ಮಹಾತ್ಮ ಗಾಂಧೀಜಿ ಮೇಲೆ ಮೋದಿ ತೋರುತ್ತಿರುವ ಪ್ರೀತಿ ಬರೀ ಕಪಟತನದ್ದೇ?
Recommended Video
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಜವಾಹರ್ ಲಾಲ್ ನೆಹರೂ ಅವರಲ್ಲಿ ಗಾಂಧೀಜಿಯನ್ನು ಪ್ರಧಾನಿ ಮೋದಿ, ಅಧಿಕಾರಕ್ಕೆ ಬಂದ ನಂತರ ನೆನಪಿಸಿಕೊಳ್ಳದ ದಿನವೇ ಇಲ್ಲ.
ಕಾಂಗ್ರೆಸ್ಸಿನ ಇತರ ದಿವಂಗತ ಮುಖಂಡರು ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಸರ್ದಾರ್ ಪಟೇಲ್, ಅಂಬೇಡ್ಕರ್ ಮತ್ತು ಸುಭಾಷ್ ಚಂದ್ರ ಭೋಷ್ ಅವರನ್ನೂ ಮೋದಿ ಆವಾಗಾವಾಗ ನೆನಪಿಸಿಕೊಳ್ಳುವುದುಂಟು, ಆದರೆ ಗಾಂಧೀಜಿಯವರ ಆದರ್ಶಗಳನ್ನು ವಿಶೇಷವಾಗಿ ಸ್ಮರಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಚಾರ.
150ನೇ ಗಾಂಧಿ ಜಯಂತಿ, ರಾಷ್ಟ್ರ ನಾಯಕರಿಂದ 'ಸತ್ಯಮೂರ್ತಿ'ಗೆ ಗೌರವ
ಆದರೂ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೋರುತ್ತಿರುವ ಪ್ರೀತಿಯಲ್ಲಿ ನೈಜತೆ ಇಲ್ಲವೇ? ಕಾಂಗ್ರೆಸ್ ಮುಖಂಡರ ಪ್ರಕಾರ, ರಾಷ್ಟ್ರಪಿತನ ಮೇಲೆ ಮೋದಿಯ ಪ್ರೀತಿಯಲ್ಲಿ ಬರೀ ಕಪಟತನವೇ ತುಂಬಿದ್ದು. ಗಾಂಧೀಜಿ ಸೇರಿದಂತೆ, ಸ್ವಾತಂತ್ರ್ಯ ಹೋರಾಟಗಾರರನ್ನು ಮೋದಿ ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದ್ದಾರೆ ಎನ್ನುವುದು ಕಾಂಗ್ರೆಸ್ ಆರೋಪ.
ಅಧಿಕಾರಕ್ಕೆ ಬಂದ ನಂತರ ಗಾಂಧೀಜಿಯವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಉತ್ತೇಜಿಸುವ ಕೆಲಸವನ್ನು ಮೋದಿ ಮಾಡಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ, ಗಾಂಧಿ ಜಯಂತಿಯಂದು ಚಾಲನೆ ಪಡೆದುಕೊಂಡ ಸ್ವಚ್ಚಭಾರತ್ ಅಭಿಯಾನ, ಖಾದಿ ಉದ್ಯೋಗಕ್ಕೆ ಬೆಂಬಲ ಇತ್ಯಾದಿ..
ಸ್ವಚ್ಛತೆಯೇ ಮಹಾತ್ಮಾ ಗಾಂಧಿಗೆ ನೀಡುವ ನಿಜವಾದ ಗೌರವ: ಮೋದಿ
ಜನವರಿ 2016ರಲ್ಲಿ ನಡೆದ ಮನ್ ಕೀ ಬಾತ್ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ, ಖಾದಿ ಮತ್ತು ಹಳ್ಳಿ ಉದ್ಯಮಗಳ ಪುನರುಜ್ಜೀವನಕ್ಕಾಗಿ ವಿಶೇಷ ಒತ್ತು ನೀಡುವ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಇದರಿಂದಾಗಿ, ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಕಮಿಷನ್ (ಕೆವಿಐಸಿ) ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿತ್ತು. ಕಾಂಗ್ರೆಸ್ ಹೇಳೋದು ಏನು...
ರಾಷ್ಟ್ರಪಿತನ 150ನೇ ಜನ್ಮದಿನಾಚರಣೆ
ಈ ಬಾರಿ ಅಂದರೆ 2018ರಲ್ಲಿ ರಾಷ್ಟ್ರಪಿತನ 150ನೇ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುವುದು. ಮುಂದಿನ ಎರಡು ವರ್ಷ, ಗಾಂಧೀಜಿಯವರ ಆದರ್ಶವನ್ನು ವಿಶ್ವಕ್ಕೆ ಮತ್ತೆ ಪರಿಚಯಿಸುವ ಕೆಲಸವನ್ನು ಮಾಡುತ್ತೇವೆ ಮತ್ತು ವಿಶೇಷ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಲಿದ್ದೇವೆ ಎಂದು ಸೆಪ್ಟಂಬರ್ ಮೂವತ್ತರಂದು ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
ಮೋದಿಯವರಿಗೆ ಗಾಂಧೀಜಿ ಮೇಲೆ ಪ್ರೀತಿಯಿಲ್ಲ, ಅದು ಬರೀ ಕಪಟತನದ್ದು
ಕಾಂಗ್ರೆಸ್ ಮುಖಂಡರ ಪ್ರಕಾರ, ಮೋದಿಯವರಿಗೆ ಗಾಂಧೀಜಿ ಮೇಲೆ ಪ್ರೀತಿಯಿಲ್ಲ, ಅದು ಬರೀ ಕಪಟತನದ್ದು. ಗಾಂಧೀಜಿಯವರ ಹೆಸರನ್ನೂ ಸರಿಯಾಗಿ ಉಚ್ಚರಿಸಲು ನಮ್ಮ ಪ್ರಧಾನಿಗೆ ಆಗುತ್ತಿಲ್ಲ. ಮೋಹನ್ ದಾಸ್ ಕರಂಚಂದ್ ಗಾಂಧಿ ಎನ್ನುವ ಬದಲು ಮೋಹನ್ ಲಾಲ್ ಕರಂಚಂದ್ ಗಾಂಧಿ ಎಂದು ಮೋದಿ ಉಚ್ಚರಿಸುತ್ತಾರೆ. ಇಂತವರು, ಗಾಂಧೀಜಿಯವರ ಆದರ್ಶವನ್ನು ಹೇಗೆ ಪಾಲಿಸಿಕೊಂಡು ಬರುತ್ತಾರೆಂದು ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಚತುರ್ವೇದಿ ಟೀಕಿಸಿದ್ದಾರೆ.
ನೆಹರೂ ಕುಟುಂಬ ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿದೆ
ಮೋದಿ ಮತ್ತು ಅಮಿತ್ ಶಾಗೆ ಗಾಂಧೀಜಿಯವರ ಯಾವ ಆದರ್ಶವೂ ಬೇಕಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೆಹರೂ ಕುಟುಂಬ ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವುದರಿಂದ, ಬಿಜೆಪಿಗೆ ಕಾಂಗ್ರೆಸ್ ಅಂದರೆ ಭಯ. ಗಾಂಧೀಜಿ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಭೋಷ್ ಅವರ ಕುಟುಂಬದ ಯಾವನೇ ಒಬ್ಬ ಸದಸ್ಯರು ರಾಜಕೀಯದಲ್ಲಿ ಸದ್ಯ ಇಲ್ಲ. ಇದ್ದಿದ್ದರೆ, ಮೋದಿಯವರ ಕಪಟತನ ಗೊತ್ತಾಗುತ್ತಿತ್ತು ಎಂದು ಇನ್ನೋರ್ವ ಹಿರಿಯ ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ಅಭಿಪ್ರಾಯ ಪಟ್ಟಿದ್ದಾರೆ.
ಮೋದಿಯವರ ಹಿಂಬಾಲಕರು ಮತ್ತು ರಾಷ್ಟ್ರಪಿತನನ್ನು ಕೊಂದವರು
ಮೋದಿ, ಗಾಂಧೀಜಿಯವರ ಅನುಯಾಯಿಯೇ ಅಲ್ಲ. ಗಾಂಧೀಜಿಯವರ ಸಿದ್ದಾಂತಗಳನ್ನು ವಿರೋಧಿಸಿದವರು ಮೋದಿಯವರ ಹಿಂಬಾಲಕರು ಮತ್ತು ರಾಷ್ಟ್ರಪಿತನನ್ನು ಕೊಂದವರು ಯಾವ ಸಂಘಟೆನೆಯವರು ಎನ್ನುವುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಕೇಂದ್ರ ಸರಕಾರ ಯಾವ ಹಾದಿಯಲ್ಲಿ ಸಾಗುತ್ತಿದೆ, ಗಾಂಧೀಜಿ ಬೋಧಿಸಿದ ಸತ್ಯಾ ಮತ್ತು ಅಹಿಂಸೆಯ ದಾರಿಯಲ್ಲಾ ಎಂದು ಪ್ರಿಯಾಂಕ, ಮೋದಿಯವರನ್ನು ಲೇವಡಿ ಮಾಡಿದ್ದಾರೆ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಈ ದೇಶದ ಸ್ವತ್ತು
ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ರಾಷ್ಟ್ರ ನಾಯಕರಿಗೆ ಏನು ಗೌರವ ಸಲ್ಲಬೇಕು ಅದು ಮೋದಿಯವರಿಂದ ಸಿಗುತ್ತಿದೆ. ಕಾಂಗ್ರೆಸ್ಸಿಗೆ ಪ್ರಸ್ತಾವಿಸಲು ವಿಚಾರ ಇಲ್ಲದೇ ಇರುವುದರಿಂದ ಗಾಂಧೀಜಿಯವರ ವಿಷಯವನ್ನು ಕೆದಕುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಈ ದೇಶದ ಸ್ವತ್ತೇ ಹೊರತು, ಯಾವುದೇ ಪಕ್ಷದ ಸ್ವತ್ತಲ್ಲ ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ, ಕಾಂಗೆಸ್ಸಿಗೆ ತಿರುಗೇಟು ನೀಡಿದ್ದಾರೆ.