧಿಕಾರಿಗಳಿಗೆ ಬೆದರಿಕೆ ಪತ್ರ ರವಾನಿಸಿದ್ದಾರೆ.
ಜಾಗತಿಕ ಉಗ್ರ ಮಸೂದ್ ಅಜರ್ನನ್ನು ಗುಟ್ಟಾಗಿ ಬಿಡುಗಡೆಗೊಳಿಸಿದ ಪಾಕಿಸ್ತಾನ
ಹಿಸಾರ್, ರೋಹ್ಟಕ್, ಮುಂಬೈ, ಚೆನ್ನೈ, ಜೈಪುರ, ಭೋಪಾಲ್ ಮತ್ತು ಕೋಟಾ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕೃತ್ಯ ಎಸಗುವುದಾಗಿ ಬೆದರಿಕೆ ಹಾಕಿದ್ದಾರೆ.
ಉಗ್ರರ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರೇವಾರಿ ರೈಲ್ವೆ ನಿಲ್ದಾಣ ಸೇರಿದಂತೆ ಪತ್ರದಲ್ಲಿ ಉಲ್ಲೇಖಿಸಿರುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ವಿವಿಧ ರೀತಿಯಲ್ಲಿ ತರಬೇತಿ ಪಡೆದಿರುವ ಪಾಕಿಸ್ತಾನ ಮೂಲದ ಉಗ್ರರು, ಸಾಗರದಾಳದಿಂದ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕಳೆದ ತಿಂಗಳಷ್ಟೆ ನೌಕಾಪಡೆ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದರು.
ಉಗ್ರ ಕೃತ್ಯ ನಡೆಸುವುದಾಗಿ ಶಾಲಾ ನೋಟ್ಬುಕ್ನ ಕಾಗದದಲ್ಲಿ ಬರೆದು ರೋಹ್ಟಕ್ ರೈಲು ನಿಲ್ದಾಣದ ಅಧಿಕಾರಿಗಳಿಗೆ ಪೋಸ್ಟ್ ಮಾಡಲಾಗಿದೆ. ಇದು ಉಗ್ರರೇ ಬರೆದಿರುವ ಪತ್ರವೋ ಅಥವಾ ಕಿಡಿಗೇಡಿಗಳು ಮಾಡಿದ ಕೃತ್ಯವೋ ಎನ್ನುವುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.