ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ? ಜೈ ಎಂದ ತೇಜಸ್ವಿ ಯಾದವ್!
ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರದಿಂದ ಆರಂಭವಾದ, ಬಿಜೆಪಿ ವಿರೋಧ ಪಕ್ಷಗಳ 'ಸಂಘಟಿತ' ಹೋರಾಟ, ಇತರ ಎಲ್ಲಾ ರಾಜ್ಯಗಳಲ್ಲಿ ಹಬ್ಬುತ್ತಿದ್ದು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೆಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಈ ಬಿಜೆಪಿ ವಿರೋಧಿಗಳ 'ಮಹಾಘಟಬಂಧನ' ಎಷ್ಟು ದಿನಗಳ ಕಾಲ? ಆಯಾ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟುಗಳನ್ನು ಹಂಚಿಕೊಳ್ಳಬೇಕು? ಎಂಬುದರಿಂದ ಹಿಡಿದುಕೊಂಡು, ಒಂದುವೇಳೆ ಬಿಜೆಪಿಯನ್ನೂ ಮೀರಿಸಿ ಹೆಚ್ಚು ಸೀಟುಗಳನ್ನು ಗಳಿಸಿದರೆ, ಮುಂದಿನ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು? ಎಂಬುದರವರೆಗೆ ಪ್ರಶ್ನೆಗಳ ಮಹಾಪೂರವೇ ಎದ್ದಿದೆ.
ಮುಂದಿನ ಪ್ರಧಾನಿ ರಾಹುಲ್? ಸಾಗಿದೆ ಭರದಿಂದ ಸಿದ್ಧತೆ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್, ಎಲ್ಲ ವಿರೋಧ ಪಕ್ಷಗಳು ನನ್ನ ಹಿಂದೆಯೇ ಬನ್ನಿ ಎಂದು ಎಲ್ಲಿಯೂ ಧೈರ್ಯವಾಗಿ ಹೇಳುತ್ತಿಲ್ಲ. ಹಲವಾರು ಚುನಾವಣೆಗಳನ್ನು ಸೋತಿರುವ ಹಿರಿಯ ಪಕ್ಷ, ನಿಮ್ಮೊಡನೆ ನಾವೇ ಕೈಜೋಡಿಸುತ್ತೇವೆ ಎಂದು ಹೇಳುವ ಹಂತಕ್ಕೆ ಬಂದಿದೆ.
ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ
ಏನೇ ಆಗಲಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಸೀತಾರಾಂ ಯಚೂರಿ ಅವರಂಥ ಘಟಾನುಘಟಿಗಳು ಇರುವ ಈ ಸಂಭವನೀಯ 'ಮಹಾಘಟಬಂಧನ'ದಲ್ಲಿ ಸದ್ಯಕ್ಕೆ ಎಲ್ಲರ ಲಕ್ಷ್ಯವೂ ಕಾಂಗ್ರೆಸ್ ಅಧ್ಯಕ್ಷ, 47ರ ಹರೆಯದ ಯುವ ನಾಯಕ ರಾಹುಲ್ ಗಾಂಧಿ ಅವರತ್ತ ಎಲ್ಲರ ಕಣ್ಣು ಹೊರಳಿದೆ.
ರಾಹುಲ್ ಅವರಲ್ಲಿ ಆ ಸಾಮರ್ಥ್ಯ ಇದೆಯಾ?
ಪ್ರಧಾನಿ ಪಟ್ಟದ ಮೇಲೆ ಯಾರೆಷ್ಟೇ ಕಣ್ಣಿಟ್ಟಿರಲಿ ಕಾಂಗ್ರೆಸ್ ಪಕ್ಷ, ಅದರಲ್ಲೂ ಸೋನಿಯಾ ಗಾಂಧಿಯವರು ಈ ಪಟ್ಟವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊರತುಪಡಿಸಿ ಬೇರೆಯವರಿಗೆ ಬಿಟ್ಟುಕೊಡುವುದು ಅನುಮಾನ. ಅವರಿಗೆ ಪ್ರಧಾನಿ ಹುದ್ದೆ ಅಲಂಕರಿಸುವ ಸಾಮರ್ಥ್ಯವಿದೆಯೋ ಇಲ್ಲವೋ, ಎಲ್ಲ ವಿರೋಧ ಪಕ್ಷಗಳ ನಾಯಕರು ಒಮ್ಮತದಿಂದ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುತ್ತಾರೋ ಇಲ್ಲವೋ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ.
ಮಹಾಘಟಬಂಧನಕ್ಕೆ ಸ್ಪಷ್ಟ ಸ್ವರೂಪವೇ ಸಿಕ್ಕಿಲ್ಲ
ಇದರ ಬಗ್ಗೆ ಏನೇ ಚರ್ಚೆಗಳು ನಡೆಯುತ್ತಿದ್ದರೂ, ವಿರೋಧ ಪಕ್ಷಗಳು ಈ ಬಗ್ಗೆ ಯಾವ ನಿರ್ಣಯವನ್ನೂ ಇಲ್ಲಿಯವರೆಗೆ ತೆಗೆದುಕೊಂಡಿಲ್ಲ. ಬಂದಾಗ ನೋಡಿಕೊಂಡರಾಯಿತು ಎಂಬಂತಹ ಧೋರಣೆಯನ್ನು ಅನುಸರಿಸುತ್ತಿವೆ. ಈ ಮಹಾಘಟಬಂಧನಕ್ಕೆ ಇನ್ನೂ ಯಾವ ಸ್ವರೂಪವೂ ಸಿಕ್ಕಿಲ್ಲ. ಸದ್ಯಕ್ಕೆ ವಿರೋಧ ಪಕ್ಷಗಳ ನಾಯಕರ ಕೈಕುಲುಕಾಟಗಳು ಆಗುತ್ತಿವೆಯಷ್ಟೆ. 2019ರ ಏಪ್ರಿಲ್ ಅಥವಾ ಮೇನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ರಾಹುಲ್ ಗಾಂಧಿ ಅವರಿಗೆ ಜೈ
ಹಿರಿಯ ನಾಯಕರೆಲ್ಲ ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಾಯಿಗೆ ಪಟ್ಟಿ ಹಾಕಿಕೊಂಡಿದ್ದರೆ, ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಸಂಯುಕ್ತ ರಂಗದ ಪ್ರಧಾನಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಉತ್ತರ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜೈ ಎಂದು ಹೇಳಿ, ನ್ಯೂಸ್18 ನಡೆಸಿದ ಸಂದರ್ಶನದಲ್ಲಿ ತಮ್ಮ ದಾಳವನ್ನು ಉರುಳಿಸಿದ್ದಾರೆ.
ರಾಹುಲ್ ಪ್ರಧಾನಿಯಾದರೆ ಅಭ್ಯಂತರವಿಲ್ಲ
ಮಾಯಾವತಿ, ಮುಲಾಯಂರಂಥ ದಿಗ್ಗಜರಿದ್ದಾಗ ರಾಹುಲ್ ಹೇಗೆ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎಂಬ ಪ್ರಶ್ನೆಗೆ, ಅವರಿಗೆಲ್ಲ ಪ್ರಧಾನಿಯಾಗುವ ಎಲ್ಲ ಸಾಮರ್ಥ್ಯವೂ ಇದೆ. ಆದರೆ, ನನಗೆ ರಾಹುಲ್ ಪ್ರಧಾನಿಯಾದರೆ ಅಭ್ಯಂತರವಿಲ್ಲ ಎಂದಿರುವ ಅವರು, ನಮ್ಮ ಒಗ್ಗಟ್ಟಿನಿಂದ ಕಂಗೆಟ್ಟಿರುವ ಭಾರತೀಯ ಜನತಾ ಪಕ್ಷದ ನಾಯಕರು ಅನವಶ್ಯಕವಾಗಿ ವಿರೋಧ ಪಕ್ಷಗಳ ಗುಂಪಿನಲ್ಲಿ ನಾಯಕತ್ವದ ಪ್ರಶ್ನೆ ಎತ್ತುತ್ತಿದ್ದಾರೆ ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.
ನಾನು ಪ್ರಧಾನಿಯಾಗಲು ಸಿದ್ಧ ಎಂದಿದ್ದ ರಾಹುಲ್
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರೇ ತಾವು ಪ್ರಧಾನಿಯಾಗಲು ಸಿದ್ಧರಿರುವುದಾಗಿ ಸ್ವಯಂಘೋಷಣೆ ಮಾಡಿಕೊಂಡಿದ್ದರು. ಇದು ಅಪಾರ ಟೀಕೆಗೂ ಗುರಿಯಾಗಿತ್ತು. "ಒಂದು ವೇಳೆ ಕಾಂಗ್ರೆಸ್ ಅತ್ಯಧಿಕ ಸ್ಥಾನ ಪಡೆಯಲು ಯಶಸ್ವಿಯಾದರೆ ಮತ್ತು ಸ್ಪಷ್ಟು ಬಹುಮತ ಪಡೆದರೆ, ನಾನು ಪ್ರಧಾನಿಯಾಗಲು ಸಿದ್ಧವಿದ್ದೇನೆ" ಎಂದು ಹೇಳಿಕೆ ನೀಡಿದ್ದು ದುರಂಕಾರದ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಂಗ್ಯವಾಡಿದ್ದರು.
ರಾಹುಲ್ ಸಾಮರ್ಥ್ಯದ ಬಗ್ಗೆ ಬಿಜೆಪಿ ಪ್ರಶ್ನೆ
ರಾಹುಲ್ ಗಾಂಧಿ ಅವರು ಏನೇ ಹೇಳಿಕೊಳ್ಳಲು, ಅವರು ರಾಜಕೀಯಕ್ಕೆ ಬಲಗಾಲಿಟ್ಟು ಪ್ರವೇಶ ಪಡೆದಾಗಿನಿಂದ, ಉತ್ತರ ಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆ ಸೇರಿ ಹಲವಾರು ರಾಜ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದಾಗಲೆಲ್ಲ, ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಬಿಜೆಪಿ ಪ್ರಶ್ನೆ ಮಾಡುತ್ತಲೇ ಬಂದಿದೆ. ರಾಹುಲ್ ಗಾಂಧಿ ಅವರೊಬ್ಬರಿದ್ದರೆ ಸಾಕು, ಬಿಜೆಪಿ ಗೆಲ್ಲಲು ಬೇರೆಯವರು ಬೇಕಿಲ್ಲ ಎಂದು ಕುಹಕವಾಡಿದೆ.
ಪ್ರಧಾನಿ ಅಭ್ಯರ್ಥಿ ಇನ್ನೂ ಇತ್ಯರ್ಥವಾಗಿಲ್ಲ
ನಾವು ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸೆಣಸುವುದಾಗಿ ಹಲವಾರು ವಿರೋಧ ಪಕ್ಷಗಳು ಘೋಷಣೆ ಮಾಡಿದ್ದರೂ, ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದು ಇತ್ಯರ್ಥವಾಗಲೇಬೇಕಾಗಿದೆ. ಅಲ್ಲದೆ, ಗಣಿತದಲ್ಲಿ ಮೈನಸ್ ಇಂಟು ಮೈನಸ್ ಪ್ಲಸ್ ಆಗುತ್ತದಾದರೂ, ರಾಜಕೀಯದಲ್ಲಿ ಎರಡು ವಿರುದ್ಧ ದಿಕ್ಕುಗಳು ಸೇರಿಸಲು ಹರಸಾಹಸ ಮಾಡಬೇಕಾಗುತ್ತದೆ. ತ್ಯಾಗದ ಜೊತೆಗೆ ಎಲ್ಲ ರಾಜಕೀಯ ತತ್ತ್ವ, ಸಿದ್ಧಾಂತ ಮಣ್ಣು ಮಸಿಗಳನ್ನೆಲ್ಲ ತಿಪ್ಪೆಗೆ ಎಸೆಯಬೇಕಾಗುತ್ತದೆ.
ರಾಹುಲ್ ಇಫ್ತಾರ್ ಕೂಟದಲ್ಲಿ ಬಲಪ್ರದರ್ಶನ
ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಎಲ್ಲ ವಿರೋಧ ಪಕ್ಷಗಳ ನಾಯಕರು ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಕೈಎತ್ತಿದ್ದಾರೆ. ನಂತರ, ಕರ್ನಾಟಕದ ರಾರಾಜಿನಗರ ಮತ್ತು ಜಯನಗರ ಸೇರಿದಂತೆ ನಡೆದ ಚುನಾವಣೆಯಲ್ಲಿಯೂ ತಮ್ಮ ಶಕ್ತಿ ಎಂಥದೆಂದು ತೋರಿಸಿದ್ದಾರೆ. ಎರಡು ದಿನಗಳ ಹಿಂದೆ ರಾಹುಲ್ ಕರೆದಿದ್ದ ಇಫ್ತಾರ್ ಕೂಟದಲ್ಲಿಯೂ ಹಲವಾರು ವಿರೋಧಿಗಳು ಬಂದಿದ್ದರು. ಇದೆಲ್ಲ, ರಾಹುಲ್ ಅವರೇ ವಿರೋಧಿಗಳ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂಬುದಕ್ಕೆ ಸೂಚಕವೆ?