ಸಂಸತ್ನ ಕ್ಯಾಂಟೀನ್ನಿಂದ ಉತ್ತರ ರೈಲ್ವೆಗೆ ಗೇಟ್ಪಾಸ್: ಐಟಿಡಿಸಿಗೆ ನಿರ್ವಹಣೆ ಹೊಣೆ
ನವದೆಹಲಿ, ಅಕ್ಟೋಬರ್ 23: ಸಂಸತ್ ಭವನದಲ್ಲಿ ಸಂಸದರು, ಅಧಿಕಾರಿಗಳು ಹಾಗೂ ಇತರೆ ಉದ್ಯೋಗಿಗಳಿಗೆ ಆಹಾರ ಸೇವೆ ಒದಗಿಸುತ್ತಾ ಬಂದಿದ್ದ ಉತ್ತರ ರೈಲ್ವೆಯ 52 ವರ್ಷಗಳ ಭವ್ಯ ಪರಂಪರೆ ಅಂತ್ಯಗೊಂಡಿದೆ. ಸಂಸತ್ ಭವನದಲ್ಲಿ ಕ್ಯಾಂಟೀನ್ ನಡೆಸುವ ಅವಕಾಶವನ್ನು ಅದು ನವೆಂಬರ್ 15ರಂದ ಐಟಿಡಿಸಿಗೆ ಹಸ್ತಾಂತರಿಸುತ್ತಿದೆ.
1968ರಿಂದಲೂ ಕ್ಯಾಂಟೀನ್ ನಡೆಸುತ್ತಿರುವ ಉತ್ತರ ರೈಲ್ವೆಗೆ ನವೆಂಬರ್ 15ರ ವೇಳೆಗೆ ಸಂಸತ್ ಭವನದಲ್ಲಿನ ತನ್ನ ಎಲ್ಲ ಕೆಲಸಗಳನ್ನು ನಿಲ್ಲಿಸಿ ಖಾಲಿ ಮಾಡುವಂತೆ ಲೋಕಸಭೆ ಕಾರ್ಯದರ್ಶಿಗಳ ಪತ್ರದಲ್ಲಿ ಸೂಚಿಸಲಾಗಿದೆ.
ಸಂಸತ್ನಲ್ಲಿ ಇನ್ನು ಪಾತ್ರೆ, ಊಟದ ಬಾಕ್ಸ್ ತೊಳೆಯುವಂತಿಲ್ಲ!
ಐಷಾರಾಮಿ ಪಂಚತಾರಾ ಅಶೋಕ್ ಹೋಟೆಲ್ ಸಮೂಹವನ್ನು ನಡೆಸುತ್ತಿರುವ ಸರ್ಕಾರದ ಪ್ರವಾಸೋದ್ಯಮ ಅಂಗ ಭಾರತೀಯ ಪ್ರವಾಸ ಅಭವೃದ್ಧಿ ನಿಗಮ (ಐಟಿಡಿಸಿ) ಇನ್ನು ಮುಂದೆ ಸಂಸತ್ ಭವನದಲ್ಲಿನ ಕ್ಯಾಂಟೀನ್ ನಿರ್ವಹಣೆ ಮಾಡಲಿದೆ.
'ಸಂಸತ್ ಭವನದ ಸಂಕೀರ್ಣದಲ್ಲಿನ ಕ್ಯಾಂಟೀನ್ ಘಟಕಗಳನ್ನು ನವೆಂಬರ್ 15ರಿಂದ ಐಟಿಡಿಸಿಗೆ ಒಪ್ಪಿಸಲು ಸರ್ಕಾರ ತೀರ್ಮಾನಿಸಿದೆ. ಉತ್ತರ ರೈಲ್ವೆಯು ಅದಕ್ಕೆ ಅನುಗುಣವಾಗಿ ಲೋಕಸಭೆ ಕಾರ್ಯಾಲಯ ನೀಡಿರುವ ಕಂಪ್ಯೂಟರ್ ಪ್ರಿಂಟರ್ ಹಾಗೂ ಇತರೆ ವಿದ್ಯನ್ಮಾನ ಗ್ಯಾಡ್ಜೆಟ್ಗಳನ್ನು ಐಟಿಡಿಸಿಗೆ ಹಾಗೂ ಪೀಠೋಪಕರಣಗಳು, ಗ್ಯಾಡ್ಜೆಟ್ ಸಾಧನಗಳು ಮುಂತಾದವುಗಳಲ್ಲಿ ಸಿಪಿಡಬ್ಲ್ಯೂಡಿಗಳನ್ನು ಒಪ್ಪಿಸಬೇಕು' ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಸಂಸತ್ನಲ್ಲಿ ಕ್ಯಾಂಟೀನ್ ನಡೆಸುವ ಹೊಸ ಸಂಸ್ಥೆಗಾಗಿ ಕಳೆದ ವರ್ಷದಿಂದ ಹುಡುಕಾಟ ಆರಂಭವಾಗಿತ್ತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಐಟಿಡಿಸಿಯ ಅಧಿಕಾರಿಗಳನ್ನು ಜುಲೈನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಉತ್ತರ ರೈಲ್ವೆಯ ಅಡುಗೆಯವರು, ಕಿಚನ್ ಸಿಬ್ಬಂದಿ ಹಾಗೂ ಇತರೆ ಸಹಾಯಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಂಸತ್ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಸತ್ ಅಧಿವೇಶನಗಳ ಸಂದರ್ಭದಲ್ಲಿ ಐಆರ್ಸಿಟಿಸಿಯ ಸುಮಾರು 75 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು.