ಎಲ್ಲೇ ಇದ್ದರೂ ಅಡ್ವಾಣಿ ಮೇಲೆ ದಾಳಿ: ಜೈಷೆ ಉಗ್ರ ಬೆದರಿಕೆ
ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂದೇಶ ರವಾನಿಸಿರುವ ಕೇಂದ್ರ ಗುಪ್ತಚರ ಇಲಾಖೆಯು ಆಡ್ವಾಣಿ ಭೇಟಿ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸ್ಪಷ್ಟ ಆದೇಶ ನೀಡಿದೆ. ಪ್ರಸ್ತುತ ಅಡ್ವಾಣಿ ಅವರಿಗೆ Z category ಭದ್ರತೆ ಒದಗಿಸಲಾಗಿದೆ.
ಭಾರತದ Most wanted terrorists listನಲ್ಲಿ ಸ್ಥಾನ ಪಡೆದಿರುವ, ಪ್ರಸ್ತುತ ಪಾಕಿಸ್ತಾನದಲ್ಲಿ ಅವಿತಿರುವ ಮೌಲಾನಾ ಮಸೂದ್ ಅಜರ್ ಈ ಬೆದರಿಕೆಯೊಡ್ಡಿದ್ದಾನೆ. ಇವನು 'ಜೈಷ್ ಎ ಮಹಮ್ಮದ್' ಸಂಘಟನೆಯ ಉಗ್ರ ನಾಯಕ. ಕಳೆದ ತಿಂಗಳು ಆಗಸ್ಟ್ 6ರಂದು, ಉಗ್ರಗಾಮಿ ಸಂಘಟನೆಯ ಈ ಆಡಿಯೋ ಕ್ಲಿಪ್ ಅನ್ನು ಆನ್ ಲೈನ್ ಸಾಮಾಜಿಕ ತಾಣಕ್ಕೆ ಅಪ್ ಲೋಡ್ ಮಾಡಿದೆ.
'ನಾವು ಭಾರತದ ಯಾವುದೇ ಪ್ರದೇಶದಲ್ಲಿ ಬೇಕಾದರೂ ಅಡ್ವಾಣಿ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದೇವೆ. ನಾವು ಭಾರತದ ಯಾವ ಭಾಗದಲ್ಲಿ ದಾಳಿ ನಡೆಸಲು ಸಾಧ್ಯವಿಲ್ಲ ಎಂಬುದನ್ನು ನೀವು ತೋರಿಸಿಕೊಡಿ' ಎಂದು ಮೌಲಾನಾ ಅಜರ್ ಸವಾಲು ಹಾಕಿದ್ದಾನೆ.
ಈ ಹಿನ್ನೆಲೆಯಲ್ಲಿ ಅಡ್ವಾಣಿ ಭೇಟಿ ವೇಳೆ ಎಚ್ಚರ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚಿಸಿದೆ. ಇದೇ ಕಾರಣಕ್ಕಾಗಿಯೇ ಸೆ. 15ರಂದು ಆಗ್ರಾದಲ್ಲಿ ನಡೆಯಬೇಕಿದ್ದ ಸಮಾವೇಶವನ್ನು ನಡೆಸಲು ಅಡ್ವಾಣಿಗೆ ಅನುಮತಿ ನಿರಾಕರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅಡ್ವಾಣಿ ಮೇಲೇಕೆ ಉಗ್ರ ಕಣ್ಣು?: ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸಕ್ಕೆ ಅಡ್ವಾಣಿ ಪ್ರಮುಖ ಕಾರಣರು ಎಂಬುದು ಪಾಕ್ ಮೂಲದ ಉಗ್ರ ಸಂಘಟನೆಗಳ ಆರೋಪ. ಈ ಕಾರಣಕ್ಕಾಗಿ ಪಾಕ್ ಉಗ್ರ ಸಂಘಟನೆಗಳು ಅಡ್ವಾಣಿ ಅವರನ್ನು ತಮ್ಮ ಪ್ರಮುಖ ಗುರಿಯನ್ನಾಗಿಸಿಕೊಂಡಿವೆ.
ಯಾರೀ ಪಾತಕಿ ಅಜರ್?: ವಿವಿಧ ಸ್ಫೋಟ ಪ್ರಕರಣಗಳ ಸಂಬಂಧ ಮಸೂದ್ ಅಜರನನ್ನು ಭಾರತದಲ್ಲಿ ಬಂಧಿಸಲಾಗಿತ್ತು. ಆದರೆ 1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಆಫ್ಘಾನಿಸ್ತಾನದ ಕಂದಹಾರ್ ಗೆ ಕೊಂಡೊಯ್ದಿದ್ದ ಉಗ್ರರು, ಪ್ರಯಾಣಿಕರ ಬಿಡುಗಡೆಗಾಗಿ ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಷರತ್ತು ವಿಧಿಸಿದ್ದರು. ಈ ವೇಳೆ ಭಾರತ ಸರ್ಕಾರ ಮಸೂದ್ ಅಜರನನ್ನು ಬಿಡುಗಡೆ ಮಾಡಿತ್ತು. ನಂತರ ಅಜರ್ ಜೈಷೆ ಸಂಘಟನೆ ಸ್ಥಾಪಿಸಿದ್ದ. ಆ ಬಳಿಕ 2001ರಲ್ಲಿ ಭಾರತದ ಸಂಸತ್ ಮೇಲಿನ ದಾಳಿಯ ರೂವಾರಿ ಎನ್ನಲಾಗಿದೆ.