ಚೀನಾ ವಿರುದ್ಧ ಯುದ್ಧಕ್ಕೆ ಸಿದ್ಧವಾಯಿತಾ ಭಾರತ: ಇಲ್ಲಿದೆ ಕಾರಣ!
ನವದೆಹಲಿ, ಅಕ್ಟೋಬರ್,01: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಉಭಯ ರಾಷ್ಟ್ರಗಳು ಯುದ್ಧಕ್ಕೆ ಸನ್ನದ್ಧವಾಗುತ್ತಿವೆಯೇ ಎಂಬ ಅನುಮಾನಗಳು ದಟ್ಟವಾಗುತ್ತಿದೆ.
ಆಗಸ್ಟ್.31ರಂದು ಭಾರತ-ಚೀನಾ ನಡುವೆ ನಡೆದ ಸಂಘರ್ಷದ ನಂತರ ಕಳೆದ ಸಪ್ಟೆಂಬರ್.21ರಂದು ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸೇನಾ ಕಮಾಂಡರ್ ಹಂತದ 6ನೇ ಸಭೆ ನಡೆಸಲಾಯಿತು. ಶಾಂತಿ ಕಾಪಾಡಿಕೊಳ್ಳುವುದು, ತಪ್ಪು ಗ್ರಹಿಕೆಗೆ ಅವಕಾಶ ನೀಡದಿರಲು, ಗಡಿ ಪ್ರದೇಶಕ್ಕೆ ಹೆಚ್ಚಿನ ಸೇನೆ ರವಾನಿಸದಿರುವುದು, ಮತ್ತು ಗಡಿಯಲ್ಲಿ ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು.
ಭಾರತ-ಚೀನಾ ಸಂಘರ್ಷದ ಮಧ್ಯೆ ಚಳಿಗಾಲದ ಭದ್ರತೆಗೆ ಸೇನೆ ಸನ್ನದ್ಧ
ಉಭಯ ರಾಷ್ಟ್ರಗಳ ಗಡಿಯಲ್ಲಿ ಏಪ್ರಿಲ್ ತಿಂಗಳಾಂತ್ಯದ ಸಂದರ್ಭದಲ್ಲಿದ್ದ ಸನ್ನಿವೇಶವನ್ನು ಪುನರ್ ನಿರ್ಮಿಸಬೇಕಿದ್ದು, ಈ ನಿಟ್ಟಿನಲ್ಲಿ ನಿಯೋಜನೆಗೊಂಡಿರುವ ಹೆಚ್ಚುವರಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ತೀವ್ರ ಚರ್ಚೆಗಳು ನಡೆದಿದ್ದವು.
ಗಡಿಯಲ್ಲಿ ಚೀನಾ ಸೇನೆ ಮೊಂಡತನ ಪ್ರದರ್ಶನ
ಅಂತಾರಾಷ್ಟ್ರೀಯ ಗಡಿ ರೇಖೆಗೆ ಹೊಂದಿಕೊಂಡಿರುವ ಐದರಿಂದ ಆರು ಎತ್ತರದ ಪ್ರದೇಶಗಳನ್ನು ಭಾರತೀಯ ಸೇನೆ ಹಿಡಿತಕ್ಕೆ ತೆಗೆದುಕೊಂಡಿದೆ. ಮೊದಲು ಭಾರತೀಯ ಸೇನೆ ಆ ಪ್ರದೇಶಗಳಿಂದ ವಾಪಸ್ ಹೋಗಬೇಕು. ಆ ಬಳಿಕವಷ್ಟೇ ಪೀಪಲ್ಸ್ ಲಿಬರೇಷನ್ ಆರ್ಮಿ ವಶಪಡಿಸಿಕೊಂಡಿರುವ ಪ್ರದೇಶಗಳಿಂದ ಹಿಂದೆ ಸರಿಯುವ ಬಗ್ಗೆ ಆಲೋಚಿಸಲಿದೆ ಎಂದು ಚೀನಾ ವಾದಿಸುತ್ತಿದೆ. ಈ ಬಗ್ಗೆ ಭಾರತೀಯ ಸೇನೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಗಡಿಯಲ್ಲಿ ಕಾಲ್ಕೆರೆದು ನಿಂತ ಚೀನಾ ಸೇನೆಗೆ ತಿರುಗೇಟು
ಆಗಸ್ಟ್.30ರ ಸಂದರ್ಭದಲ್ಲಿ ಲಡಾಖ್ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದ ಮೇಲೆ ಹಿಡಿತ ಸಾಧಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮುಂದಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ರೈಲಾಶ್ ರೇಂಜ್ ನಲ್ಲಿನ ಪ್ರದೇಶಗಳನ್ನು ವಶಕ್ಕೆ ಪಡೆದುಕೊಂಡಿತು. ಕೈಲಾಶ್ ಶ್ರೇಣಿಗಳಲ್ಲಿ ಉತ್ತರದಿಂದ ದಕ್ಷಿಣಕ್ಕೆ ಎಳೆಯಲಾಗುತ್ತಿದ್ದು, ಪಾಯಿಂಟ್ 5167, ಬಂಪ್, ಮಗರ್ ಹಿಲ್, ರೆಜಾಂಗ್ ಲಾ, ರೆಚಿಂಗ್ ಲಾ ಮತ್ತು ಮುಖ್ಪಾರಿ ಪ್ರದೇಶಗಳೂ ಸೇರಿವೆ. ಪ್ಯಾಂಗಾಂಗ್ ತ್ಸೋ ಸರೋವರದ ಗಡಿಯುದ್ದಕ್ಕೂ ಚೀನಾ ಸೇನೆಯ ಚಟುವಟಿಕೆಗಳ ಮೇಲೆ ಭಾರತೀಯ ಸೇನೆಯು ಲಕ್ಷ್ಯ ವಹಿಸಿದೆ. ಹೆಲ್ಮಟ್ ಮತ್ತು ಬ್ಲ್ಯಾಕ್ ಟಾಪ್ ಸೇರಿದಂತೆ ಸ್ಪಂಗರ್ ಗ್ಯಾಪ್ ನಲ್ಲಿ ಚೀನಾ ಚಟುವಟಿಕೆಗಳ ಮೇಲೆ ಗಮನ ಹರಿಸಲಾಗುತ್ತಿದೆ.
ಭಾರತ-ಚೀನಾ ಸೇನಾಧಿಕಾರಿಗಳ 6ನೇ ಹಂತದ ಸಭೆ
ಸಪ್ಟೆಂಬರ್.21ರ ಸೋಮವಾರ ಭಾರತ-ಚೀನಾ ರಾಷ್ಟ್ರಗಳ ಕಾರ್ಪ್ ಕಮಾಂಡರ್ ಹಂತದ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಈ ವೇಳೆ ಮೊದಲ ಬಾರಿಗೆ ಉನ್ನತ ಮಟ್ಟದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಭಾರತೀಯ ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರು ಭಾಗಿಯಾಗಿದ್ದರು. ಭಾರತದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾದ ಪ್ರತಿನಿಧಿಯಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯ ಮೇಜರ್ ಜನರಲ್ ಲಿನ್ ಲಿಯು ಸಭೆಯಲ್ಲಿ ಭಾಗಿಯಾಗಿ ಚರ್ಚಿಸಿದ್ದರು. ಇದರ ಜೊತೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್, ಮೇಜರ್ ಜನರಲ್ ಅಭಿಜಿತ್ ಬಾಪತ್ ಮತ್ತು ಮೇಜರ್ ಜನರಲ್ ಪದಮ್ ಶೆಖಾವತ್ ರನ್ನೊಳಗೊಂಡ ನಿಯೋಗ ಕೂಡಾ ಸಭೆಯಲ್ಲಿ ಭಾಗಿಯಾಗಿದ್ದರು.
6ನೇ ಕಾರ್ಪ್ ಕಮಾಂಡರ್ ಸಭೆಯ ನಿರ್ಧಾರ
- ಮಾಲ್ಡೋ ಪ್ರದೇಶದಲ್ಲಿ ನಡೆದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಚೀನಾ ತನ್ನ ಹಠವನ್ನು ಮುಂದುವರಿಸಿತ್ತು. ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರಾಕರಿಸಿತ್ತು.
- ಏಪ್ರಿಲ್-2020ಕ್ಕೂ ಮೊದಲು ಗಡಿಯಲ್ಲಿದ್ದ ಸ್ಥಿತಿಯನ್ನೇ ಯಥಾವತ್ತಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರತವು ಪ್ರಸ್ತಾಪಿಸಿತು. ಅದರ ಪ್ರಕಾರ 2020ರ ಏಪ್ರಿಲ್ ಗೂ ಮೊದಲು ಚೀನಾದ ಸೈನಿಕರು ಗಡಿಯ ಯಾವ ಪ್ರದೇಶದಲ್ಲಿದ್ದರೋ ಅದೇ ಪ್ರದೇಶಕ್ಕೆ ವಾಪಸ್ ತೆರಳುವುದು ಭಾರತದ ಆಗ್ರಹವಾಗಿತ್ತು.
- ಭಾರತದ ನಿಯೋಗದಲ್ಲಿ ಲೆಫ್ಟಿನೆಂಟ್ ಗವರ್ನರ್ ಪಿಜಿಕೆ ಮೆನನ್ ಕೂಡಾ ಭಾಗಿಯಾಗಿದ್ದರು. ಏಕೆಂದರೆ ಆಕ್ಟೋಬರ್ ತಿಂಗಳಿನಲ್ಲಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನಿವೃತ್ತರಾಗಲಿದ್ದು, ಅವರಿಂದ ಮೆನನ್ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ.
- ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್, ಮೇಜರ್ ಜನರಲ್ ಅಭಿಜಿತ್ ಬಾಪತ್ ಮತ್ತು ಮೇಜರ್ ಜನರಲ್ ಪದಮ್ ಶೆಖಾವತ್ ರನ್ನೊಳಗೊಂಡ ನಿಯೋಗವು ಕೂಡಾ ಸಭೆಯಲ್ಲಿ ಭಾಗಿಯಾಗಿತ್ತು.
ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ
ಕಳೆದ ಸಪ್ಟೆಂಬರ್.19ರಂದು ಮಾಸ್ಕೋದಲ್ಲಿ ನಡೆದ ಎಸ್ ಸಿಓ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಚರ್ಚೆ ನಡೆಸಿದ್ದರು. ಅಂದು ಉಭಯ ಸೇನೆಗಳ ನಡುವೆ ಅಂತರ ಕಾಯ್ದುಕೊಳ್ಳುವುದು. ಗಡಿಯಲ್ಲಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವುದರ ಬಗ್ಗೆ ಚರ್ಚಿಸಲಾಗಿತ್ತು. ಇದಾದ ನಂತರದಲ್ಲೂ ಚಳಿಗಾಲಕ್ಕೆ ಅಗತ್ಯವಾಗಿರುವ ಹೆಚ್ಚುವರಿ ಸೇನೆಯನ್ನು ಉಭಯ ರಾಷ್ಟ್ರಗಳು ಗಡಿ ನಿಯಂತ್ರಣ ರೇಖೆ ಪ್ರದೇಶಕ್ಕೆ ರವಾನಿಸಿರುವುದು ಸಾಕಷ್ಟು ಸದ್ದು ಮಾಡಿದೆ.
ಉಭಯ ಸೇನಾ ಗಡಿಯಲ್ಲಿ 50,000 ಸೇನೆ
ಚಳಿಗಾಲ ಸಂದರ್ಭದಲ್ಲಿ ಭಾರತ-ಚೀನಾ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಸೇನೆ ನಿಯೋಜನೆಗೆ ಎರಡೂ ಕಡೆಗಳಲ್ಲಿ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಎರಡು ಭಾಗಗಳಲ್ಲೂ ಕನಿಷ್ಠ 50,000 ಯೋಧರನ್ನು ಗಡಿಯಲ್ಲಿ ನಿಯೋಜಿಸಲು ಉಭಯ ಸೇನೆಗಳು ಸಿದ್ಧವಾಗಿವೆ. ವಾಸ್ತವಿಕ ಗಡಿ ರೇಖೆಯ ಉದ್ದಕ್ಕೂ ಚಳಿಗಾಲದಲ್ಲೂ ಸೇನಾ ಪ್ರಮಾಣ ಹೆಚ್ಚಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಚಳಿಗಾಲ ಆರಂಭಕ್ಕೂ ಮೊದಲೇ ಗಡಿಯಲ್ಲಿ ಉದ್ವಿಗ್ನತೆ ನಿವಾರಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸಲಾಯಿತು. ಆದರೆ ಮೇಲಿಂದ ಮೇಲೆ ನಡೆಸಿದ ಈ ಸಾಲು ಸಾಲು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.
ಯಾವ ಗಡಿಯಲ್ಲಿ ಎಷ್ಟು ಸೇನೆ ನಿಯೋಜನೆ?
ಉತ್ತರದ ದೆಪ್ಸಾಂಗ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಭಾರತೀಯ ಸೇನೆಯ 5000 ಯೋಧರು ಮತ್ತು ಚೀನಾ ಕಡೆಯಲ್ಲಿ 5000 ಶಸ್ತ್ರಸಜ್ಜಿತ ಸೇನೆ ಮತ್ತು ಟ್ಯಾಂಕರ್ ಗಳು ನಿಯೋಜನೆ ಆಗಿರುವ ಬಗ್ಗೆ ಸೇನೆಯು ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಗಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ 8,000 ರಿಂದ 9,000 ಭಾರತೀಯ ಸೇನಾ ಯೋಧರನ್ನು ಗಡಿ ಪ್ರದೇಶದ ಪೆಟ್ರೋಲಿಂಗ್ ಪಾಯಿಂಟ್-14, ಪೆಟ್ರೋಲಿಂಗ್ ಪಾಯಿಂಟ್-15, ಪೆಟ್ರೋಲಿಂಗ್ ಪಾಯಿಂಟ್-17 ಮತ್ತು ಪೆಟ್ರೋಲಿಂಗ್ ಪಾಯಿಂಟ್-17ಎ ನಲ್ಲಿ ನಿಯೋಜಿಸಲಾಗಿದೆ. ಇನ್ನೊಂದು ಕಡೆ ಪೆಟ್ರೋಲಿಂಗ್ ಪಾಯಿಂಟ್-18 ರಿಂದ ಪೆಟ್ರೋಲಿಂಗ್ ಪಾಯಿಂಟ್-23ರವರೆಗೂ 2,000 ರಿಂದ 3,000 ಚೀನಾ ಯೋಧರನ್ನು ನಿಯೋಜಿಸಿದೆ.
ಉತ್ತರ ಮತ್ತು ದಕ್ಷಿಣ ಗಡಿಯಲ್ಲಿ ಸೇನೆ
ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗಕ್ಕೆ ಹೊಂದಿಕೊಂಡಿರುವ ಅನೆ ಲಾ ಪ್ರದೇಶದಿಂದ 8 ಕಿಲೋ ಮೀಟರ್ ದೂರದಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ. ಲಡಾಖ್ ನಲ್ಲಿ ಭಾರತೀಯ ಸೇನೆಯನ್ನು ಎದುರಿಸಲು ನಾರ್ತ್ ಬ್ಯಾಂಕ್ ನಲ್ಲಿ 2500 ಮತ್ತು ಸೌತ್ ಬ್ಯಾಂಕ್ ನಲ್ಲಿ 10000 ಯೋಧರನ್ನು ನಿಯೋಜಿಸಲಾಗಿದೆ. ಸ್ಪಾಂಗರ್ ಲೇಕ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ 250 ಟ್ಯಾಂಕ್ ಮತ್ತು ಶಸ್ತ್ರಸಜ್ಜಿತ ವಾಹನ ನಿಯೋಜಿಸಲಾಗಿದೆ.