ಚಂದ್ರಯಾನ-2 ತಡವಾಗಲು ಯುಪಿಎ ಕಾರಣ: ಮಾಧವನ್ ನಾಯರ್
ನವದೆಹಲಿ, ಜೂನ್ 14: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯು ಬಹಳ ಹಿಂದೆಯೇ ನಡೆಯಬೇಕಿತ್ತು. ಆದರೆ, ಆಗಿನ ಯುಪಿಎ ಸರ್ಕಾರದ ರಾಜಕೀಯ ನಿರ್ಧಾರದ ಕಾರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ ಎಂದು ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಆರೋಪಿಸಿದ್ದಾರೆ.
ಚಂದ್ರಯಾನ-2ಗೆ ಇಸ್ರೋ ಸಿದ್ಧತೆ ನಡೆಸಿತ್ತು. ಆದರೆ, 2014ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುಪಿಎ ಸರ್ಕಾರ ಮಂಗಳಯಾನ ಯೋಜನೆಯನ್ನು ಮುಂದಿಟ್ಟಿತು. ಇದರಿಂದ ಚಂದ್ರಯಾನ-2 ವಿಳಂಬವಾಯಿತು ಎಂದು ಹೇಳಿದರು.
ಬಾಹ್ಯಾಕಾಶದಲ್ಲಿ ತನ್ನದೇ ನಿಲ್ದಾಣ ಸ್ಥಾಪಿಸಲಿದೆ ಇಸ್ರೋ
ಮಾಧವನ್ ನಾಯರ್ ಇಸ್ರೋದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2008ರ ಅಕ್ಟೋಬರ್ 22ರಂದು ದೇಶದ ಮೊದಲ ಮಾನವ ರಹಿತ ಯೋಜನೆ ಚಂದ್ರಯಾನ-1ರ ಯಶಸ್ವಿ ಉಡಾವಣೆ ನಡೆದಿತ್ತು.
2009ರ ಆಗಸ್ಟ್ನಲ್ಲಿ ಅವರು 2012ರ ಅಂತ್ಯದೊಳಗೆ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ತಿಳಿಸಿದ್ದರು.
2014ರ ಚುನಾವಣೆಗೂ ಮುನ್ನ ಯುಪಿಎ ಸರ್ಕಾರ ತನ್ನಿಂದ ಕೆಲವು ಮಹತ್ವದ ಕಾರ್ಯ ನಡೆಯುತ್ತಿದೆ ಎಂದು ತೋರಿಸಿಕೊಳ್ಳಲು 'ಮಂಗಳಯಾನ' ಮಂಗಳ ಗ್ರಹ ಕಕ್ಷೆ ಯೋಜನೆಯನ್ನು ಮುಂದಿಟ್ಟಿತು. ಆ ಉದ್ದೇಶದೊಂದಿಗೆ ಯುಪಿಎ ಸರ್ಕಾರ ಮಂಗಳಯಾನ ಯೋಜನೆಯೊಂದಿಗೆ ಮುನ್ನಡೆಯಿತು ಎಂದು ನಾಯರ್ ದೂರಿದರು.
ಹೆಮ್ಮೆಯ ಚಂದ್ರಯಾನ 2: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ
ಮಾಧವನ್ ನಾಯರ್ ಅವರು ಕಳೆದ ವರ್ಷದ ಅಕ್ಟೋಬರ್ನಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಸಜೀವ ಉಪಗ್ರಹಗಳನ್ನು ಹೊಡೆದು ಉರುಳಿಸುವ ಮಿಷನ್ ಶಕ್ತಿ ಯೋಜನೆಯನ್ನು ನರೇಂದ್ರ ಮೋದಿ ಇತ್ತೀಚೆಗೆ ಬಹಿರಂಗಪಡಿಸಿದ ಸಂದರ್ಭದಲ್ಲಿಯೂ ನಾಯರ್, ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ದಶಕದ ಹಿಂದೆಯೇ ಈ ಯೋಜನೆ ಪ್ರಯೋಗ ನಡೆಯಬೇಕಿತ್ತು. ಆದರೆ, ಆಗಿನ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿಯೇ ಇರಲಿಲ್ಲ ಎಂದು ಟೀಕಿಸಿದ್ದರು.
ಯುಪಿಎ ಉದ್ದೇಶ ಈಡೇರಲಿಲ್ಲ
2013ರ ನವೆಂಬರ್ನಲ್ಲಿ ಯುಪಿಎ ಆಡಳಿತ ಅವಧಿಯಲ್ಲಿ ಮಂಗಳಯಾನ ಯೋಜನೆ ಆರಂಭವಾಗಿದ್ದರೂ, ಮಂಗಳನೌಕೆ ಉಡಾವಣೆಯಾಗಿದ್ದು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ (ಸೆಪ್ಟೆಂಬರ್ 2014).
ಹೀಗಾಗಿ ಇದು ಯುಪಿಎ ಸರ್ಕಾರದ ಉದ್ದೇಶವನ್ನು ಈಡೇರಿಸಲಿಲ್ಲ. ತಾಂತ್ರಿಕ ಸಂಗತಿಗಳಿಗಿಂತಲೂ ಚಂದ್ರಯಾನ -2ಗಿಂತ ಮೊದಲು ಮಂಗಳಯಾನ ಯೋಜನೆ ಜಾರಿಯಾಗಲು ರಾಜಕೀಯ ಕಾರಣಗಳೇ ಕಾರಣ ಎಂದು ನಾಯರ್ ಹೇಳಿದರು.
ಮೋದಿ ಸರ್ಕಾರದಿಂದ ಮರುಜೀವ
ಚಂದ್ರಯಾನ-2ರ ಅರ್ಧದಷ್ಟು ಕೆಲಸಗಳು ಮುಗಿದಿದ್ದವು. ಆದರೆ, ಸಂಸ್ಥೆಯ ಸಂಪೂರ್ಣ ಗಮನ ಅಲ್ಲಿಂದ ಮಂಗಳಯಾನ ಯೋಜನೆಯತ್ತ ಹೊರಳಿಸಬೇಕಾಯಿತು. ಹೀಗಾಗಿ ಇಸ್ರೋ ಆರಂಭದಿಂದ ಕೆಲಸ ನಡೆಸಬೇಕಾಯಿತು. ಮೋದಿ ಅವರ ಸರ್ಕಾರ 2014ರಲ್ಲಿ ಬಂದ ಬಳಿಕವಷ್ಟೇ ಚಂದ್ರಯಾನದ ಹಳೆಯ ಯೋಜನೆಗೆ ಮರುಜೀವ ದೊರಕಿತು ಎಂದರು.
ಮಂಗಳ ಗ್ರಹ ಆಯ್ತು, ಈಗ 'ಶುಕ್ರ'ಯಾನಕ್ಕೆ ಇಸ್ರೋ ಸಜ್ಜು
ಸಂಕೀರ್ಣ ಕೆಲಸ
ಮುಂದಿನ ತಿಂಗಳು ಉಡಾವಣೆಗೆ ಸಿದ್ಧವಾಗಿರುವ ಚಂದ್ರಯಾನ-2 ಯೋಜನೆಯನ್ನು ಕನಿಷ್ಠ ಸಮಯದಲ್ಲಿ ಸಿದ್ಧಪಡಿಸಿದ್ದಕ್ಕಾಗಿ ಅವರು ಇಸ್ರೋವನ್ನು ಶ್ಲಾಘಿಸಿದರು. ಇದು ಬಹಳ ಸಂಕೀರ್ಣ ಯೋಜನೆ. ಅನೇಕ ಅಂಶಗಳನ್ನು ಅಭಿವೃದ್ಧಿಪಡಿಸಬೇಕಿರುತ್ತದೆ, ಪರೀಕ್ಷಿಸಬೇಕಾಗುತ್ತದೆ ಮತ್ತು ಅದನ್ನು ಕಾರ್ಯಾಚರಣೆಗೆ ಅಣಿಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ನಾಯರ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ
ನಾಯರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಸರ್ಕಾರವನ್ನು ಟೀಕಿಸುವುದು ನಿಮ್ಮ ಕೆಲಸವಲ್ಲ. ನೀವೊಬ್ಬ ವಿಜ್ಞಾನಿ. ನಮ್ಮ ಸಂವಿಧಾನದಲ್ಲಿ ನೀವು ಹೆಮ್ಮೆಯ ಸ್ಥಾನ ಗಳಿಸಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
ಒಂದು ನಿರ್ದಿಷ್ಟ ಪಕ್ಷ ಅಧಿಕಾರದಿಂದ ಹೊರಕ್ಕೆ ಹೋಯಿತು ಮತ್ತು ಅಧಿಕಾರ ಪಡೆದುಕೊಂಡಿತು ಎಂದು ನೀವು ಗುರುತಿಸಿದರೆ, ನಾಳೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದ ಬಳಿಕ ಬೇರೆ ಯಾವುದೋ ವಿಜ್ಞಾನಿ ಬಿಜೆಪಿಯಿಂದ ಎಲ್ಲವೂ ತಡವಾಯಿತು ಎಂದು ಹಾಡಿದರೆ ಏನು ಮಾಡಲಾಗುತ್ತದೆ? ಎಂದು ಸಿಂಘ್ವಿ ಖಾರವಾಗಿ ಪ್ರಶ್ನಿಸಿದರು.