ಉಗ್ರಗಾಮಿಗಳಿಂದ ಮತ್ತೊಂದು ರಣಹೇಡಿ ಪಿತೂರಿ, ನೌಕಾ ಸೇನೆ ಮೇಲೆ ಗುರಿ!
ನವದೆಹಲಿ, ಜುಲೈ 18: ಭಾರತದ ವಿರುದ್ಧ ಪಾಕ್ ಉಗ್ರಗಾಮಿ ಸಂಘಟನೆಗಳ ಹೊಸ ಪಿತೂರಿಯೊಂದನ್ನು ನಡೆಸಿರುವ ಬಗ್ಗೆ ಮೂಲಗಳು ಮಾಹಿತಿ ಬಹಿರಂಗಪಡಿಸಿವೆ. ಭಾರತೀಯ ನೌಕಾ ಸೇನೆಯ ಯುದ್ಧ ನೌಕೆಗಳ ಮೇಲೆ ಉಗ್ರ ಸಂಘಟನೆಯಿಂದ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಜೈಷ್-ಇ-ಮೊಹ್ಮದ್ ಉಗ್ರಗಾಮಿ ಸಂಘಟನೆಯು ಆಳ ಸಮುದ್ರದ ಮುಳುಗುತಜ್ಞರನ್ನು ಬಳಸಿಕೊಂಡು ಈ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂಬ ಗುಪ್ತಚರ ಇಲಾಖೆಯ ಈ ಎಚ್ಚರಿಕೆಯನ್ನು ನೌಕಾ ಸೇನೆ ಕೂಡ ಗಂಭೀರವಾಗಿ ಪರಿಗಣಿಸಿದೆ. ಪಾಕಿಸ್ತಾನದ ಬಹವಲ್ಪುರದಲ್ಲಿ ಉಗ್ರಗಾಮಿಗಳಿಗೆ ಇದಕ್ಕಾಗಿ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ಭಾರತದ ಬೇಹುಗಾರಿಕೆ ಸಂಸ್ಥೆಗಳು ತಿಳಿಸಿವೆ.
ನೌಕಾ ಸೇನೆಯ ಆಸ್ತಿಗೆ ಹಾನಿ ಮಾಡುವುದು ಈ ದಾಳಿಯ ಮುಖ್ಯ ಉದ್ದೇಶ ಆಗಿರಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರಲ್ಲೂ ಕ್ಷಿಪಣಿ ಸಬ್ ಮರೀನ್ ಗಳನ್ನು ಗುರಿ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಅಣ್ವಸ್ತ್ರ ಸಿಡಿತಲೆ ಸಿಡಿಸುವ ಸಾಮರ್ಥ್ಯದ ಸಬ್ ಮರೀನ್ ಹಾಗೂ ರಷ್ಯಾ ನಿರ್ಮಿತ ಐಎನ್ ಎಸ್ ಚಕ್ರ ಎರಡೂ ಕೂಡ ವಿಶಾಖಪಟ್ಟಣದಲ್ಲೇ ಇವೆ.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಉಗ್ರಗಾಮಿ ಸಂಘಟನೆಯ ಮುಖ್ಯ ಗುರಿ ನೌಕಾ ಪಡೆಯೇ ಎಂಬುದು ಖಚಿತವಾಗಿದೆ. ಆದರೆ ನೌಕಾ ಪಡೆಯ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, ಭಾರತದ ನೌಕಾ ನೆಲೆಗಳು ಹಾಗೂ ಬಂದರುಗಳಲ್ಲಿ ಹಲವು ಸುತ್ತಿನ ರಕ್ಷಣಾ ಪಹರೆಗಳನ್ನು ಹಾಕಲಾಗಿದೆ. ಇನ್ನು ಆಳ ಸಮುದ್ರದ ಮುಳುಗು ತಜ್ಞರನ್ನು ಗುರುತಿಸುವ ತಂತ್ರಜ್ಞಾನ ಸಹ ಇದೆ. ಅವೆಲ್ಲವನ್ನು ಮೀರಿ ಹಾನಿ ಮಾಡುವುದು ಸಲೀಸಲ್ಲ.