ಆರ್ಎಸ್ಎಸ್ ಕಾರ್ಯಕರ್ತರೇ ಟಾರ್ಗೆಟ್; ಅಸ್ಸಾಂನಲ್ಲಿ ಐಎಸ್ಐ, ಅಲ್-ಕೈದಾ ದಾಳಿಗೆ ಸಂಚು!
ನವದೆಹಲಿ, ಅಕ್ಟೋಬರ್ 19: ಅಸ್ಸಾಂನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿರುವುದಾಗಿ ಆರೋಪಿಸಿ ಪಾಕಿಸ್ತಾನ ಗುಪ್ತಚರ ಇಲಾಖೆ(ಐಎಸ್ಐ) ಹಾಗೂ ಅಲ್-ಖೈದಾ ಉಗ್ರ ಸಂಘಟನೆಗಳು ದಾಳಿ ನಡೆಸುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪೊಲೀಸರ ವಿಶೇಷ ಶಾಖೆಯಿಂದ ಬಂದ ವರದಿಗಳನ್ನು ಅನುಸರಿಸಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಶನಿವಾರ ಹೊರಡಿಸಿದ ಸುತ್ತೋಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿಗೆ CRPFನಿಂದ ಮಹಿಳೆಯರ ತಪಾಸಣೆ
'ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕಾರ್ಯಕರ್ತರು ಮತ್ತು ಅಸ್ಸಾಂನ ಸೇನಾ ಪ್ರದೇಶಗಳು ಮತ್ತು ಭಾರತದ ಇತರ ಸ್ಥಳಗಳನ್ನು ಒಳಗೊಂಡಂತೆ' ವ್ಯಕ್ತಿಗಳನ್ನು ಗುರಿಯಾಗಿಸಲು ಐಎಸ್ಐ ಸಂಚು ರೂಪಿಸಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಅಸ್ಸಾಂನಲ್ಲಿ ಉಗ್ರ ಸಂಘಟನೆಗಳಿಂದ ಬೆದರಕೆ:
"ಜಾಗತಿಕ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆಯಿದೆ. ಬೃಹತ್ ಸಮೂಹ, ಸಾಮೂಹಿಕ ಸಾರಿಗೆ, ಧಾರ್ಮಿಕ ಸ್ಥಳಗಳು ಸೇರಿದಂತೆ ಇತ್ಯಾದಿಗಳಲ್ಲಿ ಬಾಂಬ್ಗಳು/ ಐಇಡಿ ಸ್ಫೋಟಗಳನ್ನು ನಡೆಸುವ ಮೂಲಕ ಸಾಧ್ಯತೆಯಿದೆ." ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿರುವ ಇನ್ನೊಂದು ಮಾಹಿತಿ ಪ್ರಕಾರ, ಅಲ್-ಖೈದಾ 'ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಜಿಹಾದ್'ಗೆ ಕರೆ ನೀಡಿದೆ ಎಂದು ಹೇಳಲಾಗಿದೆ.
ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಧಲ್ಪುರ್ ಕಾರ್ಯಾಚರಣೆಯಲ್ಲಿ ಇಬ್ಬರು ವ್ಯಕ್ತಿಗಳ ಸಾವಿಗೆ ಸಂಬಂಧಿಸಿದಂತೆ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಪ್ರಧಾನ ಕಾರ್ಯದರ್ಶಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಧಲ್ಪುರದಲ್ಲಿ 'ಅಕ್ರಮ ವಸಾಹತುಗಾರರ' ವಿರುದ್ಧದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಪೊಲೀಸರು ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಓವೈಸಿ ಖಂಡನೆ:
ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವ್ಯವಸ್ಥಿತ ಕಿರುಕುಳ ಮತ್ತು ಹಿಂಸಾಚಾರವನ್ನು ಹೆಚ್ಚಿಸಿದೆ' ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಅವರು ಖಂಡಿಸಿದ್ದಾರೆ.
ಶಿಸ್ತುಕ್ರಮಕ್ಕೆ ಅಗತ್ಯ ಕ್ರಮ:
'ಜಾಗತಿಕ ಭಯೋತ್ಪಾದಕ ಸಂಘಟನೆಗಳು ಮತ್ತು ಮೂಲಭೂತ/ ಆಮೂಲಾಗ್ರ ಅಂಶಗಳಿಂದ' ಯಾವುದೇ ದುಷ್ಟ ಕಾರ್ಯಗಳು ನಡೆಯದಂತೆ ತಡೆಯಲು ರಾಜ್ಯದ ಪೊಲೀಸ್ ಯಂತ್ರೋಪಕರಣಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು. ಆ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಗುಪ್ತಚರ ಇಲಾಖೆ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದೆ.
ಜಮ್ಮು ಕಾಶ್ಮೀರದ ದಾಳಿ ಹಿಂದೆಯೂ ಐಎಸ್ಐ:
ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಮೇಲಿನ ದೌರ್ಜನ್ಯ ಆರೋಪದ ಮೇಲೆ ದಾಳಿ ನಡೆಸುವುದಕ್ಕೆ ಪಾಕಿಸ್ತಾನ ಗುಪ್ತಚರ ಇಲಾಖೆ ಮತ್ತು ಅಲ್ ಖೈದಾ ಉಗ್ರ ಸಂಘಟನೆಗಳು ಈಗ ಸಂಚು ರೂಪಿಸುತ್ತಿವೆ. ಆದರೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಈಗಾಗಲೇ ಐಎಸ್ಐ ಎಲ್ಲ ರೀತಿ ತಂತ್ರಗಳನ್ನು ರೂಪಿಸಿದೆ. ಕಣಿವೆ ರಾಜ್ಯದ ನಾಗರಿಕರಲ್ಲಿ ಭಯ ಹುಟ್ಟಿಸುವಂತಾ ವಾತಾವರಣವನ್ನು ಸೃಷ್ಟಿಸುತ್ತಿದೆ. ನಾಗರಿಕರ ಮೇಲೆ ಉಗ್ರರ ಸರಣಿ ದಾಳಿಯಿಂದ ರಾಜ್ಯದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ. ಈ ಎಲ್ಲ ಬೆಳವಣಿಗೆಗೆ ಸ್ಥಳೀಯರನ್ನೇ ಐಎಸ್ಐ ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.
ಅಸ್ಸಾಂನಲ್ಲೂ ಸ್ಥಳೀಯರನ್ನು ಬಳಸಿಕೊಳ್ಳುವ ತಂತ್ರ:
ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿಗೆ ಸ್ಥಳೀಯರನ್ನೇ ಹೆಚ್ಚಾಗಿ ಬಳಸಿಕೊಳ್ಳುವುದುಕ್ಕೆ ಐಎಸ್ಐ ಯೋಜನೆ ಹಾಕಿಕೊಂಡಿದೆ. ಆ ಮೂಲಕ ದಾಳಿಗಳು ಸ್ವಾಭಾವಿಕದಂತೆ ಬಿಂಬಿಸುವ ಹುನ್ನಾರ ನಡೆಸಿದ್ದು, ಅಸ್ಸಾಂನಲ್ಲೂ ಅದೇ ರೀತಿ ಸ್ಥಳೀಯರನ್ನೇ ದಾಳವಾಗಿ ಬಳಸಿಕೊಳ್ಳುವುದಕ್ಕೆ ಐಎಸ್ಐ ಸಂಚು ರೂಪಿಸಿದೆಯಾ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಕಾಶ್ಮೀರದಲ್ಲಿ 200 ಜನರ ಹಿಟ್ ಲಿಸ್ಟ್ ಸಿದ್ಧಪಡಿಸಿದ ಐಎಸ್ಐ:
ಜಮ್ಮು ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ(ಐಎಸ್ಐ) ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಸೆಪ್ಟೆಂಬರ್ 13ರಂದು ಉಗ್ರರು, ಸೇನೆ ಹಾಗೂ ಭಯೋತ್ಪಾದಕರೊಂದಿಗೆ ಸಭೆ ನಡೆಸಿದ ಐಎಸ್ಐ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಬಗ್ಗೆ ಚರ್ಚೆ ನಡೆಸಿದೆ. ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಐಎಸ್ಐ 200 ಜನರ "ಹಿಟ್-ಲಿಸ್ಟ್" ಮಾಡಿದೆ. ಭಾರತೀಯ ಸರ್ಕಾರಕ್ಕೆ ಹತ್ತಿರವಿರುವ ಮಾಧ್ಯಮ ಸಿಬ್ಬಂದಿ ಮತ್ತು ಭಾರತೀಯ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳ ಮೂಲಗಳು ಮತ್ತು ಮಾಹಿತಿದಾರರನ್ನು ಹೊರತುಪಡಿಸಿ, ವಲಸೆ ಕಾರ್ಮಿಕರು, ಪಂಡಿತರು ಹಾಗೂ ಕಾಶ್ಮೀರಕ್ಕೆ ಅವರನ್ನು ಹಿಂದಿರುಗಿಸಲು ಸಕ್ರಿಯವಾಗಿ ಶ್ರಮಿಸುತ್ತಿರುವ ಅನೇಕ ಕಾಶ್ಮೀರಿ ಪಂಡಿತರ ಹೆಸರನ್ನು ಸೇರಿಸಲಾಗಿದೆ.