ತಾಜ್ ಮಹಲ್ ಮೂಲದಲ್ಲಿ ಶಿವ ದೇವಾಲಯವೇ?: ಮತ್ತೆ ಎದ್ದಿತು ಪ್ರಶ್ನೆ
ತಾಜ್ ಮಹಲ್ ನ ನಿರ್ಮಿಸಿದ್ದು ಷಹಜಹಾನ್ ನ ಅಥವಾ ಅದು ಆ ಮೊಘಲ್ ದೊರೆಗೆ ರಜಪೂತ ರಾಜ ಉಡುಗೊರೆಯಾಗಿ ನೀಡಿದ ಶಿವ ದೇವಾಲಯವಾ? ಈ ಬಗ್ಗೆ ಕೇಂದ್ರ ಮಾಹಿತಿ ಆಯೋಗವು ಮಾಹಿತಿಯನ್ನು ಕೇಳಿದೆ.
ಇತಿಹಾಸವನ್ನೇ ಪ್ರಶ್ನೆ ಮಾಡುವಂಥ ಈ ಮಾಹಿತಿಯನ್ನು ನೀಡುವಂತೆ ಇತಿಹಾಸ ತಜ್ಞರವರೆಗೆ ಇದು ತಲುಪಿದೆ. ಮತ್ತು ಹಲವು ಕೋರ್ಟ್ ಗಳಲ್ಲಿ ಈ ಬಗ್ಗೆ ಪ್ರಕರಣಗಳಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಶ್ನೆಯೊಂದು ಬಂದಿದೆ. ಅದೀಗ ಸಂಸ್ಕೃತಿ ಸಚಿವಾಲಯದ ಬಾಗಿಲು ಬಡಿದಿದೆ.
ಇನ್ನು, ತಾಜ್ ಮಹಲನ್ನು ಯಾರೂ ಮುಟ್ಟೋ ಹಾಗಿಲ್ಲ!
"ಈ ವಿವಾದಕ್ಕೆ ಕೊನೆ ಹೇಳಬೇಕಾಗಿದೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ, ಬಿಳಿ ಅಮೃತಶಿಲೆಯಲ್ಲಿ ನಿರ್ಮಾಣವಾದ ಈ ಕಟ್ಟಡದ ಬಗ್ಗೆ ಇತಿಹಾಸದಲ್ಲಿ ಇರುವ ಸಂಶಯಗಳಿಗೆ ಸ್ಪಷ್ಟನೆ ನೀಡಬೇಕು" ಎಂದು ಈಚೆಗಿನ ಆದೇಶದಲ್ಲಿ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಸಚಿವಾಲಯಕ್ಕೆ ತಿಳಿಸಿದ್ದಾರೆ.
ಇತಿಹಾಸ ತಜ್ಞ ಪಿ.ಎನ್.ಓಕ್ ಹಾಗೂ ವಕೀಲರಾದ ಯೋಗೇಶ್ ಸಕ್ಸೇನಾ ಪದೇಪದೇ ಇದೇ ವಿಚಾರ ಹೇಳುತ್ತಿದ್ದಾರೆ. ಆದ್ದರಿಂದ ತಾಜ್ ಮಹಲ್ ಬಗ್ಗೆ ಸಂಸ್ಕೃತಿ ಸಚಿವಾಲಯದ ನಿಲವೇನು ಎಂಬ ಬಗ್ಗೆ ಮಾಹಿತಿ ನೀಡಲು ಆಚಾರ್ಯುಲು ಶಿಫಾರಸು ಮಾಡಿದ್ದಾರೆ.
ವಿಶ್ವದ ಟಾಪ್ 10 ಸ್ಮಾರಕಗಳಲ್ಲಿ ಸ್ಥಾನ ಪಡೆದ ಪ್ರೇಮ ಸೌಧ
ಈ ಬಗ್ಗೆ ಕೆಲವು ಪ್ರಕರಣಗಳು ಕೋರ್ಟ್ ನಲ್ಲಿವೆ. ಸುಪ್ರೀಂ ಕೋರ್ಟ್ ನಲ್ಲೂ ಇವೆ. ಕೆಲವು ವಜಾ ಆಗಿದ್ದರೆ, ಇನ್ನೂ ಕೆಲವು ಬಾಕಿ ಉಳಿದುಕೊಂಡಿವೆ ಎಂಬುದನ್ನು ಪ್ರಸ್ತಾವಿಸಿದ್ದಾರೆ.
ಆಗಸ್ಟ್ ಮೂವತ್ತರೊಳಗೆ ದಾಖಲೆ ಸಲ್ಲಿಸಿ
ಭಾರತೀಯ ಪುರಾತತ್ವ ಇಲಾಖೆಯು ಕೆಲವು ಪ್ರಕರಣದಲ್ಲಿ ಪಾರ್ಟಿ ಆಗಿದೆ. ಅದರ ಪರವಾಗಿ ಕೆಲವು ಅಫಿಡವಿಟ್ ಗಳು ಸಲ್ಲಿಸಲಾಗಿದೆ. "ಭಾರತೀಯ ಪುರಾತತ್ವ ಇಲಾಖೆಯ ಬಳಿ ತಾಜ್ ಮಹಲ್ ಗೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ಆಗಸ್ಟ್ ಮೂವತ್ತೊರಳಗೆ ಸಲ್ಲಿಸಲು ಸೂಚಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ತಾಜ್ ಮಹಲ್ಲೋ ಅಥವಾ ತೇಜೋ ಮಹಾಲಯವೋ
ಆಗ್ರಾದಲ್ಲಿರುವುದು ತಾಜ್ ಮಹಲ್ಲೋ ಅಥವಾ ತೇಜೋ ಮಹಾಲಯವೋ ಅನ್ನುವುದನ್ನು ಖಾತ್ರಿಪಡಿಸಬೇಕು ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಕೆಎಸ್ಆರ್ ಅಯ್ಯಂಗಾರ್ ಎಂಬುವವರು ಅರ್ಜಿ ಹಾಕಿದ್ದರಿಂದಾ ಇದೀಗ ಕೇಂದ್ರ ಮಾಹಿತಿ ಆಯೋಗವು ಚರ್ಚೆಯೊಳಗೆ ಬಂದಿದೆ.
ಸಾಕ್ಷ್ಯಸಹಿತ ವರದಿ ನೀಡಿ
"ಹಲವು ಇದು ತಾಜ್ ಮಹಲ್ ಅಲ್ಲ, ಇದು ತೇಜೋ ಮಹಾಲಯ ಎನ್ನುತ್ತಾರೆ: ಇದು ಷಹಜಹಾನ್ ನಿರ್ಮಿಸಿದ್ದಲ್ಲ, ರಜಪೂತ ರಾಜ ಮಾನ್ ಸಿಂಗ್ ಉಡುಗೊರೆಯಾಗಿ ನೀಡಿದ್ದು ಎಂಬ ಮಾತಾಡುತ್ತಾರೆ. ಆದ್ದರಿಂದ ಭಾರತೀಯ ಪುರಾತತ್ವ ಇಲಾಖೆಯು ಸಾಕ್ಷ್ಯ ಸಹಿತ ವಿವರವಾದ ವರದಿ ನೀಡಬೇಕು" ಎಂದು ಅರ್ಜಿದಾರರು ಕೇಳಿದ್ದಾರೆ.
ಆದರೆ, ಇಲಾಖೆ ಬಳಿ ಅಂಥ ಯಾವುದೇ ದಾಖಲೆಗಳಿಲ್ಲ ಎನ್ನಲಾಗಿದೆ.
ಕಟ್ಟಡ ನಿರ್ಮಾಣದ ಮಾಹಿತಿ
ಅಯ್ಯಂಗಾರ್ ಅವರು ಹದಿನೇಳನೇ ಶತಮಾನಕ್ಕೆ ಸೇರಿದ ಈ ಕಟ್ಟಡ 'ನಿರ್ಮಾಣದ ಮಾಹಿತಿ'ಗೆ ಸಹ ಒತ್ತಾಯಿಸಿದ್ದಾರೆ. ಅದರ ಕೋಣೆಗಳು, ಮುಚ್ಚಿಡಲಾದ ಕೋಣೆಗಳು ಹಾಗೂ ಸುರಕ್ಷತಾ ದೃಷ್ಟಿಯಿಂದ ಮುಚ್ಚಿದ ಕೋಣೆಗಳ ಬಗ್ಗೆ ಕೂಡ ಮಾಹಿತಿಯನ್ನು ಕೇಳಿದ್ದಾರೆ.
ಸಂಶೋಧನೆಯಿಂದ ತಿಳಿಯಬೇಕು
ಆಚಾರ್ಯುಲು ಹೇಳುವ ಪ್ರಕಾರ, ಅರ್ಜಿದಾರರು ಕೇಳಿದ ಮಾಹಿತಿಗಳು ತಾಜ್ ಮಹಲ್ ನ ಇತಿಹಾಸವನ್ನು ಸಂಶೋಧನೆ ಹಾಗೂ ತನಿಖೆಯಿಂದ ತಿಳಿಯಬೇಕು. ಇದು ಮಾಹಿತಿ ಹಕ್ಕು ಕಾಯ್ದೆ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯನ್ನು ಮೀರಿದ್ದು ಎಂದಿದ್ದಾರೆ.
ಸಂರಕ್ಷಿತ ಸ್ಮಾರಕದ ಉತ್ಖನನ ಅಸಾಧ್ಯ
ಮುಚ್ಚಿರುವ ಕೋಣೆಗಳು ತೆಗೆಯಬೇಕು ಅಂತ ಕೇಳಿರುವುದು, ಗುಪ್ತವಾದ ವಿಚಾರಗಳನ್ನು ಹೊರಗೆಳೆಯಬೇಕು ಎಂಬ ಬೇಡಿಕೆಯನ್ನು ಒಪ್ಪುವುದು ಕಷ್ಟ. ಸಂರಕ್ಷಿತ ಸ್ಮಾರಕವಾದ ತಾಜ್ ಮಹಲ್ ನ ಉತ್ಖನನ ಸಾಧ್ಯವಿಲ್ಲದ್ದು ಹಾಗೂ ಆರ್ ಟಿಐ ಅರ್ಜಿ ಅಡಿ ಇತಿಹಾಸವನ್ನು ಪುನರ್ ರಚಿಸುವುದು ಅಸಾಧ್ಯ ಎಂದು ಶ್ರೀಧರ್ ಆಚಾರ್ಯುಲು ಹೇಳಿದ್ದಾರೆ.
ಆಕ್ಷೇಪಣೆ ಸಲ್ಲಿಸಬೇಕಿತ್ತು
ತಾಜ್ ಮಹಲ್ ಅನ್ನು ಸಂರಕ್ಷಿತ ಸ್ಮಾರಕವಾಗಿ ಘೋಷಣೆ ಮಾಡುವ ಮುಂಚೆಯೇ ಜನರು ಆಕ್ಷೇಪಣೆ ಸಲ್ಲಿಸಬೇಕಿತ್ತು. ತಾಜ್ ಮಹಲ್ ಅನ್ನು ತೇಜೋ ಮಹಾಲಯ ಎಂದು ಘೋಷಿಸಬೇಕು ಎನ್ನುವವರು ಆಕ್ಷೇಪಣೆ ದಾಖಲಿಸಬೇಕಿತ್ತು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಉತ್ಖನನ ನಡೆಸಿದ್ದರೆ ಮಾಹಿತಿ ನೀಡಿ
ಭಾರತೀಯ ಪುರಾತತ್ವ ಇಲಾಖೆಯು ತಾಜ್ ಮಹಲ್ ಪ್ರದೇಶದಲ್ಲಿ ಉತ್ಖನನ ನಡೆಸಿದ್ದರೆ, ಅದರಲ್ಲಿ ಕಂಡು ಹಿಡಿದಿದ್ದು ಏನು ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.
ಸೂಚನೆ ಸಾಧ್ಯವಿಲ್ಲ
ಉತ್ಖನನ ಮಾಡುವ ನಿರ್ಧಾರವನ್ನು ಸಂಬಂಧಪಟ್ಟ ಪ್ರಾಧಿಕಾರವೇ ತೆಗೆದುಕೊಳ್ಳಬೇಕು. ಮಾಹಿತಿ ಆಯೋಗವು ಉತ್ಖನನಕ್ಕೆ ಅಥವಾ ಮುಚ್ಚಿದ ಕೋಣೆಯೊಳಗೆ ಏನಿದೆ ಎಂದು ತಿಳಿಯಲು ನಿರ್ದೇಶನ ಮಾಡಲಿಕ್ಕೆ ಆಗಲ್ಲ ಎಂದು ಆಚಾರ್ಯುಲು ಹೇಳಿದ್ದಾರೆ.
ತಾಜ್ ಮಹಲ್: ದ ಟ್ರೂಥ್ ಸ್ಟೋರಿ ಪುಸ್ತಕ
ಓಕ್ ಅವರು ಬರೆದಿರುವ "ತಾಜ್ ಮಹಲ್: ದ ಟ್ರೂಥ್ ಸ್ಟೋರಿ" ಎಂಬ ಪುಸ್ತಕದಲ್ಲಿ, ತಾಜ್ ಮಹಲ್ ಮೂಲದಲ್ಲಿ ಶಿವ ದೇವಾಲಯ. ಇದನ್ನು ರಜಪೂತ ರಾಜ ನಿರ್ಮಿಸಿದ್ದು, ಅದನ್ನು ಷಹಜಹಾನ್ ದತ್ತು ತೆಗೆದುಕೊಂಡ ಎಂದು ದಾಖಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಮೊರೆ
ತಮ್ಮನ್ನು ಇತಿಹಾಸ ತಜ್ಞ ಎಂದು ಕೂಡ ಕರೆದುಕೊಳ್ಳುವ ಓಕ್, ಪುಸ್ತಕ ಬರೆದಿರುವುದಷ್ಟೇ ಅಲ್ಲ, ತಾಜ್ ಮಹಲ್ ಅನ್ನು ಶಿವ ದೇವಾಲಯ ಎಂದು ಘೋಷಿಸಲು ಹದಿನೇಳು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್ ವಾಗ್ದಂಡನೆ ಮಾಡಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.