ರಸ್ತೆ ರಂಪಾಟ: ಶಿಕ್ಷೆ ಭೀತಿಯಲ್ಲಿ ಮಾಜಿ ಕ್ರಿಕೆಟರ್ ಸಿಧು
ನವದೆಹಲಿ, ಸೆಪ್ಟಂಬರ್ 12: ಮಾಜಿ ಕ್ರಿಕೆಟರ್, ಕಾಂಗ್ರೆಸ್ ಮುಖಂಡ, ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರಿಗೆ ರಸ್ತೆ ರಂಪಾಟ ಪ್ರಕರಣ ಮತ್ತೊಮ್ಮೆ ಕಾಡುತ್ತಿದೆ. ಈ ಪ್ರಕರಣದ ಮರು ವಿಚಾರಣೆಗೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ.
1988ರ ರಸ್ತೆ ರಂಪಾಟ ಕೇಸಿನಲ್ಲಿ ಸಿಧು ಅವರು ನೀಡಿರುವ ಹೇಳಿಕೆ ಸುಳ್ಳು, ಅವರ ವಿರುದ್ಧ ಕ್ರಮ ಜರುಗಿಸಬಹುದು ಎಂದು ಸರ್ಕಾರಿ ವಕೀಲರು ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ.
ಪಟಿಯಾಲದಲ್ಲಿ 1998ರ ಡಿಸೆಂಬರ್ 27ರಂದು ಷೇರನ್ ವಾಲ ಗೇಟ್ ಕ್ರಾಸಿಂಗ್ ಬಳಿ ಸಿಧು ಅವರ ಜಿಪ್ಸಿ ನಿಲುಗಡೆ ಮಾಡಲಾಗಿತ್ತು. ಗುರ್ ನಾಮ್ ಅವರು ಮಾರುತಿ ಕಾರಿನಲ್ಲಿ ಅದೇ ಸ್ಥಳಕ್ಕೆ ಬಂದು ಸ್ಥಳ ಕೊಡುವಂತೆ ಕೇಳಿದ್ದರು. ರಸ್ತೆ ರಂಪಾಟ ನಂತರ ನಡೆದ ಹಲ್ಲೆ, ಸಾವಿನ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ಆರೋಪಿಯಾಗಿದ್ದಾರೆ. ಸಿಧು ಹಾಗೂ ಅವರ ಸ್ನೇಹಿತರೊಬ್ಬರು ಹಲ್ಲೆ ಮಾಡಿದ್ದರಿಂದ ಗುರ್ನಾಮ್ ಸಿಂಗ್(65) ಎಂಬುವರು ಮೃತಪಟ್ಟರು ಎಂಬ ಆರೋಪವಿತ್ತು.
1999ರಲ್ಲಿ ಸ್ಥಳೀಯ ನ್ಯಾಯಾಲಯ ಸಿಧು ನಿರ್ದೋಷಿಯೆಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೃತ ಗುರ್ನಾಮ್ ಸಿಂಗ್ ಕುಟುಂಬದವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ವಿರುದ್ಧ ಹರ್ಯಾಣ ಹಾಗೂ ಪಂಜಾಬ್ ಹೈಕೋರ್ಟ್ ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಸಿಧು ಅವರಿಗೆ ಹೈಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿತ್ತು.
ಈ ವೇಳೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುವಂತೆ ಸುಪ್ರೀಂಕೋರ್ಟ್ಗೆ ಪಂಜಾಬ್ ಸರ್ಕಾರ ಮನವಿ ಸಲ್ಲಿಸಿದೆ. 2007ರಲ್ಲಿ ಈ ಪ್ರಕರಣದಿಂದಾಗಿ ಸಿಧು ಅವರು ಚುನಾವಣೆ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.