ನಂಬಿನಾರಾಯಣನ್ ಪ್ರಕರಣ: ಕೇರಳ ಪೊಲೀಸರಿಗಷ್ಟೇ ಅಲ್ಲ, ದೇಶಕ್ಕೇ ಪಾಠ
ನವದೆಹಲಿ, ಸೆಪ್ಟೆಂಬರ್ 14: ಇಸ್ರೋದ ಮಾಜಿ ವಿಜ್ಞಾನಿಯೊಬ್ಬರಿಗೆ ಮಾನಸಿಕ ಹಿಂಸೆ ನೀಡಿದ ಹಾಗೂ ದೌರ್ಜನ್ಯ ಮಾಡಿದ ಕಾರಣಕ್ಕೆ ಕೇರಳ ಪೊಲೀಸರು ಪರಿಹಾರ ರೂಪದಲ್ಲಿ 50 ಲಕ್ಷ ರುಪಾಯಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಗೂಢಚರ್ಯೆ ಹಗರಣದಲ್ಲಿ 1994ರಲ್ಲಿ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದರು.
ನಂಬಿನಾರಾಯಣನ್ ಇಸ್ರೋದ ಮಾಜಿ ವಿಜ್ಞಾನಿ, ಅವರನ್ನು ಅನಗತ್ಯವಾಗಿ ಬಂಧಿಸಿ ದೌರ್ಜನ್ಯ ಎಸಗಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಮಾನಸಿಕ ಕ್ರೌರ್ಯ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ ಇಸ್ರೋ ಗೂಢಚರ್ಯೆ ಪ್ರಕರಣದಲ್ಲಿ ಹೇಳಿದೆ. ನಂಬಿ ನಾರಾಯಣನ್ ಅವರು ಕೇರಳ ಪೊಲೀಸರ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್ ಅವರನ್ನು ಕೇಳಿದೆ.
ಗಾಂಧಿ ಜಯಂತಿ ಮರುದಿನದಂದು ಸಿಜೆಐಯಾಗಿ ರಂಜನ್ ಅಧಿಕಾರಕ್ಕೆ
"ನೀವು ನನ್ನನ್ನು ಅಪರಾಧಿ, ದೇಶದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ. ಅವರು (ಯಾರು ಹಾಗೆ ಚಿತ್ರಿಸಿದರೋ) ಮಾಡಿದ ಕೆಲಸಕ್ಕಾಗಿ ನಾಚಿಕೆ ಆಗಬೇಕು. ಆ ಕೆಲಸದಿಂದ ವಿಪರೀತ ಮಾನಸಿಕ ಹಿಂಸೆ ಹಾಗೂ ಅವಮಾನ ಆಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಾನಸಿಕ ನೆಮ್ಮದಿ ಸಿಕ್ಕಿದೆ. ನನಗೀಗ ಬಹಳ ವಯಸ್ಸಾಗಿದೆ. ನಾನು ಈಗಲಾದರೂ ಸ್ವಲ್ಪ ಸಮಯ ಕುಟುಂಬದವರ ಜತೆ ಕಳೆಯಲು ಬಯಸುತ್ತೇನೆ" ಎಂದು ನಂಬಿನಾರಾಯಣನ್ ಹೇಳಿದ್ದಾರೆ.
ಕಾನೂನುಬಾಹಿರವಾಗಿ ವಶಕ್ಕೆ ಪಡೆದು, ಹಿಂಸೆ ಕೊಟ್ಟಿದ್ದಾರೆ: ನಂಬಿನಾರಾಯಣನ್
ಈಗ 70 ವರ್ಷ ವಯಸ್ಸಿನ ನಂಬಿನಾರಾಯಣನ್ ಇಸ್ರೋದ ಮಾಜಿ ವಿಜ್ಞಾನಿ. "ನನ್ನನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದು, ಹಿಂಸೆ ಕೊಟ್ಟಿದ್ದಾರೆ" ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕ್ರಯೋಜೆನಿಕ್ಸ್ ನ ಮುಖ್ಯಸ್ಥರಾಗಿದ್ದ ಅವರ ಮೇ ಗೂಢಚರ್ಯೆ ಆರೋಪ ಹೊರೆಸಿ, ಬಂಧಿಸಲಾಗಿತ್ತು. ಆ ನಂತರ ಕೇರಳ ಪೊಲೀಸರಿಂದ ಪ್ರಕರಣವನ್ನು 1996ರಲ್ಲಿ ವಹಿಸಿಕೊಂಡಿತ್ತು. ನಂಬಿನಾರಾಯಣನ್ ವಿರುದ್ಧದ ಪ್ರಕರಣ ಆಧಾರರಹಿತ ಎಂದು ರದ್ದು ಮಾಡಿತ್ತು. ಸಿಬಿಐ ವರದಿಯಲ್ಲಿ ಪೊಲೀಸ್ ಅಧಿಕಾರಿಗಳು ಎಸಗಿದ ತಪ್ಪುಗಳದೊಂದು ಪಟ್ಟಿ ಮಾಡಿ, ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು.
ಸುಪ್ರೀಂ ಕೋರ್ಟ್ ನಿಂದ 1 ಲಕ್ಷ ರುಪಾಯಿ ಪರಿಹಾರಕ್ಕೆ ಸೂಚನೆ
ಇಸ್ರೋ ಗೂಢಚರ್ಯೆ ಪ್ರಕರಣದಿಂದ ಮುಕ್ತರಾದ ನಾರಾಯಣನ್ ಮತ್ತು ಇತರರಿಗೆ 1998ರಲ್ಲಿ ಸುಪ್ರೀಂ ಕೋರ್ಟ್ 1 ಲಕ್ಷ ರುಪಾಯಿ ಪರಿಹಾರಕ್ಕೆ ಸೂಚಿಸಿತ್ತು. ಕೇರಳ ಸರಕಾರಕ್ಕೆ ಈ ಬಗ್ಗೆ ನಿರ್ದೇಶನ ಮಾಡಲಾಗಿತ್ತು. ಆದರೆ ಪೊಲೀಸ್ ಅಧಿಕಾರಿಗಳಾದ ಸಿಬಿ ಮಾಥ್ಯೂ, ಕೆ.ಕೆ.ಜೋಶುವಾ ಮತ್ತು ಎಸ್.ವಿಜಯನ್ ವಿರುದ್ಧ ಕೇರಳ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರಲು ನಿರ್ಧರಿಸಿತ್ತು. ಆ ನಿರ್ಧಾರಕ್ಕೆ ಹೈ ಕೋರ್ಟ್ ಕೂಡ ಸಮ್ಮತಿಸಿತ್ತು. ಹೈ ಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ನಂಬಿನಾರಾಯಣನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪ
1970ರಲ್ಲಿ ಭಾರತದಲ್ಲಿ ದ್ರವ ಇಂಧನ ತೈಲ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದವರು ನಂಬಿನಾರಾಯಣನ್ ಎನ್ನಲಾಗುತ್ತದೆ. 1994ರಲ್ಲಿ ನಾರಾಯಣನ್ ಮೇಲೆ ಸೈನ್ಯದ ರಹಸ್ಯವನ್ನು ಮಾಲ್ಡೀವ್ಸ್ ನ ಗುಪ್ತಚರ ಅಧಿಕಾರಿಗಳಿಗೆ ಬಯಲು ಮಾಡಿದ ಆರೋಪ ಬಂದಿತು. ರಾಕೆಟ್ ಮತ್ತು ಉಪಗ್ರಹ ಉಡಾವಣೆಗೆ ಸಬಂಧಿಸಿದ ಪರೀಕ್ಷಾರ್ಥ ಮಾಹಿತಿಯದು. ತೀರಾ ರಹಸ್ಯ ಸಂಗತಿಗಳಿದ್ದವು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದರು.
ಬೇಷರತ್ತಾಗಿ ಕೋರ್ಟ್ ಆದೇಶ ಪಾಲಿಸಲಿದೆ ಕೇರಳ ಸರಕಾರ
ನಂಬಿನಾರಾಯಣನ್ ಹಾಗೂ ಮತ್ತೊಬ್ಬ ವಿಜ್ಞಾನಿ ಡಿ.ಶಶಿಕುಮಾರನ್ ಲಕ್ಷಾಂತರ ರುಪಾಯಿಗೆ ಇಸ್ರೋದ ರಹಸ್ಯಗಳ ಮಾರಾಟ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ನಂಬಿನಾರಾಯಣನ್ ಐವತ್ತು ದಿನ ಜೈಲಿನಲ್ಲಿ ಕಳೆದರು. ಆ ನಂತರ ಸಿಬಿಐ ತನಿಖೆ ನಡೆಸಿ, ಆರೋಪದಲ್ಲಿ ಆಧಾರವಿಲ್ಲ ಎಂದು ತಿಳಿಸಿತು. ಯಾವುದೇ ಷರತ್ತುಗಳಿಲ್ಲದೆ ಆದೇಶವನ್ನು ಪಾಲಿಸುವುದಾಗಿ ಶುಕ್ರವಾರದಂದು ಕೇರಳ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.