ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ
ಶ್ರೀಹರಿಕೋಟಾ, ಅ. 16: ಮಂಗಳಯಾನದ ಯಶಸ್ಸಿನಲ್ಲಿ ಬೀಗುತ್ತಿರುವ ಇಸ್ರೋ ಗುರುವಾರ ಮತ್ತೊಂದು ಸಾಧನೆ ಮಾಡಿದೆ ದೇಶದ ಹೆಮ್ಮ ಹೆಚ್ಚಿಸಿದೆ. ದಿಕ್ಸೂಚಿ ಉಪಗ್ರಹವೊಂದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ಕೇಂದ್ರದಿಂದ ಗುರುವಾರ ಬೆಳಗಿನ ಜಾವ ಉಡಾವಣೆ ಮಾಡಲಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.
ನೇವಿಗೇಶನ್ ವಿಭಾಗದಲ್ಲಿ ಇದು ಹೊಸ ಸಂಚಲನ ಮೂಡಿಸಿದ್ದು ಭಾರತ ಜಿಪಿಎಸ್ ಸೌಲಭ್ಯಕ್ಕೆ ಬೇರಾವ ದೇಶದ ಮುಂದೆ ಕೈ ಚಾಚಬೇಕಾಗಿಲ್ಲ. ಜಿಪಿಎಸ್ ತಂತ್ರಜ್ಞಾನ ಅಭಿವೃದ್ಧಿಗೆ ಈ ಇಂಡಿಯನ್ ರಿಜನಲ್ ನೆವಿಗೇಶನ್ ಸೆಟ್ ಲೈಟ್ ಸಿಸ್ಟಮ್ (ಐಆರ್ ಎನ್ ಎಸ್ ಎಸ್) ನೆರವು ನೀಡುತ್ತದೆ.[ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ?]
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಐಆರ್ಎನ್ಎಸ್ಎಸ್ -1ಸಿ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನುಪಿಎಸ್ ಎಲ್ವಿ ಸಿ -26 ವಾಹಕದ ಮೂಲಕ ಗುರುವಾರ ಬೆಳಗಿನ ಜಾವ 1.32ರ ವೇಳೆಗೆ ಉಡಾವಣೆ ಮಾಡಲಾಗಿದ್ದು ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿದೆ.
ಸೋಮವಾರ ಮುಂಜಾನೆಯಿಂದ ಸತತ 67 ಗಂಟೆಗಳ ಕಾಲ ಪ್ರಯತ್ನದ ನಂತರ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 1,425 ಕೆ.ಜಿ ತೂಕದ ಈ ಉಪಗ್ರಹ ಉಡಾವಣೆಯಾದ 20 ನಿಮಿಷಗಳ ನಂತರ ನಿಗದಿತ ಕಕ್ಷೆಗೆ ಸೇರಿದೆ.[ಹೆಮ್ಮೆ ಪಡುವಂತೆ ಮಾಡಿದವರಿಂದ ಹಣ ಪಡೆಯಲ್ಲ']
ಕಾರ್ಯಕ್ರಮದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ಯೋಜನೆಗೆ ಶ್ರಮಿಸಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಉಪಗ್ರಹದ ಜೀವಿತಾವಧಿ ಹತ್ತು ವರ್ಷಗಳಾಗಿರುವುದು. ನಿಗದಿಯಂತೆ ಅಕ್ಟೋಬರ್ 10ರಂದೇ ಉಪಗ್ರಹ ಉಡಾವಣೆಯಾಗಬೇಕಿತ್ತು. ಆದರೆ ಕೆಲ ತಾಂತ್ರಿಕ ತೊಂದರೆಗಳು ಹಿನ್ನಡೆ ಉಂಟುಮಾಡಿದವು ಎಂದು ತಿಳಿಸಿದರು.
ಪ್ರಧಾನಮಂತ್ರಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಉಪಸ್ಥಿತರಿದ್ದು, ವಿಜ್ಞಾನಿಗಳನ್ನು ಅಭಿನಂದಿಸಿದರು. ಅಲ್ಲದೇ ಭಾರತ ವೈಜ್ಞಾನಿಕ ಬೆಳವಣಿಗೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.