ಹೆಚ್ಚೂಕಡಿಮೆ ಅಧ್ಯಕ್ಷ ಪದವಿಯಿಂದ ರಾಹುಲ್ ಇಳಿಯುವುದು ಖಚಿತ
ನವದೆಹಲಿ, ಮೇ 27 : ಪಕ್ಷದ ನಾಯಕರು ಎಷ್ಟೇ ಒತ್ತಡ ಹೇರುತ್ತಿದ್ದರೂ, ರಾಜೀನಾಮೆ ನೀಡುವುದು ಶತಸಿದ್ಧ ಎಂದು ಹಠ ಹಿಡಿದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪಕ್ಷದ ಅತ್ಯುನ್ನತ ಹುದ್ದೆಗೆ ಬೇರೆ ನಾಯಕರನ್ನು ಹುಡುಕಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಈ ನಿರ್ಧಾರಕ್ಕೆ ಕಟಿಬದ್ಧವಾದರೆ ಮತ್ತು ಪಕ್ಷದ ನಾಯಕರು ಕೂಡ ಮನಸ್ಸು ಬದಲಿಸಿದರೆ, ಗಾಂಧಿಯೇತರ ಕುಟುಂಬದಿಂದ ಪಕ್ಷದ ನಾಯಕನನ್ನು ಹುಡುಕುವುದು ಅನಿವಾರ್ಯವಾಗುತ್ತದೆ. ಏಕೆಂದರೆ, ಪ್ರಿಯಾಂಕಾ ವಾದ್ರಾ ಕೂಡ ಈ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ಅಲ್ಲದೆ, ಈ ಪಟ್ಟಕ್ಕೆ ಅವರ ಹೆಸರು ಎಳೆದು ತರಬೇಡಿ ಎಂದು ರಾಹುಲ್ ಗಾಂಧಿ ಅವರೇ ತಾಕೀತು ಮಾಡಿದ್ದಾರೆ.
ರಾಹುಲ್ ಗಾಂಧಿ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ : ಕಾಂಗ್ರೆಸ್ ಸ್ಪಷ್ಟನೆ
ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಅವರು ರಾಜೀನಾಮೆಯ ಪ್ರಸ್ತಾವ ಮುಂದಿಟ್ಟರೂ, ಹಿರಿಯ ನಾಯಕರೆಲ್ಲ ಅವರೇ ಮುಂದುವರಿಯಬೇಕೆಂದು ಪಟ್ಟು ಹಿಡಿದಿದ್ದರು. ಕೆಲವರು ಆತ್ಮಹತ್ಯೆಯ ಬೆದರಿಕೆ ಕೂಡ ಒಡ್ಡಿದ್ದರು. ಆದರೆ, ರಾಹುಲ್ ತಾವೇ ಮುಂದುವರಿಯುವುದಾಗಿ ಸ್ಪಷ್ಟವಾಗಿ ಹೇಳಿರಲಿಲ್ಲ.
ನಂತರ ಭಾನುವಾರ ಕೂಡ ರಾಹುಲ್ ಗಾಂಧಿ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಲೋಕಸಭೆಗೆ ಆಯ್ಕೆಯಾದ 52 ಸಂಸದರಲ್ಲಿ ಹಲವರು ರಾಹುಲ್ ಗಾಂಧಿ ಅವರ ಮೊಬೈಲಿಗೆ ಕರೆ ಮಾಡಿದರೂ ಅವರು ಯಾವುದೇ ಕರೆಗಳನ್ನು ಸ್ವೀಕರಿಸಿಲ್ಲ. ಲೋಕಸಭೆಯ ಸೋಲಿನ ನಂತರ ಮತ್ತು ಅನುಭವಿಸಿರುವ ಅವಮಾನದ ನಂತರ ಅವರ ಕೋಪ ಇನ್ನೂ ಶಮನವಾದಂತಿಲ್ಲ.
ಹಿರಿಯ ನಾಯಕರ ಬಗ್ಗೆ ರಾಹುಲ್ ಕೆಂಡ
ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಅವರು ಸೋಲಿನ ವಿಮರ್ಶೆ ಮಾಡಿದ್ದಲ್ಲದೆ, ತಾವು ಆರಂಭಿಸಿದ್ದ 'ಚೌಕಿದಾರ್ ಚೋರ್ ಹೈ' ಎಂಬ ಅಭಿಯಾನವನ್ನು ಪಕ್ಷದ ನಾಯಕರು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ವಿಫಲರಾಗಿದ್ದಾರೆ ಎಂದು ಕೆಂಡಾಮಂಡಲರಾಗಿದ್ದರು. ಅಲ್ಲದೆ, ಪಕ್ಷಕ್ಕಿಂತ ತಮ್ಮ ಕುಟುಂಬಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಿ, ತಮ್ಮ ಮಕ್ಕಳಿಗೆ ಟಿಕೆಟ್ ದೊರಕಿಸುವಲ್ಲಿ ಯಶಸ್ವಿಯಾಗಿದ್ದ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ವಿರುದ್ಧ ರಾಹುಲ್ ಗಾಂಧಿ ಸಭೆಯಲ್ಲಿಯೇ ಗರಂ ಆಗಿದ್ದರು. ಈ ಸಮಯದಲ್ಲಿ ಪಿ ಚಿದಂಬರಂ ಅವರು ಭಾವುಕರಾಗಿದ್ದರು ಎಂದು ತಿಳಿದುಬಂದಿದೆ.
ಪಕ್ಷಕ್ಕಿಂತ ಮಕ್ಕಳೇ ಹೆಚ್ಚಾದರೆ?
ವಸ್ತುಸ್ಥಿತಿಯೇನೆಂದರೆ, ಪಕ್ಷದ ಘಟಾನುಘಟಿ ನಾಯಕರ ಮಕ್ಕಳನೇಕರು ಸೋತಿದ್ದಾರೆ. ಪ್ರಮುಖವಾಗಿ ಮಧ್ಯ ಪ್ರದೇಶದಲ್ಲಿ ದಿವಂಗತ ಮಾಧವರಾವ್ ಸಿಂಧಿಯಾ ಅವರ ಮಗ ರಾಹುಲ್ ಗಾಂಧಿ ಅವರ ಬಲಗೈ ಬಂಟ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಸೋತಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮಗ ವೈಭವ್ ಗೆಹ್ಲೋಟ್, ಬಿಜೆಪಿಯ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಮಗ ಮನವೇಂದ್ರ ಸಿಂಗ್, ಮಾಜಿ ಕೇಂದ್ರ ಸಚಿವ ಮೋಹನ್ ದೇವ್ ಅವರ ಮಗಳು ಸುಷ್ಮಿತಾ ದೇವ್ ಮುಂತಾದವರು ಮಣ್ಣು ಮುಕ್ಕಿದ್ದಾರೆ. ಇವರೆಲ್ಲ, ಪಕ್ಷವನ್ನು ಗೆಲ್ಲಿಸುವ ಬದಲು ತಮ್ಮ ಮಕ್ಕಳ ಜಯಕ್ಕಾಗಿ ಹೆಚ್ಚಿನ ಸಮಯ, ಹಣ ವ್ಯಯಿಸಿದ್ದಾರೆ ಎಂಬ ಕೋಪ ರಾಹುಲ್ ಅವರದು. ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೊಂದೇ ಸೀಟು ಮಾತ್ರ.
ಲೋಕ ಚುನಾವಣೆ ಸೋಲಿನ ಬಗ್ಗೆ ರಾಹುಲ್ ಹೇಳಿದ್ದೇನು?
ಕಂಗೆಡುವಂತೆ ಮಾಡಿದ ಹೋರಾಟದ ಸೋಲು
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು, ನರೇಂದ್ರ ಮೋದಿ ವಿರುದ್ಧ ತಮ್ಮ ವೈಯಕ್ತಿಕ ಹೋರಾಟದ ಸೋಲು, ಹೋರಾಟವನ್ನು ಮುಂದುವರಿಸುವಲ್ಲಿ ಪಕ್ಷದ ನಾಯಕರು ಸೋತಿದ್ದು ರಾಹುಲ್ ಗಾಂಧಿ ಅವರನ್ನು ಕಂಗೆಡುವಂತೆ ಮಾಡಿದೆ. ಒಂದೆಡೆ ಅಮೇಥಿಯಲ್ಲಿ ತಾವೇ ಸ್ವತಃ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರೆ, ಉತ್ತರ ಪ್ರದೇಶದಲ್ಲಿ ಅವರ ಸಹೋದರಿಯೂ ಪಕ್ಷಕ್ಕೆ ಹೆಚ್ಚು ಸ್ಥಾನ ದಕ್ಕಿಸಿಕೊಡುವಲ್ಲಿ ಸೋತಿದ್ದಾರೆ. ಇಡೀ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಸೀಟು, ಅದೂ ರಾಯ್ ಬರೇಲಿಯಲ್ಲಿ. ಸೋನಿಯಾ ಗಾಂಧಿ ಮಾತ್ರ ಜಯಶಾಲಿಯಾಗಿದ್ದಾರೆ. ಒಂದು ವೇಳೆ ರಾಹುಲ್ ಅವರು ಕೇರಳದ ವಯನಾಡಿನಿಂದ ಸ್ಪರ್ಧಿಸದಿರದಿದ್ದರೆ ಅವರು ಇಂದು ಸಂಸತ್ತನ್ನೇ ಪ್ರವೇಶಿಸುತ್ತಿರಲಿಲ್ಲ.
ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು
ಪಕ್ಷವನ್ನು ನಡುನೀರಿನಲ್ಲಿ ಬಿಡುವುದಿಲ್ಲ
ತಾವು ಪದತ್ಯಾಗ ಮಾಡಿದರೂ ಪಕ್ಷವನ್ನು ನಡುನೀರಿನಲ್ಲಿ ಬಿಡುವುದಿಲ್ಲ, ಪಕ್ಷಕ್ಕಾಗಿ ಮುಂದೆಯೂ ಕೆಲಸ ಮಾಡುತ್ತೇನೆ ಎಂದು ಅವರು ವಾಗ್ದಾನ ನೀಡಿದ್ದಾರೆ ಮತ್ತು ಹಿರಿಯ ನಾಯಕರಿಗೆ ಸೂಕ್ತ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಸಮಯಾವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಅವರು ನಿರ್ಧಾರಕ್ಕೆ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಅವರ ಬೆಂಬಲವೂ ದಕ್ಕಿದೆ. ಪಕ್ಷದಲ್ಲಿ ಬದಲಾವಣೆ ಆಗಲೇಬೇಕು ಎಂಬ ದೃಢ ನಿರ್ಧಾರಕ್ಕೆ ರಾಹುಲ್ ಗಾಂಧಿ ಬಂದಂತಿದೆ. ಇಷ್ಟಿದ್ದೂ, ಪಕ್ಷದ ಹಿರಿಯ ನಾಯಕರು ಹೇಳುತ್ತಿರುವುದೇನೆಂದರೆ, ರಾಹುಲ್ ಗಾಂಧಿ ಅವರ ರಾಜೀನಾಮೆ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ ಮತ್ತು ಅವರನ್ನೇ ಮುಂದುವರಿಯುವಂತೆ ಕೋರಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು
ಕರ್ನಾಟಕದಲ್ಲಿಯೂ ಅವಮಾನಕರ ಸೋಲು
ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ವನಾಶವಾಗಿ ಹೋಗಿದೆ. ಗುಜರಾತ್ ನಲ್ಲಿ ಸೊನ್ನೆ, ಆಡಳಿತ ನಡೆಸುತ್ತಿರುವ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್ ಗಢ, ಕರ್ನಾಟಕ (ಜೆಡಿಎಸ್ ಜೊತೆ ಮೈತ್ರಿ) ಮುಂತಾದ ರಾಜ್ಯಗಳಲ್ಲಿ ಕೇವಲ ಒಂದೊಂದು ಸೀಟು ಗೆದ್ದಿದೆ. ಇದಕ್ಕಿಂತ ಅವಮಾನಕರ ಸಂಗತಿ ರಾಹುಲ್ ಗಾಂಧಿ ಅವರಿಗೆ ಮತ್ತೊಂದೇನಿದೆ. ಇದ್ದುದರಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಂಜಾಬ್ ನಲ್ಲಿ ಮತ್ತು ಕೇರಳದಲ್ಲಿ ಕಾಂಗ್ರೆಸ್ ಮಾನ ಉಳಿದಿದೆ. ಈಗ ರಾಹುಲ್ ತಮ್ಮ ಹುದ್ದೆಯನ್ನು ತ್ಯಜಿಸಿದ ನಂತರ ಆ ಪ್ರತಿಷ್ಠೆಯ ಪಟ್ಟದ ಮೇಲೆ ಕೂಡುವವರು ಯಾರು, ಆ ಸಾಮರ್ಥ್ಯ ಯಾರಿಗಿದೆ? ಯುವ ನಾಯಕರು ಬಂದು ಕೂಡುತ್ತಾರೋ ಅಥವಾ ಹಿರಿಯರು ದೇಶದ ಅತಿ ಪುರಾತನ ಪಕ್ಷದ ಹುದ್ದೆಯನ್ನು ಅಲಂಕರಿಸುತ್ತಾರೊ?