ಮಂಗಳ ಗ್ರಹ ಆಯ್ತು, ಈಗ 'ಶುಕ್ರ'ಯಾನಕ್ಕೆ ಇಸ್ರೋ ಸಜ್ಜು
ಶ್ರೀಹರಿಕೋಟಾ, ಮೇ 18: ಸತತ ಬಾಹ್ಯಾಕಾಶ ಸಾಧನೆಗಳ ಮೂಲಕ ಜಗತ್ತಿನ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆರು ವರ್ಷಗಳ ಹಿಂದೆ ಮಂಗಳ ಗ್ರಹಕ್ಕೆ ತಲುಪಿದ್ದ ಇಸ್ರೋ, 2023ರಲ್ಲಿ ಶುಕ್ರ ಗ್ರಹಕ್ಕೆ ಕಾಲಿಡುವ ಪ್ರಮುಖ ಯೋಜನೆಗೆ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಮುಂದಿನ ಹತ್ತು ವರ್ಷಗಳಲ್ಲಿ ಏಳು ವಿವಿಧ ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಲು ಇಸ್ರೋ ತಯಾರಿ ಮಾಡುತ್ತಿದೆ.
ಇಸ್ರೋ ಮುಂದಿನ ದಶಕದಲ್ಲಿ ಅಂತರ್ ಗ್ರಹ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. 2020ರಲ್ಲಿ ಕಾಸ್ಮಿಕ್ ರೇಡಿಯೇಷನ್ ಅಧ್ಯಯನದ ಎಕ್ಸ್ಪೋಸ್ಯಾಟ್ ಯೋಜನೆ, 2021ರಲ್ಲಿ ಸೂರ್ಯನೆಡೆಗೆ ಆದಿತ್ಯ ಎಲ್1, 2022ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್-2, 2024ರಲ್ಲಿ ಚಂದ್ರಯಾನ-3 ಮತ್ತು 2028ರಲ್ಲಿ ಸೌರ ವ್ಯವಸ್ಥೆಯಾಚೆಗಿನ ಅಧ್ಯಯನದ ಎಕ್ಸೋವರ್ಲ್ಡ್ಸ್ ಯೋಜನೆಗಳು ಇಸ್ರೋ ಪಟ್ಟಿಯಲ್ಲಿವೆ.
ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ
ಶುಕ್ರಗ್ರಹವನ್ನು ಭೂಮಿಯ 'ಅವಳಿ ಸಹೋದರಿ' ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಗಾತ್ರ, ಸಮೂಹ, ಸಂರಚನೆ, ಸಾಂದ್ರತೆ ಹಾಗೂ ಗುರುತ್ವಾಕರ್ಷಣೆಗಳಲ್ಲಿ ಭೂಮಿಯ ಹೋಲಿಕೆ ಇದೆ.
ಶುಕ್ರಗ್ರಹಕ್ಕೆ ತೆರಳುವ ನೌಕೆಯು 20 ಅಧ್ಯಯನ ಉಪಕರಣಗಳನ್ನು ಕೊಂಡೊಯ್ಯಲಿದೆ. ಶುಕ್ರಗ್ರಹದ ಮೇಲ್ಮೈ ಮತ್ತು ಉಪ ಮೇಲ್ಮೈಅಧ್ಯಯನ, ವಾತಾವರಣದ ರಾಸಾಯನಿಕತೆ ಮತ್ತು ಸೌರವಾಯು ಅಥವಾ ಸೌರ ವಿಕಿರಣಗಳ ಅಧ್ಯಯನಕ್ಕೆ ಇದು ಗಮನ ಹರಿಸಲಿದೆ.
20ಕ್ಕೂ ಹೆಚ್ಚು ಅಧ್ಯಯನ ಸಾಧನ
'ಈ ಯೋಜನೆಗೆ ಜಗತ್ತಿನೆಲ್ಲೆಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 20ಕ್ಕೂ ಹೆಚ್ಚು ಅಧ್ಯಯನ ಉಪಕರಣಗಳನ್ನು ಸಾಗಿಸಲು ನಾವು ಯೋಜಿಸಿದ್ದೇವೆ' ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
'ಆದಿತ್ಯ ಎಲ್ 1 ಮತ್ತು ಎಕ್ಸ್ಪೋಸ್ಯಾಟ್ ಯೋಜನೆಗಳ ಬಗ್ಗೆ ಈಗ ವಿವರಣೆ ನೀಡಬಹುದು. ಆದರೆ, ಉಳಿದವು ಯೋಜನಾ ಹಂತದಲ್ಲಿವೆ' ಎಂದು ತಿಳಿಸಿದರು.
ಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರ
ಹವಾಮಾನ ಬದಲಾವಣೆ ಅಧ್ಯಯನ
ಸೂರ್ಯ ಯೋಜನೆ ಆದಿತ್ಯ ಎಲ್1, ಭೂಮಿಯಲ್ಲಿನ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಊಹಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಸೋಲಾರ್ ಕರೋನಾವನ್ನು ಇದು ಅಧ್ಯಯನ ಮಾಡಲಿದೆ. ' ಮೇಲಿನ ವಾತಾವರಣದಲ್ಲಿ ಪ್ರಭಾವ ಹೊಂದಿರುವ ಕರೋನಾ, ಭೂಮಿಯ ಹವಾಮಾನ ಬದಲಾವಣೆ ಮೇಲೆ ಪರಿಣಾಮ ಬೀರುತ್ತದೆ. ನಾವು ಸೋಲಾರ್ ಕರೋನಾವನ್ನು ಚೆನ್ನಾಗಿ ಅರ್ಥಮಾಡಿಕೊಂಡಷ್ಟೂ ಹವಾಮಾನ ಬದಲಾವಣೆಯ ಬಗ್ಗೆ ಹೆಚ್ಚು ನಿಖರವಾಗಿ ಊಹಿಸಲು ಸಾಧ್ಯವಾಗಬಹುದು' ಎಂದು ಅವರು ಹೇಳಿದರು.
ಮೊದಲ ಕಪ್ಪು ರಂಧ್ರಕ್ಕೆ 'ಪೊವೇಹಿ' ಎಂದು ನಾಮಕರಣ
ಭೂಮಿ ಮತ್ತು ಸೂರ್ಯನ ನಡುವೆ
ಆದಿತ್ಯ ಎಲ್ 1 ಯೋಜನೆಯು ನಿಗದಿತ ಅವಧಿಗಿಂತ ಮೊದಲೇ ಜಾರಿಯಾದರೂ ಆಗಬಹುದು. 2020ರ ಮಧ್ಯದಲ್ಲಿ ಬಾಹ್ಯಾಕಾಶ ನೌಕೆಯನ್ನು ಹೊರತೆಗೆದು 'ಲಿಬರೇಷನ್ ಆರ್ಬಿಟ್'ನಲ್ಲಿ ಇರಿಸಲಾಗುತ್ತದೆ. ಇದು ಭೂಮಿಯಿಂದ 1.5 ಮಿಲಿಯನ್ ಕಿ.ಲೋಮೀಟರ್ ದೂರದಲ್ಲಿದೆ. ಅಂದರೆ, ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಶೇ 1ರಷ್ಟು ದೂರ. ಇಲ್ಲಿ ಎರಡೂ ಗ್ರಹಗಳ ಗುರುತ್ವಾಕರ್ಷಕ ಶಕ್ತಿ ಸಮಾನವಾಗಿರುತ್ತದೆ. ಈ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯು ಸೂರ್ಯನನ್ನು ನಿರಂತರವಾಗಿ ಎದುರಿಸುತ್ತಲೇ ಭೂಮಿಯನ್ನು ಸುತ್ತುಹಾಕಬಹುದು.
ಜುಲೈನಲ್ಲಿ ಚಂದ್ರಯಾನ 2
ಇಸ್ರೋದ ಪ್ರಸಕ್ತ ವರ್ಷದ ಅತಿದೊಡ್ಡ ಯೋಜನೆ ಚಂದ್ರಯಾನ 2 ಜುಲೈನಲ್ಲಿ ಉಡಾವಣೆಯಾಗಲಿದೆ. ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಒಳಗೊಂಡಂತೆ ಬಾಹ್ಯಾಕಾಶ ನೌಕೆಯು ಮೇ ಅಂತ್ಯದ ವೇಳೆಗೆ ಸಿದ್ಧವಾಗಲಿವೆ. ನೌಕೆಯಲ್ಲಿನ ತಂತ್ರಜ್ಞಾನಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಡುತ್ತಿವೆ. ಮೇ ತಿಂಗಳಿನಲ್ಲಿಯೇ ನಾವು ಸಿದ್ಧರಾದರೂ ಗ್ರಹಣಕ್ಕಾಗಿ ಜುಲೈವರೆಗೂ ಕಾಯಲಿದ್ದೇವೆ ಎಂದು ಶಿವನ್ ತಿಳಿಸಿದ್ದಾರೆ.