ಇಸ್ರೋ ಖಾಸಗೀಕರಣ ವಿವಾದ: ಅಧ್ಯಕ್ಷ ಕೆ. ಶಿವನ್ ಹೇಳಿದ್ದೇನು?
ನವದೆಹಲಿ, ಆಗಸ್ಟ್ 20: ಖಾಸಗಿ ವಲಯಗಳ ಪಾಲ್ಗೊಳ್ಳುವಿಕೆಯು ಇಸ್ರೋವನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂಬ ಅರ್ಥ ನೀಡುವುದಿಲ್ಲ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.
ಕೇಂದ್ರ ಸರ್ಕಾರವು ಬಾಹ್ಯಾಕಾಶ ಸುಧಾರಣೆಗಳನ್ನು ಘೋಷಣೆ ಮಾಡಿದಾಗಿನಿಂದಲೂ ಇಸ್ರೋವನ್ನು ಖಾಸಗೀಕರಣ ಮಾಡಲಾಗುತ್ತದೆ ಎಂಬ ತಪ್ಪು ಅಭಿಪ್ರಾಯ ಹರಿದಾಡುತ್ತಿದೆ ಎಂದು ಅವರು ಆನ್ಲೈನ್ ವೆಬಿನಾರ್ವೊಂದರಲ್ಲಿ ಗುರುವಾರ ಹೇಳಿದರು.
ಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆ
ಇಸ್ರೋ ಖಾಸಗೀಕರಣದ ಕುರಿತಾದ ತಪ್ಪು ತಿಳಿವಳಿಕೆಯ ಬಗ್ಗೆ ಮಾತನಾಡಿದ ಅವರು, ಅದು ಖಾಸಗೀಕರಣವಾಗುತ್ತಿಲ್ಲ. ಪದೇ ಪದೇ ನಾನು ಹೇಳುತ್ತಿದ್ದೇನೆ, ಅದು ಇಸ್ರೋದ ಖಾಸಗೀಕರಣವಲ್ಲ ಎಂದರು.
'ಭಾರತದ ಬಾಹ್ಯಾಕಾಶ ವಲಯದ ಸಮೃದ್ಧತೆಯ ವಿಸ್ತರಣೆ' ಕುರಿತು ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಯ ಸಂಪೂರ್ಣ ಗುರಿಯೇನೆಂದರೆ ಖಾಸಗಿ ಸಂಸ್ಥೆಗಳೂ ಕೂಡ ಇಸ್ರೋ ನಡೆಸುತ್ತಿರುವಂತೆ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸಬಹುದು ಎನ್ನುವುದು ಎಂದು ತಿಳಿಸಿದರು. ಮುಂದೆ ಓದಿ.
ಸ್ಟಾರ್ಟ್ಅಪ್ಗಳು ಉತ್ಸುಕ
ಬಾಹ್ಯಾಕಾಶ ಸುಧಾರಣೆಗಳು ಭಾರತೀಯ ಬಾಹ್ಯಾಕಾಶ ಪರಂಪರೆಯ ದಿಕ್ಕನ್ನು ಬದಲಿಸಲಿವೆ ಎಂದ ಅವರು, 'ಖಾಸಗಿ ವಲಯಗಳ ಸಹಭಾಗಿತ್ವ ಬಹಳ ಆರೋಗ್ಯಕಾರಿ. ಸ್ಟಾರ್ಟ್ಅಪ್ಗಳು ಉಡಾವಣಾ ವಾಹನಗಳು ಮತ್ತು ಉಪಗ್ರಹಗಳನ್ನು ತಯಾರಿಸಲು ಆಸಕ್ತವಾಗಿವೆ' ಎಂದು ಹೇಳಿದರು.
ಖಾಸಗಿ ಕಂಪೆನಿಗಳಿಗೆ ಅವಕಾಶ
ಗ್ರಹಗಳ ಅನ್ವೇಷಣಾ ಯೋಜನೆಗಳು ಸೇರಿದಂತೆ ಎಲ್ಲಾ ಬಗೆಯ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯಗಳ ಪಾಲ್ಗೊಳ್ಳುವಿಕೆಗೆ ಜೂನ್ 24ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಹೊಸದಾಗಿ ರಚನೆಯಾದ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಮಾನ್ಯತಾ ಕೇಂದ್ರ (ಇನ್-ಸ್ಪೇಸ್) ಭಾರತೀಯ ಬಾಹ್ಯಾಕಾಶ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಖಾಸಗಿ ಕಂಪೆನಿಗಳಿಗೂ ಸಮಾನ ಅವಕಾಶ ನೀಡಲಿದೆ ಎಂದು ತಿಳಿಸಿತ್ತು.
ನವ ಭಾರತದ ನಿರ್ಮಾರ್ತೃಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ
ನಿಯಂತ್ರಣ ವ್ಯವಸ್ಥೆಯ ಅಗತ್ಯವಿದೆ
ಬಾಹ್ಯಾಕಾಶ ಕ್ಷೇತ್ರವು ಸಾಕಷ್ಟು ಕಾರ್ಯತಂತ್ರ ಮಹತ್ವ ಹೊಂದಿದ್ದರೂ, ಲಭ್ಯ ಇರುವ ಸೌಲಭ್ಯಗಳನ್ನು ಬಳಸಿಕೊಳ್ಳುವ ವಿಚಾರವಾಗಿ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿಲ್ಲ. ಇಸ್ರೋದಲ್ಲಿನ ಚಟುವಟಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕಠಿಣವಾದ ನಿಯಂತ್ರಣಾ ವ್ಯವಸ್ಥೆ ಶೀಘ್ರದಲ್ಲೇ ಜಾರಿಯಾಗುವುದು ಅಗತ್ಯವಿದೆ ಎಂದು ಶಿವನ್ ಹೇಳಿದ್ದಾರೆ.
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಉತ್ತೇಜನ
ಇನ್ಸ್ಪೇಸ್ ಸಂಸ್ಥೆಯು ತಾಂತ್ರಿಕ ಮಾಹಿತಿ ಮತ್ತು ತಿಳಿವಳಿಕೆಗಳನ್ನು ನೀಡಲಿದೆ. ಜತೆಗೆ ಒಂದು ನಿಯಂತ್ರಣಾ ಸಂಸ್ಥೆಯಾಗಿಯೂ ಕೆಲಸ ಮಾಡಲಿದೆ. ಅವರೂ ಕೂಡ ಶೀಘ್ರದಲ್ಲಿಯೇ ತಮ್ಮ ಉಡಾವಣಾ ವಾಹನಗಳನ್ನು ಆರಂಭಿಸಲಿದ್ದಾರೆ. ಆತ್ಮ ನಿರ್ಭರ್ ಭಾರತ್ ಅಭಿಯಾನ್ ಅಡಿಯಲ್ಲಿ ಸಂವಹನ ಉಪಗ್ರಹಗಳ ನಿರ್ಮಾಣವು ಆಂತರಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದರು.