ಐಎಸ್ಐಎಸ್ ಸೇರಲು ಹೊರಟವರು ಭಾರತಕ್ಕೆ ಗಡೀಪಾರು
ಬೆಂಗಳೂರು, ಜ. 31: ಜಗತ್ತಿನಲ್ಲಿ ಉಗ್ರ ಜಾಲ ಹರಡಲು ಯತ್ನಿಸುತ್ತಿರುವ ಐಎಸ್ಐಎಸ್ ಸಂಘಟನೆ ಸೇರಲು ಹೊರಟಿದ್ದ ಭಾರತದ ಒಂಭತ್ತು ಜನ ಟರ್ಕಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಟರ್ಕಿ ದೇಶದ ಗಡಿ ಮೂಲಕ ಸಿರಿಯಾ ಪ್ರವೇಶಿಸಲು ಯತ್ನಿಸುತ್ತಿದ್ದ ಇವರನ್ನು ಅಲ್ಲಿನ ಸರ್ಕಾರ ವಶಕ್ಕೆ ಪಡೆದು ಭಾರತಕ್ಕೆ ಗಡೀಪಾರು ಮಾಡಿದ್ದು, ಬೆಂಗಳೂರಿಗೆ ಕಳುಹಿಸಿದೆ.
ಇವರಲ್ಲಿ ಏಳು ಜನ ತಮಿಳುನಾಡಿನ ಚೆನ್ನೈ ಮೂಲದವರು. ಅವರಲ್ಲಿ ಐವರು ಮಕ್ಕಳು ಹಾಗೂ ಓರ್ವ ಮಹಿಳೆಯೂ ಸೇರಿದ್ದಾರೆ. ಉಳಿದವರಲ್ಲಿ ಓರ್ವ ತೆಲಂಗಾಣ, ಇನ್ನೋರ್ವ ಹಾಸನ ಮೂಲದವರು.
ಏಳು ಜನ ಒಂದೇ ಕುಟುಂಬದವರು : ಚೆನ್ನೈನ ಏಳು ಜನ ಒಂದೇ ಕುಟುಂಬದವರು. ಮುಹಮ್ಮದ್ ಅಬ್ದುಲ್ ಅಹಾದ್ (46), ಆತನ ಪತ್ನಿ ಹಾಗೂ ಉಳಿದ ಐವರು ಈ ದಂಪತಿಯ ಮಕ್ಕಳು. ತೆಲಂಗಾಣದ ಕಮ್ಮಮ್ ಜಿಲ್ಲೆಯ ಜಾವೀದ್ ಬಾಬಾ (24) ಹಾಗೂ ಕರ್ನಾಟಕದ ಹಾಸನ ನಿವಾಸಿ ಇಬ್ರಾಹಿಂ ನೌಫಾಲ್ (24) ಬಂಧಿತ ಆರೋಪಿಗಳು. [ಐಎಸ್ಐಎಸ್ ಸೇರುವವರ ಬಂಧಿಸಲು ಚಕ್ರವ್ಯೂಹ]
ಈ ಗುಂಪು 2014ರ ಡಿಸೆಂಬರ್ 24ರಂದು ಬೆಂಗಳೂರಿನಿಂದ ಇಸ್ತಾನ್ಬುಲ್ಗೆ ಪ್ರವಾಸಿಗರ ವೀಸಾದಡಿ ಆಗಮಿಸಿತ್ತು. ಆದರೆ, ಅವರನ್ನು ವಶಕ್ಕೆ ಪಡೆದ ಟರ್ಕಿ ಸರ್ಕಾರ 2015ರ ಜನವರಿ 30ರಂದು ಭಾರತಕ್ಕೆ ವಾಪಸ್ ಕಳುಹಿಸಿತ್ತು. [ಮೆಹದಿ ಬಂಧನ : ಟಾಪ್ 10 ಬೆಳವಣಿಗೆ]
ಬಂಧಿತರೆಲ್ಲ ವಿದ್ಯಾವಂತರು : ಚೆನ್ನೈ ಮೂಲದ ಅಹದ್ ಎಂಸಿಎ ಪದವೀಧರ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಕೆನಡಿ-ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾನೆ. ಅಲ್ಲಿಯೇ ಸುಮಾರು 10 ವರ್ಷಗಳ ಕಾಲ ಕೆಲಸ ಮಾಡಿದ್ದ. ಅಲ್ಲದೆ, ಜಾವೀದ್ ಹಾಗೂ ನೌಫಾಲ್ ಕೂಡ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. [ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]
ಗಡೀಪಾರಾದವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎಲ್ಲ ಒಂಭತ್ತು ಜನರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಹಿನ್ನೆಲೆ, ಬೆಂಗಳೂರಿನಿಂದ ಟರ್ಕಿಗೆ ಪ್ರಯಾಣಿಸಿದ ಉದ್ದೇಶದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ.