ಶುಜಾತ್ ಬುಖಾರಿ ಹತ್ಯೆ ಬಗ್ಗೆ ಹೀಗೊಂದು ಆಘಾತಕಾರಿ ಸುಳಿವು
ನವದೆಹಲಿ, ಜೂನ್ 15: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಿನ್ನೆ(ಜೂನ್ 14) ನಡೆದ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದನ್ನು ಗುಪ್ತಚರ ಇಲಾಖೆ ಬಯಲಿಗೆಳೆದಿದೆ.
ಫೆಬ್ರವರಿ ತಿಂಗಳಿನಲ್ಲಿ ಜಮ್ಮು-ಕಾಶ್ಮೀರದ ಆಸ್ಪತ್ರೆಯೊಂದರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಪರಾರಿಯಾಗಿದ್ದ ನವೀದ್ ಜಾತ್ ಎಂಬ ಭಯೋತ್ಪಾದಕನೇ ಈ ಕೃತ್ಯ ಎಸಗಿದ್ದು ಎಂಬ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದ್ದು, ಅದಕ್ಕೆ ಸಾಕ್ಷ್ಯ ಸಿದ್ಧಪಡಿಸುತ್ತಿದೆ.
ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?
ಸೆರೆಯಲ್ಲಿದ್ದ ನವೀದ್ ನನ್ನು ಅನಾರೋಗ್ಯದ ಕಾರಣ ಫೆಬ್ರವರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ನವೀದ್ ಪರಾರಿಯಾಗಿದ್ದ. ಇದೀಗ ಶುಜಾತ್ ಹತ್ಯೆ ಮಾಡಿದ ಮೂವರು ದುಷ್ಕರ್ಮಿಗಳಲ್ಲಿ ನವೀದ್ ಸಹ ಇದ್ದ ಎಂಬ ಅನುಮಾನ ವ್ಯಕ್ತವಾಗಿದ್ದು, ಸಿಸಿಟಿವಿ ಫೂಟೇಜ್ ನಲ್ಲಿ ದುಷ್ಕರ್ಮಿಗಳ ಮುಖ ಸರಿಯಾಗಿ ಕಾಣಿಸುತ್ತಿಲ್ಲ.
ಜೂನ್ 14 ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ 'ರೈಸಿಂಗ್ ಕಾಶ್ಮೀರ್' ದಿನಪತ್ರಿಕೆಯ ಕಚೇರಿ ಎದುರಲ್ಲೇ, ಈ ಪತ್ರಿಕೆಯ ಸಂಪಾದಕ ಶುಜಾತ್ ಹತ್ಯೆಯಾಗಿತ್ತು. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.