ಇದು ಹೊಸ ಅಧ್ಯಾಯದ ಆರಂಭ, ಮಹಾಧಿವೇಶನದಲ್ಲಿ ಸೋನಿಯಾ ರಣಕಹಳೆ
ನವದೆಹಲಿ, ಮಾರ್ಚ್ 17: "ಇಂದು ಕಾಂಗ್ರೆಸ್ ಪಕ್ಷದ ಹೊಸ ಅಧ್ಯಾಯ ಆರಂಭವಾಗಿದೆ. ಪ್ರತಿ ನಾಗರೀಕರಿಗೂ ಸೇರಿದ ದೇಶವನ್ನು ನಾವು ನಿರ್ಮಾಣ ಮಾಡಬೇಕಾಗಿದೆ. ಈ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರತಿ ಕಾಂಗ್ರೆಸ್ ಸದಸ್ಯರೂ ತಮ್ಮ ಜೀವನವನ್ನು ಮುಡಿಪಾಗಿಡಬೇಕು," ಎಂದು ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನವದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಮೂರು ದಿನಗಳ 84ನೇ ಮಹಾಧಿವೇಶನದಲ್ಲಿ ಮಾತನಾಡಿದ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆಯೂ ಪ್ರಸ್ತಾಪ ಮಾಡಿದರು.
ದೇಶಕ್ಕೆ ಕಾಂಗ್ರೆಸ್ ಮಾತ್ರ ದಾರಿ ತೋರಬಲ್ಲುದು: ಮಹಾಧಿವೇಶನದಲ್ಲಿ ರಾಹುಲ್
ಕಾಂಗ್ರೆಸ್ ಪಕ್ಷವನ್ನು ಹೇಗೆ ಬಲಪಡಿಸುವುದು ಎಂಬುದು ಸದ್ಯದ ಆದ್ಯತೆಯಾಗಿದೆ. ಕಾಂಗ್ರೆಸ್ ಕೇವಲ ಒಂದು ಪಕ್ಷವಲ್ಲ; ಇದು ಕಾಲಕ್ಕಿಂತ ಹಲವಾರು ವರ್ಷ ಮುಂದಿರುವ ಕಲ್ಪನೆ ಎಂದು ಅವರು ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ಗೆಲುವಿನ ಮೆಲುಕು
40 ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಶ್ರೀಮತಿ ಇಂದಿರಾ ಗಾಂಧಿ ಜಯ ಸಾಧಿಸುವುದರೊಂದಿಗೆ ಕಾಂಗ್ರೆಸ್ ಪಕ್ಷ ಪ್ರಬಲ ಪಕ್ಷವಾಗಿ ಹೊರಹೊಮ್ಮಿತು. ಕರ್ನಾಟಕ ವಿಧಾನಸಭೆ ಚುನಾವಣೆಯೊಂದಿಗೆ ಪಕ್ಷ ಮತ್ತೆ ಇದೇ ರೀತಿ ಮೇಲೆದ್ದು ಬರುವ ನಂಬಿಕೆ ತಮಗಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಯುಪಿಎ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಮೋದಿ ಸರಕಾರ ದುರ್ಬಲಗೊಳಿಸುತ್ತಿದೆ ಮತ್ತು ಕಡೆಗಣಿಸುತ್ತಿದೆ. ಇದು ನನಗೆ ನೋವನ್ನು ತಂದಿದೆ ಎಂದು ಹೇಳಿದ ಸೋನಿಯಾ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಣಯ ತೆಗೆದುಕೊಂಡ ಕಾಂಗ್ರೆಸ್
ಯುಪಿಎ ಅವಧಿಯಲ್ಲಿ ಆರ್ಥಿಕತೆ ಉತ್ತುಂಗದಲ್ಲಿ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ದೇಶದ ಆರ್ಥಿಕತೆ ಉನ್ನತಿಗೇರಿತ್ತು. ದೇಶದ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತಲು ನಮ್ಮ ಸರಕಾರದ ಯೋಜನೆಗಳು ಸಹಾಯಕವಾಗಿದ್ದವು. ಆದರೆ ಇದೇ ಯೋಜನೆಗಳನ್ನು ಮೋದಿ ಸರಕಾರ ದುರ್ಬಲಗೊಳಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಮೋದಿ ಸರಕಾರದ ದಬ್ಬಾಳಿಕೆ ವಿರುದ್ಧ ಹೋರಾಡುತ್ತಿದೆ. 2014 ರಲ್ಲಿ ಬಿಜೆಪಿ ಮಾಡಿದ ಮಾತುಗಳು ಟೊಳ್ಳು ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಆರಂಭಿಸಿದ್ದಾರೆ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮತ್ತು 'ನಾನೂ ತಿನ್ನಲ್ಲ, ತಿನ್ನಲಿಕ್ಕೂ ಬಿಡಲ್ಲ' ಎಂಬ ಹಾಲಿ ಸರಕಾರದ ಘೋಷಣೆಗಳು ಕೇವಲ ನಾಟಕವಲ್ಲದೆ ಬೇರೇನೂ ಅಲ್ಲ. ಇದು ಮತಗಳಿಸುವ ಕುತಂತ್ರ ಎಂದು ಅವರು ಜರೆದರು.
ಹೊಸ ಅಧ್ಯಾಯದ ಆರಂಭ
"ಇದು ಹೊಸ ಅಧ್ಯಾಯದ ಪ್ರಾರಂಭ. ನಾವು ಎದುರಿಸುತ್ತಿರುವ ಸವಾಲುಗಳು ಸಾಮಾನ್ಯವಾದವುಗಳಲ್ಲ. ಅಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಾವು ಭಾರತವನ್ನು ಭ್ರಷ್ಟಾಚಾರ ಮತ್ತು ಷಡ್ಯಂತ್ರದಿಂದ ಮುಕ್ತಗೊಳಿಸಬೇಕಾಗಿದೆ. ಇದನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುವ ಪ್ರತಿಜ್ಞೆಯನ್ನು ನಾವು ಮಾಡೋಣ," ಎಂದು ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಸೋನಿಯಾ ಗಾಂಧಿ ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರ ಇಲ್ಲದ ಕಡೆಗಳಲ್ಲಿ, ನಮ್ಮ ಸ್ನೇಹಿತರು ಅರಾಜಕತೆ ಮತ್ತು ಹಿಂಸಾಚಾರದ ವಿರುದ್ಧ ನಿಲ್ಲುತ್ತಿದ್ದಾರೆ ಮತ್ತು ತಮ್ಮ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಅವರು ಎಲ್ಲ ಸವಾಲನ್ನೂ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೂ ಇದೇ ರೀತಿ ಅನ್ಯಾಯದ ವಿರುದ್ಧ ನಿಲ್ಲುತ್ತದೆ ಮತ್ತು ಅದರ ವಿರುದ್ಧ ಧ್ವನಿ ಎತ್ತುತ್ತದೆ ಎಂದು ಅವರು ತಿಳಿಸಿದರು. ಮಾತ್ರವಲ್ಲದೆ ಮೋದಿ ಸರಕಾರದ ಹಗರಣಗಳನ್ನು ದಾಖಲೆ ಸಹಿತ ಜನರ ಮುಂದಿಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಂಗ್ರೆಸ್ ಯಾವತ್ತೂ ನೆಲಸಮವಾಗಲ್ಲ
ಕಳೆದ 4 ವರ್ಷಗಳಲ್ಲಿ ಈ ಅಹಂಕಾರಿ ಸರಕಾರವು ಕಾಂಗ್ರೆಸ್ ನ್ನು ನಾಶ ಮಾಡಲು ಇರುವ ಎಲ್ಲಾ ಕಲ್ಲುಗಳನ್ನು ತೂರಿದೆ. ಆದರೆ ಕಾಂಗ್ರೆಸ್ ಯಾವತ್ತೂ ನೆಲಸಮವಾಗಿಲ್ಲ ಮತ್ತು ಅದು ಎಂದಿಗೂ ಆಗುವುದೂ ಇಲ್ಲ ಎಂದು ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ಅಬ್ಬರಿಸಿದರು.
ಕಾಂಗ್ರೆಸ್ ಪಕ್ಷದ ಗೆಲುವು ರಾಷ್ಟ್ರದ ಗೆಲುವಾಗಿದೆ. ಇದು ನಮ್ಮೆಲ್ಲರ ಜಯವಾಗಿದೆ. ಕಾಂಗ್ರೆಸ್ ಒಂದು ರಾಜಕೀಯ ಪದವಲ್ಲ, ಅದು ಒಂದು ಚಳುವಳಿ ಎಂದು ಬಣ್ಣಿಸಿದ ಅವರು, ಸವಾಲಿನ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಯವರನ್ನು ನಾನು ಅಭಿನಂದಿಸುತ್ತೇನೆ ಎಂದರು.
ಭಾಷಣ ಮುಗಿಸಿ ಬಂದ ತಮ್ಮ ತಾಯಿ ಸೋನಿಯಾ ಗಾಂಧಿಯವರನ್ನು ರಾಹುಲ್ ಗಾಂಧಿ ಬಿಗಿದಪ್ಪಿದ ಕ್ಷಣ ಭಾವುಕವಾಗಿತ್ತು.