ಜೈಶ್ ಉಗ್ರರ ಸಂಚಿನ ಹಿಂದೆ ಮಸೂದ್ ಅಜರ್ ಸಂಬಂಧಿ
ನವದೆಹಲಿ, ನವೆಂಬರ್ 21: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಗುರುವಾರ ನಡೆದ ಎನ್ಕೌಂಟರ್ನಲ್ಲಿ ಜೈಶ್ ಎ ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ನಾಲ್ವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಈ ಉಗ್ರರನ್ನು ಜೈಶ್ ಮುಖ್ಯಸ್ಥ ಮಸೂದ್ ಅಜರ್ನ ಭಾಮೈದ ಅಬ್ದುಲ್ ರಾವುಫ್ ಅಸ್ಗರ್ ನಿಭಾಯಿಸುತ್ತಿದ್ದ ಎನ್ನುವುದು ಬಹಿರಂಗವಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಗ್ರರ ಬಳಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಲ್ಲದೆ, ಪಾಕಿಸ್ತಾನ ನಿರ್ಮಿತ ಕ್ಯೂ ಮೊಬೈಲ್ ಸೆಟ್ಗಳು, ಜರ್ಮನ್ ತಯಾರಿಕೆಯ ಜಿಪಿಎಸ್ ವ್ಯವಸ್ಥೆಯ ಉಪಕರಣಗಳು ಮತ್ತು ಪಾಕಿಸ್ತಾನ ನಿರ್ಮಿತ ವೈರ್ಲೆಸ್ ಸೆಟ್ಗಳು ಪತ್ತೆಯಾಗಿದ್ದವು.
ಉಗ್ರರ ದಾಳಿ ಸಂಚು: ಪಾಕ್ ಹೈಕಮಿಷನ್ಗೆ ಸಮನ್ಸ್ ನೀಡಿದ ಭಾರತ
ನಗ್ರೋಟಾದ ಬಾನ್ ಟೋಲ್ ಪ್ಲಾಜಾ ಬಳಿ ಹಲವು ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ ಎಲ್ಲ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಅವರ ಬಳಿ ದೊರೆತ ಜಿಪಿಎಸ್ ಉಪಕರಣ ಮತ್ತು ಮೊಬೈಲ್ ಫೋನ್ಗಳಲ್ಲಿನ ದಾಖಲೆಗಳು ಅವರು, ಪಾಕಿಸ್ತಾನ ಮೂಲದ ಭಯೋತ್ಪಾದನಾ ಗುಂಪು ಜೈಶ್ನ ಆಪರೇಷನಲ್ ಕಮಾಂಡರ್ಗಳಾದ ಮುಫ್ತಿ ರಾವುಫ್ ಅಸ್ಗರ್ ಮತ್ತು ಖಾರಿ ಜರಾರ್ ಜತೆ ಸಂಪರ್ಕ ಹೊಂದಿದ್ದರು ಎನ್ನುವುದನ್ನು ಖಾತರಿಪಡಿಸಿದೆ.
26/11ರ ಮುಂಬೈ ಮಾದರಿಯಲ್ಲಿ ನವೆಂಬರ್ 26ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ದೊಡ್ಡ ಭಯೋತ್ಪಾದನಾ ದಾಳಿ ನಡೆಸುವುದು ಉಗ್ರರ ಗುರಿಯಾಗಿತ್ತು. ಈ ದಾಳಿ ನಡೆಸುವ ಹೊಣೆಯನ್ನು ಅಸ್ಗರ್ಗೆ ವಹಿಸಲಾಗಿತ್ತು. ಜೈಶ್ ಉಗ್ರರ ಜಾಲದಲ್ಲಿರುವ ಮೌಲಾನಾ ಅಬು ಜುಂಡಾಲ್ ಮತ್ತು ಮುಫ್ತಿ ತೌಸೀಫ್ ಈ ದಾಳಿ ಕುರಿತು ಯೋಜನೆ ರೂಪಿಸಲು ಬಹವಲ್ಪುರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಆರಂಭದ ಯೋಜನೆ ಬಳಿಕ ಜೈಶ್ನ ಶಕರಗಡ ಘಟಕವು ಉಗ್ರರ ಆಯ್ಕೆ ಮತ್ತು ಅವರ ತರಬೇತಿ ಸೇರಿದಂತೆ ಅಂತಿಮ ಸಿದ್ಧತೆ ನಡೆಸುವ ಜವಾಬ್ದಾರಿ ಪಡೆದುಕೊಂಡಿತ್ತು.