ಪಾಟ್ನಾ- ಇಂದೋರ್ ರೈಲು ದುರಂತ: ಪಾಕ್ ಕೈವಾಡ
ಕಾನ್ಪುರ, ಜನವರಿ. 18 : ಉತ್ತರ ಪ್ರದೇಶದ ಕಾನ್ಪುರ ಬಳಿ ಕಳೆದ ನವೆಂಬರ್ನಲ್ಲಿ ಸಂಭವಿಸಿದ್ದ ಪಾಟ್ನಾ- ಇಂದೋರ್ ರೈಲು ದುರಂತದ ಹಿಂದೆ ಪಾಕಿಸ್ತಾನದ 'ಐಎಸ್ಐ' ಗುಪ್ತಚರ ಸಂಸ್ಥೆಯ ಕೈವಾಡ ಇದೆ ಎಂದು ಬಿಹಾರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾನ್ಪುರ ರೈಲು ದುರಂತ ಸಂಬಂಧ ಬಂಧಿತ ಮೂವರಲ್ಲಿ ಓರ್ವ ಆರೋಪಿ ಮೋತಿ ಪಾಸ್ವಾನ್ ಐಎಸ್ಐ ಕೈವಾಡ ಇರುವುದಾಗಿ ಹೇಳಿದ್ದಾನೆ. ಪಾಟ್ನಾ- ಇಂದೋರ್ ಎಕ್ಸ್ಪ್ರೆಸ್ ರೈಲಿನ ಹಳಿ ತಪ್ಪಿಸಲು ಐಎಸ್ಐ ಸ್ಕೆಚ್ ಹಾಕಿತ್ತೆಂದು ಆರೋಪಿ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೂರ್ವ ಚಂಪಾರನ್ ಎಸ್ಪಿ ಜಿತೇಂದ್ರ ರಾಣಾ ತಿಳಿಸಿದ್ದಾರೆ.[ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ]
ಜುಬೇರ್ ಹಾಗೂ ಜಿಯಾಲ್ ಜೊತೆ ಸೇರಿ ರೈಲು ಹಳ್ಳಿ ತಪ್ಪಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಜುಬೇರ್ ಹಾಗೂ ಜಿಯಾಲ್ ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಪಾಟ್ನಾ- ಇಂದೋರ್ ಎಕ್ಸ್ಪ್ರೆಸ್ನ 14 ಬೋಗಿಗಳು ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂ ಸಮೀಪ ಹಳಿ ತಪ್ಪಿದ್ದರಿಂದ 142 ಮಂದಿ ಮೃತಪಟ್ಟಿದ್ದರು. ಹಾಗೂ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.[ಪಾಟ್ನಾ- ಇಂದೋರ್ ರೈಲು ದುರಂತ: ಸಹಾಯವಾಣಿ ಸಂಖ್ಯೆಗಳು]
ಇದು 2010ರ ಬಳಿಕ ನಡೆದ ಅತ್ಯಂತ ಘೋರ ರೈಲು ದುರಂತ ಎನ್ನಲಾಗಿತ್ತು. ಕಾನ್ಪುರ ರೈಲು ದುರಂತ ಹಾಗೂ ಕಳೆದ ವರ್ಷ ಬಿಹಾರದ ಘೋರಸಹನ್ ಸ್ಟೇಷನ್ ಬಳಿ ಸರಕು ಹಾಗೂ ಪ್ರಯಾಣಿಕರ ರೈಲು ಸ್ಫೋಟಿಸಲು ವಿಫಲ ಯತ್ನ ನಡೆದಿರುವ ಘಟನೆಯ ಹಿಂದೆಯೂ ಐಎಸ್ಐ ಕೈವಾಡ ಇದೆ ಎಂದು ಅನುಮಾನ ವ್ಯಕ್ತವಾಗಿದೆ.
ಹಾಗೆಯೇ ಬಂಧಿತ ಆರೋಪಿಗಳು ಪಾಸ್ವಾನ್, ಉಮಾಶಂಕರ್ ಪ್ರಸಾದ್ ಹಾಗೂ ಮುಖೇಶ್ ಯಾದವ್ ಜೊತೆ ಐಎಸ್ಐ ಸಂಪರ್ಕ ಹೊಂದಿರುವ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.